ಹಾಸನ ನಗರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಪೆನ್ಡ್ರೈವ್ ಮುಖಾಂತರ ಅಶ್ಲೀಲ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಲಾಗುತ್ತಿದೆ. ಆ ಅಶ್ಲೀಲ ಚಿತ್ರಗಳು ಮತ್ತು ದೃಶ್ಯಗಳು ವಾಟ್ಸಾಪ್ಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು, ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಜಕೀಯ ಅಧಿಕಾರ, ಆಸ್ತಿ ಮತ್ತು ಜಾತಿಯ ಮದದಿಂದ ಮೆರೆಯುತ್ತಿರುವ ಹಾಸನ ಜಿಲ್ಲೆಯ ಪ್ರಭಾವಿ ಕುಟುಂಬದ ವ್ಯಕ್ತಿಯೊಬ್ಬ ಬಹುತೇಕ ಮಹಿಳೆಯರನ್ನು ತನ್ನ ಕಾಮದಾಹಕ್ಕೆ ನಿರಂತರವಾಗಿ ಬಳಸಿಕೊಂಡಿದ್ದೂ ಅಲ್ಲದೆ ಆ ದೃಶ್ಯಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಮಹಿಳೆಯರನ್ನು ಈ ಕುಕೃತ್ಯಕ್ಕೆ ಬಳಸಿಕೊಳ್ಳಲು ಅವನು ತನಗಿರುವ ರಾಜಕೀಯ ಅಧಿಕಾರವನ್ನು ಬಳಸಿಕೊಂಡಿದ್ದಾನೆಂಬುದೂ ಸ್ಪಷ್ಟವಾಗಿದೆ.
ಇಂತಹ ಹೀನ ಕೃತ್ಯದ ಕುರಿತು ಇಡೀ ಪರಿವಾರಕ್ಕೆ ತಿಳಿದಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅತ್ಯಂತ ಖಂಡನೀಯ. ಇಂತಹ ಕಾಮುಕನನ್ನು ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಕೂಡಾ ಬಿಜೆಪಿ ಯಾವುದೇ ನಿರ್ಧಾರಕ್ಕೆ ಮುಂದಾಗದೆ, ಯಾವುದೇ ಸಂಬಂಧವಿಲ್ಲದಂತೆ ಕೇವಲ ಜನಪ್ರತಿನಿಧಿಯಾಗಿ ಗೆಲ್ಲಿಸಿಕೊಳ್ಳುವತ್ತ ಗಮನ ಹರಿಸಿದೆ.
ಕಾಮುಕನ ಕೃತ್ಯಗಳು ಜಗಜ್ಜಾಹೀರಾಗಿದೆ. ಇದು ಕೇವಲ ಹಾಸನ ನಗರದ ವಿಷಯವಾಗಿರದೆ ಇಡೀ ದಕ್ಷಿಣ ಭಾರತದ ವಿಷಯವಾಗಿದೆ. ಹಾಗಾಗಿ ಸಂತ್ರಸ್ತ ಹೆಣ್ಣುಮಕ್ಕಳ ರಕ್ಷಣೆ ಹಾಗೂ ಇಂತಹ ಕಿಡಿಗೇಡಿಯ ದರ್ಪ ಅಡಗಿಸುವುದು ಹಾಸನ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಇದೀಗ ಸರಿಯಾದ ಸಂದರ್ಭವಾಗಿದ್ದು, ಜಿಲ್ಲೆಯ ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ವಿಶೇಷವಾಗಿ ಒಕ್ಕಲಿಗ ಸಮುದಾಯ ಯಾವುದೇ ಮೋಹಕ್ಕೆ, ಒಕ್ಕಲುತನಕ್ಕೆ ಒಳಗಾಗದೆ ಏಪ್ರಿಲ್ 26ರಂದು ನಡೆಯಲಿರುವ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಬೇಕು.
ಈ ಸುದ್ದಿ ಓದಿದ್ದೀರಾ? ಪೆನ್ಡ್ರೈವ್ ಆತಂಕ ಕೊನೆಗೊಳಿಸಿ – ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ; ಸಿಪಿಐಎಂ ಆಗ್ರಹ
ಹೀನ ಕೃತ್ಯ ನಡೆಸಿರುವ ಮೈತ್ರಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಒಕ್ಕಲಿಗ ಸಮುದಾಯದ ಗೌರವ ಕಾಪಾಡಿಕೊಳ್ಳಬೇಕು. ಅಧಿಕಾರದ ಮದದಿಂದ ಮೆರೆಯುತ್ತಿರುವ ಇಂತಹ ಕುಟುಂಬವನ್ನು ಕೊನೆಗಾಣಿಸಬೇಕು. ಹಾಸನದಲ್ಲಿ ಬದಾಲಾವಣೆ ತರುವ ಮೂಲಕ ಕುಟುಂಬ ರಾಜಕಾರಣವನ್ನು ಕಿತ್ತೊಗೆದು, ಮಹಿಳೆಯರು ನಿರ್ಭಯದಿದ ಬದುಕುವಂತಹ ವಾತಾವರಣ ಕಲ್ಪಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಮತದಾರರೂ ಕೂಡಾ ಜಾಗೃತಗೊಂಡು ಯೋಚಿಸಿ ಮತದಾನ ಮಾಡಬೇಕು. ವಿಶೇಷವಾಗಿ ಮತ್ತೊಮ್ಮೆ ಒಕ್ಕಲಿಗ ಸಮುದಾಯಕ್ಕೆ ಕಳಕಳಿಯ ಮನವಿ ತನ್ನ ಸಮುದಾಯದ ಗೌರವ ಕಾಪಾಡಿಕೊಳ್ಳುವುದೇ ಧ್ಯೇಯವಾಗಬೇಕು.