ಲೋಕಸಭಾ ಚುನಾವಣೆಗೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಆದ ನಂತರವೂ ಪ್ರತ್ಯೇಕ ಸಭೆ, ಪ್ರತಿಭಟನೆ ನಡೆಸುವುದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಎಲ್ಲರಿಗೂ ಆಸೆ ಇರುವುದು ಸಹಜ. ಪಕ್ಷದ ಹಿರಿಯರು ಎಲ್ಲವನ್ನು ಪರಿಶೀಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದರು.
ರಾಯಚೂರಿನಲ್ಲಿ ಅವರೆನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, “ಚುನಾವಣೆಯಲ್ಲಿ ಸ್ಪರ್ಧಿಸಲು ಅನೇಕರು ಪ್ರಯತ್ನಗಳನ್ನು ನಡೆಸಿದ್ದರು. ಪಕ್ಷ ಮತ್ತೆ ಅವಕಾಶವನ್ನು ನನಗೆ ನೀಡಿ ಅಭ್ಯರ್ಥಿಯೆಂದು ಘೋಷಿಸಿದೆ. ಮಾಜಿ ಸಂಸದ ಬಿ ವಿ ನಾಯಕರೊಂದಿಗೆ ಮಾತನಾಡಲು ಸಿದ್ದವಿದ್ದು ಅವರೊಂದಿಗೆ ಸೇರಿ ಚುನಾವಣೆ ಪ್ರಚಾರ ನಡೆಸಲಾಗುವುದು” ಎಂದು ಹೇಳಿದರು.
“ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರು ಸಭೆ ಕರೆದಿರುವುದು ಪಕ್ಷದ ಪರವಾಗಿ ಹೊರತು ವಿರೋಧಿಸಿ ಅಲ್ಲ. ಪಕ್ಷದ ಪ್ರಮುಖರೊಂದಿಗೆ ಚರ್ಚಿಸಲು ಸಭೆ ಕರೆದಿರುವುದಾಗಿ ಹೇಳಿದ್ದಾರೆ” ಎಂದರು.
“ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಪರಿಕಲ್ಪನೆಯಲ್ಲಿ ದೇಶವನ್ನು ಜಗತ್ತಿನಲ್ಲಿಯೇ ಮೂರನೇ ಸ್ಥಾನಕ್ಕೆ ತರಲು ಬೇಕಾದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. 2047 ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ದೊರಕಿ ನೂರು ವರ್ಷ ಪೂರೈಸುವ ವೇಳೆಯಲ್ಲಿ ದೇಶ ಜಗತ್ತಿನಲ್ಲಿಯೇ ಮೊದಲ ಸ್ಥಾನಕ್ಕೆ ತರಲು ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಕಾರ್ಯನಿರ್ವಹಿಸಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | 2 ದಿನದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಜನರ ತೀರ್ಮಾನಕ್ಕೆ ಬದ್ಧ; ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ ವಿ ನಾಯಕ
“ಮಹತ್ವಾಂಕ್ಷೆ ಜಿಲ್ಲೆಗಳೆಂದು ಗುರುತಿಸಿಕೊಂಡಿರುವ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 12 ಸಾವಿರ ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಪ್ರಗತಿಯಲ್ಲಿದೆ. ಯಾದಗಿರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಐಎಸ್ಐ ಆಸ್ಪತ್ರೆಗಳು ಸೇರಿದಂತೆ ನೀರಾವರಿ ಯೋಜನೆಗಳಿಗೆ ಅನುದಾನ ನೀಡಲಾಗಿದೆ. 3800 ಕೋಟಿ ರೂ. ವೆಚ್ಚದಲ್ಲಿ ನಾರಾಯಣಪುರ ಕಾಲುವೆ ಬಲಗೊಳಿಸುವ ಕಾಮಗಾರಿ ನಡೆಯುತ್ತಿದೆ. ಇನ್ನಷ್ಟು ಪ್ರಗತಿಯ ಪಥದಲ್ಲಿ ಮುನ್ನಡೆಯಲು ಬಿಜೆಪಿಗೆ ಜನರು ಬೆಂಬಲಿಸಬೇಕು” ಎಂದರು.
ವರದಿ : ಹಫೀಜುಲ್ಲ