ರಸ್ತೆಗಳು ಗುಂಡಿಯಿಂದ ಕೂಡಿದ್ದು, ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಮಳೆ ಬಂತೆಂದರೆ ರಸ್ತೆಯಲ್ಲ ಕೆರೆಯಂತಾಗುತ್ತದೆ ಎಂದು ರಾಮನಗರ ಜಿಲ್ಲೆ ಕುದೂರು ವ್ಯಾಪ್ತಿಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
“ಸೋಲೂರು ಗ್ರಾಮದಿಂದ ಒಂಬತ್ತನಗುಂಟೆ ಗ್ರಾಮದವರೆಗೆ ವಿಸ್ತರಿಸಿರುವ ರಸ್ತೆ ಗುಂಡಿಯಿಂದ ಕೂಡಿದ್ದು, ಅಸ್ತವ್ಯಸ್ತವಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ. ತುಮಕೂರು, ಕುದೂರು, ಶಿವಗಂಗೆ ವೀರಾಪುರ ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಸಂಚಾರಕ್ಕೆ ಯೋಗ್ಯವಲ್ಲದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸೋಲೂರು ಹೋಬಳಿ ಮಾಗಡಿ ತಾಲೂಕಿಗೆ ಸೇರುತ್ತದೆ. ಆದರೆ, ವಿಧಾನಸಭೆ ಚುನಾವಣೆ ನೆಲಮಂಗಲ ಕ್ಷೇತ್ರಕ್ಕೆ ಸೇರುತ್ತದೆ. ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸೇರುತ್ತದೆ. ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಇಂತಹ ಅತಂತ್ರ ಸ್ಥಿತಿಯಲ್ಲಿರುವ ಹೋಬಳಿಯನ್ನು ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದಾರೆ” ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
“ಕಳೆದ ವರ್ಷ ಇದೇ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಹಳ್ಳಕ್ಕೆ ನುಗ್ಗಿತ್ತು. ಗುಂಡಿಗಳ ನಡುವೆ ರಸ್ತೆ ಇದೆಯೋ, ರಸ್ತೆಯ ನಡುವೆ ಗುಂಡಿಗಳಿವೆಯೋ ಎಂಬ ಗೊಂದಲದಲ್ಲಿ ವಾಹನ ಸವಾರರು ವಾಹನ ಚಲಾಯಿಸುವಂತಾಗಿದೆ. ಈ ರಸ್ತೆಯಲ್ಲಿ ಓಡಾಡುವ ನೂರಾರು ವಾಹನಗಳು, ಪ್ರಯಾಣಿಕರು ಜನಪ್ರತಿನಿಧಿಗಳನ್ನು ಹಾಗೂ ಸಂಬಂಧಪಟ್ಟ ಇಲಾಖೆಗಳನ್ನು ಶಪಿಸದೆ ಮುಂದೆ ಹೋಗದಂತ ಸ್ಥಿತಿಯಲ್ಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಲ್ಲಾ ಮಾದರಿಯ ವಸತಿ ಸಮುಚ್ಚಯ: ಮನೆಗಳ ಹಂಚಿಕೆಗೆ ಸಿದ್ಧತೆ; ಬಿಡಿಎ ಆಯುಕ್ತ ಪರಿಶೀಲನೆ
“ಗುಂಡಿಗಳಿಂದ ತುಂಬಿರುವ ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಹಲವಾರು ಬಾರಿ ಸಂಬಂಧಪಟ್ಟ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನೂತನವಾಗಿ ಆಯ್ಕೆಯಾಗಿರುವ ಶಾಸಕರಾದರೂ ಈ ದುರಸ್ತಿಯನ್ನು ಕಾರ್ಯವನ್ನು ಮಾಡಬೇಕು” ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.