ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವುದಾಗಿ ಹೇಳಿ ವಂಚಿಸಿದ್ದು, ಟಿಕೆಟ್ ವಿಚಾರವಾಗಿ ಎರಡು ದಿನದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಸಭೆ ನಡೆಸಿ ಜನರ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಸಂಸದ ಬಿ ವಿ ನಾಯಕ ಹೇಳಿದರು.
ರಾಯಚೂರು ನಗರದ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಂಸದ ಬಿ ವಿ ನಾಯಕರ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾದ ನಂತರ ಬಸವರಾಜ ಬೊಮ್ಮಾಯಿ, ಪ್ರಲ್ಹಾದ್ ಜೋಷಿ ಅವರು ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಿದರು. ಆದರೂ ಸೋಲು ಅನುಭವಿಸಲಾಯಿತು. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಖುದ್ದಾಗಿ ಸ್ಪರ್ಧೆ ಮಾಡುವಂತೆ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಮ್ಮನ್ನು ಕರೆಯಿಸಿ, ʼಹಾಲಿ ಸಂಸದರ ಬಗ್ಗೆ ಜನರ ಒಲವಿಲ್ಲ, ನಿಮ್ಮ ಮೇಲೆ ಒಲವಿದ್ದು, ನೀವು ತಯಾರಿ ನಡೆಸಿ ಎಂದು ಹೇಳಿ ಭರವಸೆ ನೀಡಿದ್ದರು. ಅದರೂ ಹಿಂದೆ ಸರಿದಿದ್ದೆ, ಬಿ ಫಾರಂ ನಿಮಗೇ ನೀಡುತ್ತೇವೆ, ನಿಮ್ಮ ಜಿಲ್ಲೆಯಲ್ಲಿ ಪತ್ರಿಕಾಗೋಷ್ಟಿ ಮಾಡಿ ಆಕಾಂಕ್ಷಿಯಾಗುವುದಾಗಿ ಹೇಳಿ ಎಂದು ಭರವಸೆ ನೀಡಿ ಕಳಿಸಿದರು. ಆದರೆ ಇದೀಗ ಟಿಕೆಟ್ ತಪ್ಪಿಸಿದ್ದು, ಈ ಬಗ್ಗೆ ಸ್ಪಷ್ಟ ಪಡಿಸಬೇಕು” ಎಂದು ಆಗ್ರಹಿಸಿದರು.
“ಟಿಕೆಟ್ ನೀವೆ ಕೊಡುತ್ತೇವೆಂದು ಹೇಳಿ ತಯಾರಿ ಮಾಡಿಕೊಂಡಿದ್ದು, ಇದೀಗ ಅಭಿಮಾನಿಗಳಿಗೆ ಧಕ್ಕೆಯಾಗಿದೆ, ಅಗೌರವಾಗಿದೆ. ಇದೀಗ ಎರಡು ದಿನದಲ್ಲಿ ಮರು ಪರಿಶೀಲನೆ ಮಾಡಿ ಟಿಕೆಟ್ ಘೋಷಣೆ ಮಾಡಬೇಕು” ಎಂದರು.
ಎರಡು ದಿನಗಳಲ್ಲಿ ಟಿಕೆಟ್ ಘೋಷಣೆ ಮಾಡದಿದ್ದರೆ ಮತ್ತೊಮ್ಮೆ ಜನರು, ಅಭಿಮಾನಿಗಳ ಜತೆಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಮಾತನಾಡಿ, “ಬಿಜೆಪಿ ಪ್ರಮುಖರು ಬಿ ವಿ ನಾಯಕರಿಗೆ ಟಿಕೆಟ್ ಅಶ್ವಾಸನೆ ನೀಡಿದ್ದರು. ಇದರಿಂದ ಅವರು ತಯಾರಿ ಮಾಡಿಕೊಂಡಿದ್ದರು. ಟಿಕೆಟ್ ತಪ್ಪಿಸಲು ಕಾರಣ ಹೇಳಬೇಕಿದೆ, ಟಿಕೆಟ್ ಮರು ಪರಿಶೀಲನೆ ಮಾಡಬೇಕು. ನಾವು ಟಿಕೆಟ್ ಕೇಳಿರಲಿಲ್ಲ, ನೀವೇ ಕೊಡುತ್ತವೆಂದು ಹೇಳಿ, ಇದೀಗ ತಪ್ಪಿಸಿರುವುದು ನೋವಿನ ಸಂಗತಿ. ಯಾವ ಆಧಾರದ ಮೇಲೆ ರಾಜಾ ಅಮರೇಶ್ವರ ನಾಯಕರಿಗೆ ಟಿಕೆಟ್ ನೀಡಿದ್ದೀರಿ, ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜ್ಯದ ನಾಯಕರು ಸರಿಪಡಿಸುವ ಕೆಲಸ ಮಾಡಬೇಕು. ಬಿ ವಿ ನಾಯಕರಿಗೆ ಟಿಕೆಟ್ ನೀಡಬೇಕು, ಟಿಕೆಟ್ ವಿಚಾರ ಪುನರ್ ಪರಿಶೀಲನೆ ಮಾಡಬೇಕು” ಎಂದರು.
ನಾಗಲಿಂಗಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ, “ಉದ್ದೇಶ ಪೂರ್ವಕವಾಗಿ ಟಿಕೆಟ್ ತಪ್ಪಿಸಿದ್ದು, ಮರುಪರಿಶೀಲನೆ ಮಾಡಬೇಕೆಂದು ಸಭೆ ನಡೆಸಲಾಗುತ್ತಿದೆ. ರಾಯಚೂರು ಮತ್ತು ಯಾದಗಿರಿ ಲೋಕಸಭಾ ಕ್ಷೇತ್ರದ ಕಾರ್ಯಕರ್ತರು ಆಗಮಿಸಿದ್ದಾರೆ. ಜಿಲ್ಲೆಯು ರಾಜಕೀಯವಾಗಿ ಅಚ್ಚಳಿಯದೇ ಇರುವ ಹೆಸರೆಂದರೆ ಬಿ ವಿ ನಾಯಕ. ಜನರಿಗಾಗಿ ಇರುವ ನಾಯಕರು, ಅವರು ಯಾವತ್ತೂ ಕೂಡಾ ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ಈ ಹಿಂದೆ ಕಾಂಗ್ರೆಸ್ನವರು ಸರಿಯಾಗಿ ನಡೆಸಿಕೊಂಡಿಲ್ಲವೆಂದು ಸ್ವಾಭಿಮಾನದಿಂದ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಅವರು ಬಿಜೆಪಿಗೆ ಬಂದ ಬಳಿಕ ಮಾನ್ವಿ ಕ್ಷೇತ್ರದದಲ್ಲಿ ಹೆಚ್ಚಿನ ಪ್ರಾಬಲ್ಯ, ಜನಮನ್ನಣೆ ಗಳಿಸಿದ್ದಾರೆ. ಎಂಪಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವಂತೆ ಭರವಸೆ ನೀಡಿದರು. ಇದೀಗ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಇದು ನೋವಿನ ಸಂಗತಿ. ನಮಗೆ ಅಸ್ತಿತ್ವದ ಕೊರತೆ ಇದೆ, ರಾಜ್ಯ ಮತ್ತು ರಾಷ್ಟ್ರದ ನಾಯಕರಿಗೆ ಒಕ್ಕೊರಲಿನಿಂದ ಒತ್ತಾಯಿಸಲಾಗುತ್ತದೆ” ಎಂದರು.
“ಹಾಲಿ ಸಂಸದರ ಅಭಿಪ್ರಾಯ ಸರಿಯಿಲ್ಲವೆಂದು ರಾಜ್ಯದ ಹಾಗೂ ಕೇಂದ್ರದ ನಾಯಕರು ತಿಳಿದಿದ್ದು, ಟಿಕೆಟ್ ಆಸ್ವಾಸನೆ ನೀಡಿ ತಪ್ಪಿಸಿದ್ದಾರೆ. ಬಿ ವಿ ನಾಯಕರಿಗೆ ಒಂದೇ ಅಲ್ಲ ಕ್ಷೇತ್ರದ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆ. ದೇಶ ಗೆಲ್ಲಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿ ವಿ ನಾಯಕರಿಗೆ ಟಿಕೆಟ್ ನೀಡಬೇಕಿದೆ. ಟಿಕೆಟ್ ಬದಲು ಮಾಡಲು ನಮ್ಮ ಹೋರಾಟ ನಿರಂತರವಾಗಿರುತ್ತದೆ” ಎಂದು ತಿಳಿಸಿದರು.
