ಚಿಕಿತ್ಸೆ ನೀಡಲು 12 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಆರೋಪದ ಮೇಲೆ ಮೈಸೂರಿನ ಸರ್ಕಾರಿ ವೈದ್ಯೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಜೆ ಶಿಲ್ಪಾ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಸೂರಿನ ಚೆಲುವಾಂಬ ಆಸ್ಪತ್ರೆಯ ವೈದ್ಯೆ ಡಾ. ಚೈತ್ರಾ ಸೇರಿದಂತೆ ಆಸ್ಪತ್ರೆಯ ಮೂವರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು ಮೂಲದ ಬಾಲಕಿಗೆ ಶ್ವಾಸಕೋಶ ಹಾಗೂ ಉಸಿರಾಟ ಸಮಸ್ಯೆ ಇತ್ತು. ಆಕೆಯನ್ನು ಆಕೆಯ ಪೋಷಕರು ಅಕ್ಟೋಬರ್ 26ರಂದು ಚೆಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಾಲಕಿಯ ಊರಿನವರೇ ಆದ ನ್ಯಾಯಾಧೀಶೆ ಶಿಲ್ಪಾ ಅವರೂ ಕೂಡ ಆಕೆಯ ಜೊತೆಗೆ ಆಸ್ಪತ್ರೆಗೆ ತೆರಳಿದ್ದರು. ಆದರೆ, ರಾತ್ರಿ ಪಾಳಿಯಲ್ಲಿದ್ದ ವೈದ್ಯೆ ಚೈತ್ರಾ ಅವರು ಬೆಡ್ ಖಾಲಿ ಇಲ್ಲವೆಂದು ಹೇಳಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ.
ಆದರೆ, ಖಾಸಗಿ ಆಸ್ಪತ್ರೆಯಲ್ಲಿ ದಿನಕ್ಕೆ ಸುಮಾರು 30,000 ರೂ. ವ್ಯಯಿಸಬೇಕಾಗುತ್ತದೆ ಎಂದು ತಿಳಿದು, ಮತ್ತೆ ಮರಳಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ನ್ಯಾಯಾಧೀಶೆ ಶಿಲ್ಪಾ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ ಬಾಲಕಿಯನ್ನು ವೈದ್ಯರು ದಾಖಲಿಸಿಕೊಂಡಿದ್ದರು. ಆದರೆ, ಚಿಕಿತ್ಸೆ ಫಲಿಸದೇ ನವೆಂಬರ್ 4ರಂದು ಬಾಲಕಿ ಮೃತಪಟ್ಟಿದ್ದಳು.
ಆಕೆಯ ಸಾವಿಗೆ ಸಕಾಲಕ್ಕೆ ಚಿಕಿತ್ಸೆ ನೀಡದ ವೈದ್ಯರ ನಿರ್ಲಕ್ಷ್ಯವೂ ಕಾರಣವೆಂದು ನ್ಯಾಯಾಧೀಶೆ ಶೆಲ್ಪಾ ಅವರು ವೈದ್ಯೆ ಡಾ. ಚೈತ್ರಾ ಮತ್ತು ಇಬ್ಬರು ವಿರುದ್ಧ ದೇವರಾಜ ಪೊಲೀಸ್ ಠಾಣೆ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ನ್ಯಾಯಾಧೀಶರು ನೀಡಿದ ದೂರಿನ ಆಧಾರದ ಮೇಲೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಾಗಿದೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.