- ನಾಗರಿಕರೇ ಪತ್ರಕರ್ತರಾಗುವ ಅವಕಾಶಗಳನ್ನು ಡಿಜಿಟಲ್ ಮಾಧ್ಯಮಗಳು ತೆರೆದಿಟ್ಟಿವೆ
- ಸಾಮಾಜಿಕ ಮಾಧ್ಯಮ ಹಲವು ಉದ್ಯೋಗಾವಕಾಶಗಳನ್ನು ನಮ್ಮ ಮುಂದಿಟ್ಟಿದೆ
ಅರ್ಥ ಶಾಸ್ತ್ರಜ್ಞ ಡಿ ಎಂ ನಂಜುಡಪ್ಪ ಹಾಗೂ ಹನಗುಂದಿಮಠ್ ಅವರ ಅಧ್ಯಕ್ಷತೆಯ ಸಮಿತಿಗಳು ಸಲ್ಲಿಸಿರುವ ವರದಿಗಳು ಚರ್ಚೆಯಾಗದೇ ಇದ್ದರೆ ವೈಜ್ಞಾನಿಕ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ ಎಂದು ಜಾಗೃತ ಕರ್ನಾಟಕ ವೇದಿಕೆಯ ಡಾ ಎಚ್ ವಿ ವಾಸು ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲೆ ಮಧುಗಿರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಗೃತ ಕರ್ನಾಟಕದಿಂದ ಆಯೋಜಿಸಿದ್ದ ‘ಹಿಂದುಳಿದ ತಾಲೂಕುಗಳ ಸಮಗ್ರ ಪ್ರಗತಿ ಕರ್ನಾಟಕ ಮಾದರಿ ಮತ್ತು ಜನಪರ ಮಾಧ್ಯಮದ ಪಾತ್ರ’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ರಾಜಧಾನಿಗೆ ದೂರುವಿರುವ ಕಲಬುರಗಿ, ರಾಯಚೂರು, ಬೀದರ್ ಹಾಗೂ ಸಮೀಪವಿರುವ ಮಧುಗಿರಿ, ಶಿರಾ, ಪಾವಗಡ ತಾಲೂಕುಗಳೂ ಕೂಡ ಹಿಂದುಳಿದಿವೆ. ಆದರೆ, ರಾಜ್ಯದಲ್ಲಿರುವ ಪ್ರತೀ ತಾಲೂಕು ಅಭಿವೃದ್ಧಿ ಆಗುವುದು ಮುಖ್ಯ ಧ್ಯೇಯವಾಗಬೇಕು” ಎಂದರು.
“ಪ್ರಸ್ತುತ ಅಧಿಕಾರಕ್ಕೆ ಬಂದಿರುವ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಹಲವು ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಜನರ ದುಡ್ಡು ಜನರಿಗೇ ಹರಿಯುವಂತೆ ಮಾಡುವ ಒಳ್ಳೆಯ ಕಾರ್ಯಕ್ರಮಗಳು ಇವಾಗಿವೆ. ಈ ಗ್ಯಾರಂಟಿಗಳ ಆಚೆಗೆ ರಾಜ್ಯದ ಯಾವ ಭಾಗ ಹಿಂದುಳಿದಿದೆ, ಯಾವ ಸಮುದಾಯಗಳು ಹಿಂದುಳಿದಿವೆ ಎನ್ನುವ ವಿಚಾರಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡದೇ ಇದ್ದರೆ ನಾವು ಎಲ್ಲಿದ್ದೇವೋ ಅಲ್ಲೇ ಇರುತ್ತೇವೆ” ಎಂದು ಹೇಳಿದರು.
“ಮಂತ್ರಿಮಹಾಶಯರು, ಅಧಿಕಾರಿಗಳು ಮಾತ್ರವಲ್ಲದೆ ಜನರೂ ಕೂಡ ಇದರ ಬಗ್ಗೆ ಮಾತನಾಡಬೇಕು ಹಾಗೂ ಮಾಧ್ಯಮಗಳಲ್ಲಿ ಚರ್ಚೆಯಾಗಬೇಕು. ಸರ್ಕಾರದ ಮೇಲೆ ಒತ್ತಡ ಬೀಳುವ ರೀತಿಯಲ್ಲಿ ಕೆಲಸ ಮಾಡಬೇಕು. ಈ ಬಗ್ಗೆ ಚರ್ಚೆಯಾಗಲೀ ಅಥವಾ ವಿಶೇಷ ಕಾರ್ಯಕ್ರಮಗಳನ್ನಾಗಲೀ ಮಾಧ್ಯಮಗಳು ರೂಪಿಸಿಲ್ಲ. ಜನರ ದನಿಯಾಗಿರುವ ಮಾಧ್ಯಮಗಳು ಇಂತ ಕಾರ್ಯಕ್ರಮಗಳನ್ನು ಮಾಡುವ ತುರ್ತಿದೆ” ಎಂದರು.
