- ಬಿಜೆಪಿ ಅಭ್ಯರ್ಥಿ ರೌಡಿ ಶೀಟರ್ ಮಣಿಕಂಠ ರಾಠೋಡ ವಿರುದ್ದ ಗೆಲವು
- ಚಿತ್ತಾಪುರ ಕ್ಷೇತ್ರದ ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಹೇಳಿದ ಖರ್ಗೆ
ರಾಜ್ಯದ ಗಮನಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ವಿರುದ್ಧ ಪ್ರಿಯಾಂಕ್ ಖರ್ಗೆ ಗೆಲುವು ಸಾಧಿಸಿದ್ದಾರೆ. ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಹಾಲಿ ಶಾಸಕ ಪ್ರಯಾಂಕ್ ಖರ್ಗೆ ಅವರನ್ನು ಸೋಲಿಸಲು ತಂತ್ರ ಹೆಣೆದಿದ್ದ ಬಿಜೆಪಿ, ಬರೋಬ್ಬರಿ 40 ಕೇಸುಗಳನ್ನು ಹೊಂದಿದ್ದ ರೌಡಿ ಶೀಟರ್ ಮಣಿಕಂಠ ರಾಡೋಡ್ಗೆ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ್ ಖರ್ಗೆಯನ್ನು ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಂತರ ಆತನ ಬಂಧನ-ಬಿಡುಗಡೆಯಾಗಿತ್ತು. ಅಷ್ಟಕ್ಕೆ ಸುಮ್ಮನಾಗಿರದ ಮಣಿಕಂಠ ರಾಠೋಡ, ಆತ ಬಿಜೆಪಿ ಕಾರ್ಯಕರ್ತನ ಜೊತೆಗೆ ಮಾತನಾಡಿ, ‘ಖರ್ಗೆ ಹೆಂಡಿತಿ ಮಕ್ಕಳು, ಕುಟುಂಬವನ್ನು ಸಾಫ್ ಮಾಡ್ತಿನಿ’ ಎಂದು ಜೀವ ಬೆದರಿಕೆಯನ್ನು ಹಾಕಿದ್ದ. ಅಲ್ಲದೆ ಗನ್ ಕೈಯಲ್ಲಿ ಹಿಡಿದು ತಿರುಗಿಸುವ ವಿಡಿಯೋ ವೈರಲ್ ಆಗಿತ್ತು.
ಮತದಾರರಿಗೆ ಧನ್ಯವಾದ ಸಲ್ಲಿಸಿದ ಪ್ರಿಯಾಂಕ್ ಖರ್ಗೆ
ಗೆಲವು ಸಾಧಿಸಿದ ಬಳಿಕ ಪ್ರಿಯಾಂಕ್ ಖರ್ಗೆ ಫೇಸ್ಬುಕ್ನಲ್ಲಿ “ಧನ್ಯವಾದಗಳು ಚಿತ್ತಾಪುರ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
“ಕರ್ನಾಟಕದ ಸಹೃದಯರ ಸೇವೆ ಮಾಡಲು ನನಗೆ ಮತ್ತೊಂದು ಅವಕಾಶ ನೀಡಿದ್ದಕ್ಕೆ ತಮಗೆಲ್ಲ ಧನ್ಯವಾದಗಳು. ಈ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ನ ಹಿರಿಯ ನಾಯಕರಿಗೆ, ಮುಖಂಡರಿಗೆ, ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ನನ್ನ ಅನಂತಾನಂತ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಹೈ ವೋಲ್ಟೇಜ್ ಕ್ಷೇತ್ರದಲ್ಲಿ ಸ್ವರೂಪ್ ಜಯಬೇರಿ; ಪ್ರೀತಂ ಗೌಡಗೆ ಮುಖಭಂಗ
“ಚುನಾವಣೆಯಲ್ಲಿ ನನ್ನ ಗೆಲುವಿಗೆ ಕಾರಣರಾದ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಮತ ಬಾಂಧವರಿಗೆ, ಕಲಬುರಗಿ ಜಿಲ್ಲೆಯ ಪ್ರೀತಿಯ ಜನರಿಗೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ನನ್ನ ಹಿತೈಷಿಗಳಿಗೆ ಹೃದಯ ಪೂರ್ವಕ ನಮನಗಳು” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
“ನನ್ನ ಮೇಲೆ ಅಪಾರ ನಂಬಿಕೆ, ನಿರೀಕ್ಷೆಗಳನ್ನು ಇರಿಸಿಕೊಂಡು ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿದ್ದೀರಾ. ಈ ನಂಬಿಕೆಗೆ ಚ್ಯುತಿ ಬಾರದಂತೆ ಕರ್ನಾಟಕದ ಜನತೆಗೆ ಸಾಮಾಜಿಕ ನ್ಯಾಯ ನೀಡಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ.