ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡು ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಡಾ. ಜಿ ಪರಮೇಶ್ವರ್ ಅವರನ್ನು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಪದಾಧಿಕಾರಿಗಳು ಭೇಟಿ ಮಾಡಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ ಅನೇಕ ಅಹವಾಲುಗಳನ್ನು ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪಿಟಿಸಿಎಲ್ ಕಾಯ್ದೆ ನೆಪ ಮಾಡಿಕೊಂಡು ದಲಿತರಿಗೆ ಮಂಜೂರಾದ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಉದ್ಯಮ ನಡೆಸಲು ದಲಿತ ಸಮುದಾಯಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಪಿಟಿಸಿಎಲ್ ಕಾಯ್ದೆಯಲ್ಲಿ ಭೂ ಪರಭಾರೆ ಬಗ್ಗೆ ವಿಶೇಷ ಶರತ್ತು ವಿಧಿಸಿರುವುದರಿಂದ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಪರಿಶಿಷ್ಟರಿಗೆ ಗೃಹ ನಿರ್ಮಾಣ ಸಾಲ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ನಿಯಮದಂತೆ ನಿಗದಿತ ಅವಧಿಯೊಳಗೆ ಕುಂದು ಕೊರತೆ ಸಭೆ ಕರೆಯುತ್ತಿಲ್ಲ ಎಂದು ದೂರಿದ್ದಾರೆ.
ಜಿಲ್ಲೆಯ ವಿಭಾಗ ಮಟ್ಟದಲ್ಲಿ ಮತ್ತು ಪ್ರತಿ ಪೊಲೀಸ್ ಠಾಣೆಯಲ್ಲಿಯೂ ದಲಿತರ ಕುಂದುಕೊರತೆ ಸಭೆ ಕರೆಯುತ್ತಿಲ್ಲ. ಕಾಟಾಚಾರಕ್ಕೆ ಎಂಬಂತೆ ದಾಖಲೆಗಳಲ್ಲಿ ತೋರಿಸಲು ಠಾಣಾ ಮಟ್ಟದಲ್ಲಿ ಸಭೆಗಳನ್ನು ಕರೆದಂತೆ ದಾಖಲೆಗಳನ್ನು ತಯಾರಿಸಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಎಲ್ಲ ಪೋಲಿಸ್ ಠಾಣೆಗಳಲ್ಲಿ ಎಸ್ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕೇಸು ದಾಖಲಾದಾಗ ಸ್ವತಃ ಠಾಣಾಧಿಕಾರಿಯೇ ಮುತುವರ್ಜಿ ವಹಿಸಿ ಪ್ರತಿದೂರು ದಾಖಲಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಊಟ ಸೇವಿಸಿದ ಬಳಿಕ 35 ಮಂದಿ ಸೈನಿಕರು ಅಸ್ಪಸ್ಥ; ಆಸ್ಪತ್ರೆಗೆ ದಾಖಲು
ಈ ವೇಳೆ ದಲಿತ ಸಂಘರ್ಷ ಸಮಿತಿ ಐಕ್ಯ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಸಂಚಾಲಕರಾದ ಸುಂದರ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ವಾಸುದೇವ ಮುಧೂರು, ವಿಶ್ವನಾಥ ಬೆಣ್ಣಂಪಳ್ಳಿ, ಪರಮೇಶ್ವರ ಉಪ್ಪೂರು, ರಮೇಶ್ ಕೆಳಾರ್ಕಳಬೆಟ್ಟು, ಆನಂದ ಬ್ರಹ್ಮಾವರ, ಜಿಲ್ಲಾ ಪದಾಧಿಕಾರಿಳಾದ ಸಂಜೀವ ಬಳ್ಕೂರು, ಸುರೇಶ ಹಕ್ಲಾಡಿ, ಮಂಜುನಾಥ ಬಾಳ್ಕುದ್ರು, ಅರುಣ್ ಪಾಡಿಗಾರ, ಶಿವಾನಂದ ಬಿರ್ತಿ ಹಾಗೂ ಇತರರು ಇದ್ದರು.