ಶರಣಬಸವ ಜೋಳದಡಗಿ ಮಾತನಾಡಿ, “ಸರಳ ಸಜ್ಜನಿಕೆ ವ್ಯಕ್ತಿಯಾಗಿ ನಾಲ್ಕು ಬಾರಿ ಎಂಪಿಯಾಗಿದ್ದ ದಿ ವೆಂಕಟೇಶ ನಾಯಕ ಅವರಂತೆ ಬಿ ವಿ ನಾಯಕ ಅವರೂಕೂಡಾ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ನಾಯಕರ ತೀರ್ಮಾನ ಸರಿಯಿಲ್ಲ. ಮಾಧ್ಯಮ ವರದಿಯಲ್ಲಿ ಬಿ ವಿ ನಾಯಕ ಪರವಾಗಿದ್ದು, ಎಲ್ಲ ಗ್ರಾಮಗಳಲ್ಲಿ ಬಿ ವಿ ನಾಯಕರ ಪರವಿದ್ದಾರೆ. ಇಲ್ಲಿನ ಷಡ್ಯಂತ್ರದಿಂದ ಟಿಕೆಟ್ ತಪ್ಪಿದೆ. ಟಿಕೆಟ್ ಕೊನೆ ಕ್ಷಣದಲ್ಲಿ ತಪ್ಪಿದ್ದು, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ರಾಯಚೂರಿನ ಧ್ವನಿ ಬೆಂಗಳೂರು, ದೆಹಲಿಗೆ ತಟ್ಟಬೇಕು. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಅವರಿಗೆ ಟಿಕೆಟ್ ನೀಡಲೇಬೇಕು. ಮರು ಪರಿಶೀಲನೆ ಮಾಡಿ ಟಿಕೆಟ್ ಘೋಷಣೆ ಮಾಡಬೇಕು” ಎಂದರು.
ಸಭೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಗೋ ಬ್ಯಾಕ್ ಘೋಷಣೆ ಹಾಕಿದರು.
ರಾಜಾ ಅಮರೇಶ್ವರ ನಾಯಕ ಅಟಾವೋ ರಾಯಚೂರು ಬಚಾವೋ ಎಂಬ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಮಂಡ್ಯದಲ್ಲಿ ಸ್ಪರ್ಧೆ: ನಾರಾಯಣಗೌಡ ಮನೆಗೆ ಎಚ್ಡಿಕೆ ದೌಡು
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಜಂಬಣ್ಣ ನಿಲೋಗಲ್, ಕೊಟ್ರೇಶಪ್ಪ ಕೋರಿ, ಅನಿತಾ ಬಸವರಾಜ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ದೇವರಾಜ ಗೌಡ ಸಿರವಾರ, ತಿಮ್ಮಾರೆಡ್ಡಿಗೌಡ, ವೀರಭದ್ರ ಗೌಡ, ಶಿವಶರಣ ಜಕ್ಕಲದಿನ್ನಿ, ನರಸಿಂಹ ನಾಯಕ ಕರಡಿಗುಡ್ಡ, ಎಂ ಈರಣ್ಣ ನಾಯಕ ಯರಗೇರಾ, ಶರಣ ಬಸವ, ಮಲ್ಲಪ್ಪಗೌಡ, ಮೌಲಾಸಾಬ್, ಶರಣಗೌಡ ಹೂವಿನ ಹಡಗಿ, ಶರಣಬಸವ ನಾಯಕ, ಜನಾರ್ಧನ, ರಾಮನಗೌಡ, ಅಮರೇಶ, ಹನುಮಂತಪ್ಪ ಮಿಯ್ಯಾಪೂರ, ನಾಗರಾಜ, ಲಕ್ಷ್ಮಣ, ಶರಣಗೌಡ ಬಿ ಗಣೇಕಲ್, ಚಂದ್ರಶೇಖರ ಸ್ವಾಮಿ, ಬಸವರಾಜಪ್ಪ, ರಂಗಪ್ಪ, ಎಸ್ ಮಹಮ್ಮದ್, ನಾಗರಾಜ, ಅನಿಲ ಕುಮಾರ, ಹನುಮಂತಪ್ಪ ವಕೀಲ, ವೀರೇಶ ನಾಯಕ, ರಾಮು ನಾಯಕ ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