“2002ರಲ್ಲಿ ಅರ್ಥಶಾಸ್ತ್ರಜ್ಞ ಡಿ ಎಂ ನಂಜುಂಡಪ್ಪ ವರದಿಯಲ್ಲಿ ಆಗಿನ 177 ತಾಲೂಕುಗಳನ್ನು ಅತ್ಯಂತ ಹಿಂದುಳಿದ ತಾಲೂಕು, ಅತಿ ಹಿಂದುಳಿದ ತಾಲೂಕು, ಹಿಂದುಳಿದ ಹಾಗೂ ಮುಂದುವರೆದ ತಾಲೂಕುಗಳಾಗಿ ವಿಭಾಗ ಮಾಡಲಾಗಿತ್ತು. ತುಮಕೂರು ಜಿಲ್ಲೆಯಲ್ಲಿ ಮಧುಗಿರಿ, ಶಿರಾ, ಪಾವಗಡ, ಕುಣಿಗಲ್ ತಾಲೂಕುಗಳು ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿವೆ. ಹತ್ತು ವರ್ಷದ ನಂತರ ಹನಗುಂದಿಮಠ್ ಅವರು ಈ ತಾಲೂಕುಗಳಲ್ಲಿ ಬದಲಾವಣೆಯಾಗಿದೆಯಾ ಇಲ್ಲವಾ ಎಂಬುದರ ಕುರಿತು ಮತ್ತೊಂದು ವರದಿ ಕೊಡುತ್ತಾರೆ. ಚಿಕ್ಕನಾಯಕನಹಳ್ಳಿ, ಕೊರಟಗೆರೆ, ತುರುವೇಕೆರೆ ಅತಿ ಹಿಂದುಳಿದ ತಾಲೂಕುಗಳಾದ ಇವು ಹನಗುಂದಿಮಠ್ ಅಧ್ಯಯನ ಮಾಡುವ ಹೊತ್ತಿಗೆ ಇನ್ನಷ್ಟು ಮುಂದುವರೆದು ಅತಿ ಹಿಂದುಳಿದ ಪಟ್ಟಿಯಿಂದ ಹೊರಬಂದು ಹಿಂದುಳಿದ ತಾಲೂಕುಗಳಾಗಿದ್ದವು” ಎಂದು ತಿಳಿಸಿದರು.
“ಅತ್ಯಂತ ಹಿಂದುಳಿದ ತಾಲೂಕಾಗಿದ್ದ ಕುಣಿಗಲ್ ಅತಿ ಹಿಂದುಳಿದ ತಾಲೂಕಿನ ಪಟ್ಟಿಗೆ ಬಂತು. ತುರುವೇಕೆರೆ ಇವೆಲ್ಲವನ್ನೂ ಮೀರಿ ಮುಂದುವರೆದ ತಾಲೂಕಾಗಿತ್ತು. ಅದರೆ ಮಧುಗಿರಿ, ಶಿರಾ, ಪಾವಗಡ ಈ ಮೂರು ತಾಲೂಕುಗಳು ಹತ್ತು ವರ್ಷದ ನಂತರವೂ ಅತ್ಯಂತ ಹಿಂದುಳಿದ ತಾಲೂಕುಗಳಾಗಿಯೇ ಉಳಿದವು. ತುಮಕೂರು ಮತ್ತು ತಿಪಟೂರು ತಾಲೂಕುಗಳು ನಂಜುಡಪ್ಪ ವರದಿಯಲ್ಲಿ ಮುಂದುವರೆದ ತಾಲೂಕು ಎಂದೇ ಗುರುತಿಸಲ್ಪಟ್ಟಿದ್ದವು. ನಂತರವೂ ಅದರೆಲ್ಲೇನು ಬದಲಾವಣೆ ಆಗಲಿಲ್ಲ” ಎಂದು ಎರಡೂ ವರದಿಗಳನ್ನು ತೌಲನಿಕವಾಗಿ ವಿವರಿಸಿದರು.
