- ಕಾಂಗ್ರೆಸ್ ಮಾತುಗಳನ್ನೇ ನಾನು ಸವಾಲಾಗಿ ಸ್ವೀಕರಿಸುವೆ
- ಕಾಂಗ್ರೆಸ್ ಗ್ಯಾರಂಟಿ ಕೊಡದಿದ್ದರೆ ಬೀದಿಗೆ ಇಳಿಯುವೆ
ಕಾಂಗ್ರೆಸ್ ತರ ಬೂಟಾಟಿಕೆ ನಮಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಕರೆದಿದ್ದಾರೆ. ನಮ್ಮ ಪಕ್ಷ ಆ ಸಮಾರಂಭದಲ್ಲಿ ಭಾಗಿಯಾಗಲಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ರಾಷ್ಟ್ರಪತಿಗಳಿಂದ ಉದ್ಘಾಟನೆಯಾಗಬೇಕು ಎನ್ನುವ ಕಾಂಗ್ರೆಸ್, ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಏಕೆ ಕಣಕ್ಕೆ ಇಳಿಸಬೇಕಿತ್ತು. ಇದೇ ತಿಳಿಯುತ್ತೆ, ಆದಿವಾಸಿ ಮಹಿಳೆ ಎನ್ನುವ ಗೌರವ ಕಾಂಗ್ರೆಸ್ಗೆ ಇರಲಿಲ್ಲ ಎನ್ನುವುದು. ಈಗ ಬೂಟಾಟಿಕೆ ಮಾತುಗಳನ್ನು ಕಾಂಗ್ರೆಸ್ ಹೇಳುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
“ಸೆಂಟ್ರಲ್ ವಿಸ್ತಾ ಉದ್ಘಾಟನೆಯಲ್ಲಿ ನಾವು ಭಾಗಿಯಾಗುವುದರಿಂದ ಬಿಜೆಪಿ ಬಗ್ಗೆ ಮೃಧು ಧೋರಣೆ ಇದೆ ಎಂದು ಭಾವಿಸಬೇಕಿಲ್ಲ. ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ” ಎಂದರು.
“ನಿನ್ನೆಯ ಸಭೆಯಲ್ಲಿ ಸೋತ ಮತ್ತು ಗೆದ್ದ ಅಭ್ಯರ್ಥಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಾವು ಸಿದ್ಧರಾಗುತ್ತಿದ್ದೇವೆ. ಹಿನ್ನಡೆಯಾಗಿದೆ ಎಂದು ಹೆದರಿಕೊಂಡು ಸುಮ್ಮನೆ ಕೂರುವ ಜಾಯಮಾನ ನಮ್ಮದಲ್ಲ” ಎಂದು ಹೇಳಿದರು.
“ಕಾಂಗ್ರೆಸ್ ಗುರುವಾರ ಟ್ವೀಟ್ ಮಾಡಿ ʼಜೆಡಿಎಸ್ ಯಾವಾಗ ವಿಸರ್ಜಿಸುತ್ತೀರಿ ಎಂದು ಪ್ರಶ್ನಿಸಿದೆʼ. ಇದು ದುರಹಂಕಾರದ ನಡೆ. 1994ರಲ್ಲಿ 38 ಸ್ಥಾನ ಪಡೆದಿದ್ದ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಿದ್ರಾ? ನಿಮ್ಮನ್ನು ಕೇಳಿ ಅಂತ್ಯಸಂಸ್ಕಾರ ಮಾಡಲ್ಲ. ನಮಗೆ ಪಕ್ಷವನ್ನ ಯಾವ ರೀತಿ ಉಳಿಸಿಕೊಳ್ಳಬೇಕು ಎನ್ನುವ ಬಗ್ಗೆ ಅರಿವಿದೆ. ನಿಮ್ಮ ಮಾತುಗಳನ್ನೇ ನಾನು ಸವಾಲಾಗಿ ಸ್ವೀಕರಿಸುವೆ” ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? ಸಚಿವ ಸಂಪುಟ ವಿಸ್ತರಣೆ | ಸೋನಿಯಾ ಗಾಂಧಿ-ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ
“ಮಿಸ್ಟರ್ ಸಿದ್ದರಾಮಯ್ಯ ಅವರೇ, ನಿಮ್ಮ ಬುದ್ಧಿವಂತಿಕೆ ರಾಜಕಾರಣ ಬಹಳ ದಿನ ನಡೆಯಲ್ಲ. ನಿಮ್ಮ ಯೋಗ್ಯತೆಗೆ ಇನ್ನೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗಿಲ್ಲ. ಯಾವ ರೀತಿ ಲೆಕ್ಕ ಹಾಕಿದರೂ ಈ ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್ನಿಂದ ಸಾಧ್ಯವಿಲ್ಲ. ನಾನಂತೂ ಬೀದಿಗೆ ಇಳಿಯುವೆ. ಬಿಜೆಪಿ ನಾಯಕರಿಗೆ ತನಿಖೆ ಹೆಸರನ್ನು ಮುಂದಿಟ್ಟು ಗುಮ್ಮ ಗುಮ್ಮ ಎಂದು ಹೆದರಿಸಬಹುದು. ಆದರೆ ಕುಮಾರಸ್ವಾಮಿ ಹೆದರಿಸಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.
“42 ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ಗಳ ಕೂಪನ್ ಅನ್ನು ಪ್ರತಿ ಕ್ಷೇತ್ರದಲ್ಲಿ 60 ಸಾವಿರ ಹಂಚಿದ್ದಾರೆ. ಪಾರದರ್ಶಕ ಚುನಾವಣೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಲಿ. ಪ್ರತಿ ಕೂಪನ್ ನಲ್ಲೂ 3000-5000 ವರೆಗೂ ಗಿಫ್ಟ್ ಕೊಡುತ್ತೇವೆ ಎಂದು ಮತದಾರರಿಗೆ ಆಮಿಷವೊಡ್ಡಿದ್ದರಿಂದ ನಾವು ಸೋತಿದ್ದೇವೆ” ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ದೂರು ಕೊಡಬಹುದಲ್ಲಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಚುನಾವಣೆ ಆಯೋಗಕ್ಕೆ ದೂರು ಕೊಡುವುದರಿಂದ ಪ್ರಯೋಜನವಿಲ್ಲ. ಎಲ್ಲ ಪಕ್ಷಗಳು ದುಡ್ಡು ಹಂಚಿವೆ. ನಾವೂ ಹಂಚಿದ್ದೇವೆ. ನಮಗೀಗ ಅರಿವಾಗಿದೆ, ಮುಂದಿನ ಬಾರಿ ದುಡ್ಡಿಲ್ಲದೇ ಚುನಾವಣೆಗೆ ಹೋಗುತ್ತೇವೆ” ಎಂದರು.