ತುಮಕೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತ, ಹಿಂದುಳಿದ, ದಲಿತರ, ರೈತ ಸಮುದಾಯದ ಕಲ್ಯಾಣಕ್ಕಾಗಿ ಕೆ.ಎನ್ ರಾಜಣ್ಣ ಸಚಿವರಾಗಬೇಕು. ಅವರು ಹಿಂದಿನಿಂದಲೂ ಎಲ್ಲ ಸಂಘ ಸಂಸ್ಥೆಗಳು ಮತ್ತು ಜನಸಮಾನ್ಯರ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ಸರ್ಕಾರ ಸಚಿವ ಸ್ಥಾನ ಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಕುಂದೂರು ತಿಮ್ಮಣ್ಣ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ನಡೆದಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. “ಕೆ.ಎನ್ ರಾಜಣ್ಣ ಅವರನ್ನು ಮಂತ್ರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ತುಮಕೂರಿನ ನಿಯೋಗ ಭೇಟಿ ಮಾಡಿ, ಮನವಿ ಮಾಡಲಿದೆ. ಅಲ್ಲದೆ, ರಾಜಣ್ಣರನ್ನು ಸಚಿವರನ್ನಾಗಿ ಮಾಡುವುದರಿಂದ ಲೋಕಸಭಾ ಚುನಾಔಣೆಯ ಮೇಲೂ ಪ್ರಭಾವ ಬೀರಲಿದೆ ಎಂಬುದನ್ನು ಅವರ ಗಮನಕ್ಕೆ ತರಲಾಗುತ್ತದೆ” ಎಂದು ಹೇಳಿದ್ದಾರೆ.
ಪ್ರಗತಿಪರ ಮುಖಂಡ ಡಾ. ಬಸವರಾಜು ಮಾತನಾಡಿ, “ಕಾಂಗ್ರೇಸ್ ಅಧಿಕಾರಕ್ಕೆ ಬಂದಿದೆ. ಹಾಗೆಯೇ, ನಮ್ಮ ಜಿಲ್ಲೆಯ ಎಲ್ಲರ ನೆಚ್ಚನ ರಾಜಕಾರಣಿ ಕೆ.ಎನ್ ರಾಜಣ್ಣ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಳ ಸಮುದಾಯಗಳ ಪರ, ಕಾರ್ಮಿಕರ ಪರ ಹೆಚ್ಚು ಕೆಲಸ ಮಾಡುವ ರಾಜಣ್ಣ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು” ಎಂದಿದ್ದಾರೆ.
“ರಾಜಣ್ಣ ಶಾಸಕರಾಗಿಯಷ್ಟೇ ಕೆಲಸ ಮಾಡಿಲ್ಲ. ಸಹಕಾರ ವಲಯದ ಬ್ಯಾಂಕ್ಗಳಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಬಡವರ ಪರವಾಗಿ ಮಧುಗಿರಿ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ಹಾಗಾಗಿ, ಅವರನ್ನು ಸಚಿವರನ್ನಾಗಿ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಡಾ.ಅರುಂಧತಿ ಮಾತನಾಡಿ, “ರಾಜಣ್ಣ ಅವರು ಶಾಸಕರಾಗಿ ಮಾಡಿರುವ ಕೆಲಸಗಳೇ ಅಷ್ಟು ಜನಪ್ರಿಯವಾಗಿವೆ. ಇನ್ನು, ಅವರನ್ನು ಸಚಿವರನ್ನಾಗಿ ಮಾಡಿದರೆ, ತುಮಕೂರು ಜಿಲ್ಲೆಗೆ ಕೀರ್ತಿ ಬರುತ್ತದೆ. ಇದರಿಂದ ಅಹಿಂದ ವರ್ಗಗಳಿಗೂ ಶಕ್ತಿ ಬರುತ್ತದೆ” ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿರೂಪಾಕ್ಷ ಡ್ಯಾಗೇರಹಳ್ಳಿ,ರಾಮಚಂದ್ರ, ಚೇಳೂರು ಶಿವನಂಜಪ್ಪ, ಸುಬ್ಬರಾಯಪ್ಪ,ಮುಸ್ತಾಫ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.