“ರಾಜಧಾನಿಯಲ್ಲಿ ರೈತರು, ಕಾರ್ಮಿಕರು ಸೇರಿ ದೊಡ್ಡ ಪ್ರತಿಭಟನೆ ಮಾಡುತ್ತಿದ್ದಾರೆ. ಅದು ಯಾರಿಗೂ ತಿಳಿದಿಲ್ಲ. ಆದರೆ ಅಲ್ಲಿ ನಡೆಯುವ ಕಂಬಳ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ. ಇಂತಹ ಪಕ್ಷಪಾತೀಯ ಧೋರಣೆಯನ್ನು ಕೆಲ ಮಾಧ್ಯಮಗಳು ಅನುಸರಿಸುತ್ತಿವೆ. ಯಾವುದನ್ನು ತೋರಿಸಬೇಕು ಮತ್ತು ಯಾವುದನ್ನು ತೋರಿಸಬಾರದು ಎನ್ನುವುದರಲ್ಲಿ ರಾಜಕಾರಣ ಇದೆ. ಹಾಗಾಗಿ ಡಿ ಎಂ ನಂಜುಂಡಪ್ಪ ವರದಿ ಹಾಗೂ ಹನಗುಂದಿಮಠ್ ಅವರ ವರದಿಗಳು ನಮಗೆ ಗೊತ್ತಾಗುತ್ತಿಲ್ಲ. ಈ ವರದಿಗಳ ಬಗ್ಗೆ ನಮಗೆ ಗೊತ್ತಾಗಲಿಲ್ಲ ಎಂದರೆ ಧ್ವನಿ ಎತ್ತುವ ಪ್ರಶ್ನೆಯೇ ಬರುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಧ್ವನಿ ಇಲ್ಲದವರ ಸಾಮಾಜಿಕ ಭದ್ರತೆಯೇ ಸಂವಿಧಾನ: ಸೂಫಿ ಹಾಜಿ
“ಇಂದು ಮಾಧ್ಯಮಗಳು ಮಾಡುವ ಕೆಲಸವನ್ನು ನಾಗರಿಕರೇ ಮಾಡಬೇಕಿದೆ. ಇದಕ್ಕೆ ಪೂರಕವಾಗಿ ಡಿಜಿಟಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಪತ್ರಿಕೋದ್ಯಮ ಪದವಿ ಪಡೆದವರೇ ಇದನ್ನು ಮಾಡಬೇಕೆಂದಿಲ್ಲ. ಬೇರೆ ವಿಷಯಗಳನ್ನು ಓದಿ ಪತ್ರಕರ್ತರಾಗಿ ಉನ್ನತ ಸಾಧನೆ ಮಾಡಿರುವ ಮಾದರಿಗಳು ನಮ್ಮ ಮುಂದಿವೆ. ಸಾಮಾಜಿಕ ಮಾಧ್ಯಮ ಹಲವು ಉದ್ಯೋಗಾವಕಾಶಗಳನ್ನು ನಮ್ಮ ಮುಂದಿಟ್ಟಿದೆ. ವಿದ್ಯಾರ್ಹತೆ ಮೀರಿ ಇದರಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆ ಇದೆ” ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುನೀಂದ್ರ ಕುಮಾರ್, ಉಪನ್ಯಾಸಕ ರಾಮಚಂದ್ರ, ಮಾಧ್ಯಮ ಸಂಯೋಜಕ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ವಿದ್ಯಾರ್ಥಿ ಮುಖಂಡರುಗಳಾದ ದಯಾನಂದ್, ಹರೀಸ್ ವೇಂಕಟೇಶ್ ನಾಗಲಾಪುರ, ನವತೇಜ್, ಅಕ್ಷಯ್ ಕುಮಾರ್, ಮಾನವ ಬಂಧುತ್ವ ವೇದಿಕೆಯ ಸಂಯೋಜಕ ರಾಜಣ್ಣ, ಕರವೇ ಶಿವಕುಮಾರ್ ಸೇರಿದಂತೆ ಹಲವರು ಇದ್ದರು.