ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಸಂವಿಧಾನ ನಮಗೆ ಹಕ್ಕು ತತ್ವಗಳನ್ನು ನೀಡಿದ್ದು, ಅವುಗಳ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಕಾರ್ಯಕರ್ತರಲ್ಲಿ ಸಾಕಷ್ಟು ಅಸಮಾಧಾನವಿದೆ. ಆದರೂ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ನಮ್ಮ ಆಶಯವಾಗಿದೆ. ಹಾಗಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಹೇಳಿದರು.
ರಾಯಚೂರು ನಗರದ ರಾಯಲ್ ಫೊರ್ಟ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರಿಗೆ ವರಿಷ್ಠರು ಟಿಕೆಟ್ ಘೋಷಣೆ ಮಾಡಿದ್ದಾರೆ. ಕಾರ್ಯಕರ್ತರು ಅಸಮಾಧಾನಗೊಳ್ಳದೆ ಟಿಕೆಟ್ ಯಾರಿಗೆ ನೀಡಿದರೂ ಪಕ್ಷಕ್ಕೆ ಬೆಂಬಲಿಸಿ ಸಹಕಾರ ನೀಡಬೇಕು” ಎಂದರು.
“ಕಾರ್ಯಕರ್ತರಲ್ಲಿ ಸಾಕಷ್ಟು ಅಸಮಾಧಾನವಿದೆ. ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅದರ ಮೇಲೆ ನಡೆಯುತ್ತೇನೆ. ರಾಜಕೀಯ, ಹಣ ಮಾಡಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇನೆ. ಸೋತರೂ ಕೂಡಾ ಕಾರ್ಯಕರ್ತರು ಜತೆಗೆ ಇದ್ದಾರೆ. ಅವರ ಋಣ ತೀರಿಸಲು ರಾಜಕಾರಣ ಮಾಡುತ್ತೇನೆ” ಎಂದು ತಿಳಿಸಿದರು.
“ಯಾದಗಿರಿ ಜಿಲ್ಲೆ ಹುಟ್ಟೂರು ಆಗಿದ್ದು, ಅಲ್ಲಿಯೂ ಸೇವೆ ಮಾಡಲು ಅವಕಾಶ ಒದಗಿಸಿಕೊಡಲು ರಾಯಚೂರು ಕರ್ಮ ಭೂಮಿಯಲ್ಲಿಯೂ ಸೇವೆ ಮಾಡಲು ಅವಕಾಶ ಕೇಳಲಾಗಿತ್ತು. ಟಿಕೆಟ್ ವಂಚಿತ ಬಗ್ಗೆ ತಪ್ಪುಗಳಾಗಿವೆ. ಸಹಿಸಿಕೊಂಡು ಹೋಗಬೇಕಾಗಿದೆ. ಯಾಕೆಂದರೆ ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯವಾಗಿದೆ” ಎಂದರು.
ಬಿಜೆಪಿ ಮುಖಂಡ ಎನ್ ಶಂಕ್ರಪ್ಪ ಮಾತನಾಡಿ, “ಸೌಹಾರ್ದತೆಯನ್ನು ಎ ಬಿ ವಾಜಪೇಯಿ ಅವರು ಕಲಿಸಿಕೊಟ್ಟಿದ್ದು, ಆ ಸೌಹಾರ್ದತೆ ತಿಪ್ಪರಾಜು ಮೈಗೂಡಿಸಿಕೊಂಡಿದ್ದಾರೆ. ಪಕ್ಷದ ಸಿದ್ದಾಂತ, ಪಕ್ಷ ಬಲವರ್ಧನೆಯನ್ನು ತಿಪ್ಪರಾಜು ಅವರು ಮಾಡಿ ತೋರಿಸಿದ್ದಾರೆ. ಈ ಹಿಂದೆ ದೇಶದ ಅನೇಕ ನಾಯಕರು ಸಾಧಾರಣ ವ್ಯಕ್ತಿತ್ವದಿಂದ ಪಕ್ಷವನ್ನು ಕಟ್ಟಿದ್ದರು. ಜನ ಸಂಘವನ್ನು ಸೇರಿ ಪಕ್ಷವನ್ನು ಕಟ್ಟಿದ್ದರು. ಹಿಂದೆ ಪಕ್ಷಕ್ಕಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡು ಅಂತಹ ನಾಯಕ ಪಕ್ಷವನ್ನು ಕಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೂ ಪಕ್ಷ ಬೆಳೆದಿದೆ” ಎಂದರು.
