ಸೂತ್ರವಿಲ್ಲದ ಗಾಳಿಪಟದಂತಹ ಸರ್ಕಾರ ಎಂಬುದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಹಲವು ಬಾರಿ ಸಾಬೀತಾಗಿದೆ. ಮಂತ್ರಿಗಳು ತಾವೇ ಮುಖ್ಯಮಂತ್ರಿ ಎಂಬಂತೆ, ಯತೀಂದ್ರ ತಾವೇ ಶ್ಯಾಡೋ ಸಿಎಂ ಎಂಬಂತೆ ಮಾತಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟ್ಟರ್)ನಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, “ಜನಪ್ರತಿನಿಧಿಗಳಂತೆ ವರ್ತಿಸಬೇಕಾದ ಸಚಿವರು ಜನರ ಮಾತು ಕೇಳುವುದು ಬದಿಗಿರಲಿ, ಅವರದೇ ಪಕ್ಷದ ಶಾಸಕರ ಮಾತೇ ಕೇಳುತ್ತಿಲ್ಲ” ಎಂದು ಆರೋಪಿಸಿದೆ.
“ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅಶಾಂತಿ ಸೃಷ್ಟಿಯಾಗಿದೆ” ಎಂದು ಕಿಡಿಕಾರಿದೆ.
“100 ದಿನಗಳ ಅವಧಿಯಲ್ಲಿ 108 ಕರ್ಮಕಾಂಡಗಳೇ ಕಾಣುತ್ತಿವೆ. ಬೆಲೆ ಏರಿಕೆ, ವರ್ಗಾವಣೆ ದಂಧೆ, ಕಲೆಕ್ಷನ್, ಕಮಿಷನ್, ಕಾಸಿಗಾಗಿ ಪೋಸ್ಟಿಂಗ್, ಶ್ಯಾಡೋ ಸಿಎಂ, ಮರಳು ಮಾಫಿಯಾ, ರೈತರ ಆತ್ಮಹತ್ಯೆ, ಪೊಲೀಸರ ಹತ್ಯೆ, ಹಿಂದೂ ಕಾರ್ಯಕರ್ತರ ಹತ್ಯೆ, ಕಲುಷಿತ ನೀರು, ಕಳಪೆ ಆಹಾರ, ಕಾವೇರಿ ನೀರಿಗೆ ದ್ರೋಹ, ನಾಡ ವಿರೋಧಿ ನಿಲುವುಗಳೇ ತುಂಬಿ ತುಳುಕುತ್ತಿವೆ” ಎಂದು ಹರಿಹಾಯ್ದಿದೆ.