ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಗ್ರಾಮದಲ್ಲಿ ಮತ್ತೆ ಹುಲಿ ಹೆಜ್ಜೆಗುರುತು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹನಗೋಡು ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್ ಆರ್ ರಮೇಶ್ಗೆ ಸೇರಿದ ತೋಟದಲ್ಲಿ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿದ್ದ ಹುಲಿಯ ಹೆಜ್ಜೆಗುರುತು ಪತ್ತೆಯಾಗಿದೆ. ಹುಲಿಯು ಕಾಡು ಹಂದಿಯೊಂದಿಗೆ ಕಾದಾಡಿ ಬೇಟೆ ಮಾಡಿರುವ ಕುರುಹು ಸ್ಥಳದಲ್ಲಿದೆ.
“ಲಕ್ಷ್ಮಣತೀರ್ಥ ನದಿಯ ಏರಿಯಲ್ಲಿ ಸಾಕಷ್ಟು ಪೊದೆಗಳಿವೆ. ಸಾಕಷ್ಟು ಗಿಡ-ಗಂಟಿಗಳು ಬೆಳೆದಿದ್ದು, ಇದು ಹುಲಿ-ಚಿರತೆ ವಾಸಕ್ಕೆ ಪ್ರಶಸ್ತ ಸ್ಥಳವಾಗಿದೆ. ಹಾಗಾಗಿ ಇದನ್ನು ತೆರವುಗೊಳಿಸಬೇಕು” ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
“ಕಳೆದ ಎರಡು ವರ್ಷಗಳಿಂದ ಹನಗೋಡಿನ ಸುಮಾರು 10 ಕಿ ಮೀ ಸುತ್ತ ಮುತ್ತಲಲ್ಲಿ ಹುಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ, ಹತ್ತಾರು ಜಾನುವಾರುಗಳನ್ನು ಬಲಿ ಪಡೆದಿದೆ. ಕಳೆದ ಆರು ತಿಂಗಳ ಹಿಂದೆ ಒಮ್ಮೆಲೆ ಎರಡು ಹಸುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಘಟನೆ ವೇಳೆ ಶೆಟ್ಟಳ್ಳಿ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿದ್ದರೂ ಹುಲಿ ಪತ್ತೆಯಾಗಿರಲಿಲ್ಲ. ಆದರೂ ಆಗಾಗ್ಗೆ ಅಲ್ಲಲ್ಲಿ ತನ್ನ ಹೆಜ್ಜೆಗುರುತುಗಳೊಂದಿಗೆ ಕಾಣಿಸಿಕೊಂಡು ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಲೇ ಇದೆ” ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
“ಹುಲಿ ಇರುವುದರಿಂದ ಗ್ರಾಮಸ್ಥರು ಜಮೀನಿಗೆ ತೆರಳಲು ಹೆದರುವಂತಾಗಿದೆ. ಹೇಗಾದರೂ ಸರಿ ಯಾವುದೇ ಪ್ರಾಣ ಹಾನಿಯುಂಟಾಗುವ ಮೊದಲೇ ಮುನ್ನೆಚ್ಚರಿಕೆಯಾಗಿ ಹುಲಿಯನ್ನು ಸೆರೆ ಹಿಡಿಯಬೇಕು” ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಹೆಜ್ಜೆ ಕಾಣಿಸಿಕೊಂಡಿರುವ ಸುತ್ತ ಕೂಂಬಿಂಗ್ ನಡೆಸಲಾಗುವುದು ಹಾಗೂ ಕ್ಯಾಮರಾ ಅಳವಡಿಸಿ ಹುಲಿ ಪತ್ತೆಗೆ ಕ್ರಮವಹಿಸುವುದಾಗಿ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಸೀಮಾ, ವಲಯ ಅರಣ್ಯಾಧಿಕಾರಿ ನಂದಕುಮಾರ್ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ನಾಲ್ಕು ವರ್ಷದ ಪದವಿ ಹೇರಿಕೆ ಎಐಡಿಎಸ್ಒ ಖಂಡನೆ
ಡಿಆರ್ಎಫ್ಒ ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ಇದೀಗ ಹುಲಿ ಹೆಜ್ಜೆ ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕ್ಯಾಮರಾ ಅಳವಡಿಸಿದ್ದಾರೆ.