ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ, ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗದೆ, ನೀರಿಲ್ಲದೆ ಅಡಿಕೆ ಸೇರಿದಂತೆ ಧೀರ್ಘಕಾಲದ ಬೆಳೆಗಳು ಒಣಗಲಾರಂಭಿಸಿವೆ. ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯ ರೈತರು ಅಡಿಕೆ, ತೆಂಗು, ಬಾಳೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ನೀರಿಲ್ಲದ ಪರಿಣಾಮ ಬೆಳೆಗಳು ಒಣಗುತ್ತಿವೆ. ಸೀತಾನದಿ, ಎಣ್ಣೆಹೊಳೆಯ ನದಿ ಹಾಗೂ ಶಾಂಭವಿ ನದಿಗಳಲ್ಲಿ ನೀರಿಲ್ಲದಂತಾಗಿದೆ. ಬೋರ್ವೆಲ್, ಕೆರೆ-ಕಟ್ಟೆಗಳು ಒಣಗಿವೆ. ಸಮುದ್ರ ತೀರದಲ್ಲಿದ್ದರೂ, ಬೆಳೆಗಳಿಗೆ ಬೇಕಾದ ನೀರಿಲ್ಲದೆ ಮಳೆಗಾಗಿ ರೈತರು ಕಾದುಕುಳಿತಿದ್ದಾರೆ.
ಜಿಲ್ಲೆಯ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ಒಟ್ಟು 29,044 ಹೆಕ್ಟೆರ್ ಕೃಷಿ ಭೂಮಿಯಲ್ಲಿ 24,480 ಹೆಕ್ಟೆರ್ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಾಗುತ್ತಿದೆ. ಆದರೆ, ನೀರಿಲ್ಲದೆ ಬೇಸಿಗೆಯ ಬಿಸಿಲಿನಲ್ಲಿ ಅಡಿಕೆ, ತೆಂಗಿನ ಮರಗಳು ಒಣಗಲಾರಂಭಿಸಿವೆ. ಮರಗಳ ಗರಿಗಳು ಕಂದು ಬಣ್ಣಕ್ಕೆ ತಿರುಗಿವೆ. ಇಳುವರಿಯೂ ಕಡಿಮೆಯಾಗಿದ್ದು, ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ.
ನೀರಿಗಾಗಿ ಸುಮಾರು 600 ರಿಂದ 700 ಅಡಿ ಕೊಳವೆಬಾವಿ ಕೊರೆಸಲಾಗುತ್ತಿದೆ. ಆದರೂ, ಹಲವೆಡೆ ನೀರು ಸಿಗುತ್ತಿಲ್ಲ. ಪರಿಣಾಮ ರೈತರು ಮತ್ತಷ್ಟು ಸಾಲಕ್ಕೆ ತುತ್ತಾಗುತ್ತಿದ್ದಾರೆ. ಕೊರೆಯಲಾಗುತ್ತಿರುವ ಕೊಳವೆಬಾವಿಗಳಿಲ್ಲಿ ಸರಾಸರಿ 50% ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲವೆಂದು ತಿಳಿದುಬಂದಿದೆ.
ಒಣಗಿಹೋಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಮ್ಮ ಕಷ್ಟಗಳಿಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.