“ಪಕ್ಷವನ್ನು ಬೆಳೆಸುವುದು, ಉಳಿಸುವುದು ನಮ್ಮ ಮೇಲಿದೆ. ಮೊದಲು ದೇಶ ಮುಖ್ಯವಾಗಿದೆ. ದೇಶದ ಸುರಕ್ಷತೆಗಾಗಿ ಕೆಲಸ ಮಾಡಬೇಕು. ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಣಯಕ್ಕೆ ಬದ್ದರಾಗಬೇಕು. ಅಭ್ಯರ್ಥಿ ಬದಲಾವಣೆ ಮಾಡಬೇಕೆಂದರೆ ಮೊದಲ ವ್ಯಕ್ತಿ ತಿಪ್ಪರಾಜು ಎನ್ನುವುದು, ನರೇಂದ್ರ ಮೋದಿ ಅವರು ನಿರ್ಣಯಿಸಿದ್ದಾರೆ, ಕ್ಷೇತ್ರದ ಪ್ರತಿನಿಧಿಯಾದ ಮೇಲೆ ಕ್ಷೇತ್ರದ ಜನರ ವಿಸ್ವಾಸ ಗಳಿಸಬೇಕು. ನಿಮ್ಮ ಅಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತರಲಾಗುತ್ತದೆ” ಎಂದರು.
ಪ್ರಸ್ತಾವಿಕರವಾಗಿ ಅಮಿತ್ ಜೋಷಿ ಮಾತನಾಡಿ, “ಕಳೆದ 8 ತಿಂಗಳ ಹಿಂದೆ ಲೋಕಸಭೆ ಕ್ಷೇತ್ರಕ್ಕೆ ತಿಪ್ಪರಾಜು ಹವಾಲ್ದಾರ್ ಅವರಿಗೆ ನೀಡುವ ಕುರಿತು ರಾಜ್ಯ ಮುಖಂಡರು ಭರವಸೆ ನೀಡಿದ್ದರು. ಕ್ಷೇತ್ರದಲ್ಲಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯನ್ನೊಳಗೊಂಡು ಲೋಕಸಭೆ ಕ್ಷೇತ್ರದಲ್ಲಿ ತಯಾರಿ ನಡೆಸಿದ್ದಾರೆ. ಕಳೆದ 4 ದಿನಗಳ ಹಿಂದೆ ರಾಜ್ಯ ಮುಖಂಡರು ಟಿಕೆಟ್ ನೀಡದೇ ವಂಚಿಸಿದ್ದಾರೆ. ಕಳೆದ 6 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಅಭಿಮಾನಿಗಳು ಮತ್ತು ಸಾರ್ವಜನಿಕರ ಜೊತೆಗೆ ಇದ್ದಾರೆ. ಜನ ಮಾನಸದಲ್ಲಿ ಇದ್ದು, ಟಿಕೆಟ್ ನೀಡದೇ ತಪ್ಪಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ ಮೀಸಲು ಕ್ಷೇತ್ರದಿಂದ ಕೆಆರ್ಎಸ್ ಅಭ್ಯರ್ಥಿ ಗಣಪತಿ ರಾಥೋಡ್ ಸ್ಪರ್ಧೆ
ಈ ಸಂದರ್ಭದಲ್ಲಿ ನರಸಪ್ಪ ಯಕ್ಲಾಸಪೂರ, ಶಂಕರ ಗೌಡ ಮಿರ್ಜಾಪೂರ, ಜಗದೀಶ ವಕೀಲ, ಮಾನಪ್ಪ ನಾಯಕ, ಅಚ್ಚುತರೆಡ್ಡಿ, ಸಿದ್ದನಗೌಡ ನೆಲಹಾಳ, ವರಪ್ರಸಾದ್ ರೆಡ್ಡಿ ತಿಮ್ಮಾರೆಡ್ಡಿ ಗೌಡ, ಬಾಲರಾಜ, ಮಹಿಪಾಲರೆಡ್ಡಿ ಗೌಡ ಗಂಜಳ್ಳಿ, ಶಾಂತನಗೌಡ ಸಿಂಗನೋಡಿ, ಈರಪ್ಪಗೌಡ ಮಟಮಾರಿ, ಶಿವಪ್ಪ ಯಾದವ್ ಅಪ್ಪನದೊಡ್ಡಿ, ಯಲ್ಲಪ್ಪ ಕಲಮಲ, ನಾಗೇಶ ನಾಯಕ, ಪ್ರಕಾಶ ವಕೀಲ, ಶಿವಪ್ಪಸ್ವಾಮಿ, ವೀರೇಂದ್ರ ಪಾಟೀಲ್, ಕೆ ರಾಮಣ್ಣ, ಸುರೇಶ ಗೌಡ ಪಲಕಂದೊಡ್ಡಿ, ರಾಜಶೇಖರ ಗೌಡ, ಮಲ್ಲಿಕಾರ್ಜುನ ಗೌಡ ಚಿಕ್ಕಸೂಗುರು, ರಂಗಪ್ಪಗೌಡ ಹಂಚಿನಾಳ, ವೀರಯ್ಯಸ್ವಾಮಿ, ಶರಣಪ್ಪ ಚಿಕ್ಕಸೂಗುರು, ವೆಂಕಟೇಶ ದೇವಸುಗೂರು ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