- ಭಾರತೀಯ ದಲಿತ ಪ್ಯಾಂಥರ್ ಮನವಿ
- ಪ್ರಸ್ತುತ ವರ್ಷದಿಂದಲೇ ಆರಂಭಿಸುವಂತೆ ಆಗ್ರಹ
ಕಂಪ್ಲಿ ನಗರದಲ್ಲಿ ಸ್ನಾತಕೋತ್ತರ ಪದವಿ ಕಾಲೇಜು ತೆರೆಯುವಂತೆ ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರರ ಮೂಲಕ ವಿಎಸ್ಕೆ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಸಿ ಮಾತಿಡದ ಸಂಘಟನೆಯ ತಾಲೂಕು ಅಧ್ಯಕ್ಷ ಎನ್ ಸೈಯ್ಯದ್ ವಾರೀಶ್, “ಕಂಪ್ಲಿ ನಗರದಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಖಾಸಗಿ ಪದವಿ ಕಾಲೇಜುಗಳಿದ್ದು ಪ್ರತಿ ವರ್ಷ ತಾಲೂಕು ವ್ಯಾಪ್ತಿಯಿಂದ 150 ರಿಂದ 200 ಜನ ವಿಧ್ಯಾರ್ಥಿಗಳು ಪದವಿ ನಂತರ ಉನ್ನತ ಶಿಕ್ಷಣ ಪಡೆಯಲು ಬಳ್ಳಾರಿ ಮತ್ತು ಕೊಪ್ಪಳ, ಗಂಗಾವತಿಗೆ ತೆರಳುತ್ತಾರೆ” ಎಂದು ಮಾಹಿತಿ ನೀಡಿದರು.
“ಈ ಎಲ್ಲ ವಿದ್ಯಾರ್ಥಿಗಳು ದೂರದ ಬಳ್ಳಾರಿ, ಕೊಪ್ಪಳ, ಗಂಗಾವತಿಗೆ ತೆರಳಲು ಕಂಪ್ಲಿ ತಾಲೂಕಿನ ತಮ್ಮ ಸ್ವಗ್ರಾಮಗಳಿಂದ ಕಂಪ್ಲಿ ನಗರಕ್ಕೆ ಬಂದು ನಂತರ ಕಂಪ್ಲಿಯಿಂದ 52 ಕಿಮೀ ದೂರದ ಬಳ್ಳಾರಿಗೆ, 54 ಕಿಮೀ ದೂರದ ಕೊಪ್ಪಳಕ್ಕೆ ಹಾಗೂ 15 ಕಿ.ಮೀ ದೂರದ ಗಂಗಾವತಿಗೆ ಹರಸಾಹಸ ಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವುದು ದುರ್ದೈವ” ಎಂದು ಬೇಸರ ವ್ಯಕ್ತಪಡಿಸಿದರು.
“ವಿಶ್ವ ವಿದ್ಯಾಲಯಗಳ ನಿಯಮದಂತೆ ನಿಗದಿಪಡಿಸಿದ ಸೀಟ್ಗಳು ಭರ್ತಿಯಾದ ನಂತರ, ದೂರದ ಹುಬ್ಬಳ್ಳಿ-ಧಾರವಾಡ, ಬೆಂಗಳೂರಿಗೆ ತೆರಳಿ ವಿದ್ಯಾಭ್ಯಾಸ ಮಾಡಬೇಕಾದ ಅನಿವಾರ್ಯತೆ ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿರುವುದು ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಆರ್ಥಿಕ ಹೊರೆಯಾಗಿದೆ. ಕೆಲವು ವಿದ್ಯಾರ್ಥಿಗಳು, ಪೋಷಕರು ಆರ್ಥಿಕ ಹೊರೆ ಹೊರಲಾರದೇ ಮಕ್ಕಳನ್ನ ವಿದ್ಯಾಭ್ಯಾಸಕ್ಕೆ ದೂರದೂರಿಗೆ ಕಳುಹಿಸಲು ಇಚ್ಚಿಸದೇ ಹಿಂಜರಿದು ಸ್ಥಗಿತಗೊಳಿಸಿದಂತಹ ಉದಾಹರಣೆಗಳು ಸಾಕಷ್ಟಿವೆ” ಎಂದು ಅಳಲನ್ನು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? : ಧಾರವಾಡ | ಈ ಚುನಾವಣೆ ಬಿಜೆಪಿ ವಿರುದ್ಧದ ಲಿಂಗಾಯತ ಹೋರಾಟ: ಗಂಗಾಧರ ದೊಡವಾಡ
“ಈ ಎಲ್ಲ ಕಾರಣಗಳಿಂದ ನೂತನವಾಗಿ ತಾಲೂಕು ಕೇಂದ್ರವಾಗಿ ಹೊರಹೊಮ್ಮಿರುವ ಕಂಪ್ಲಿಯು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರಲಿದ್ದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಂಪ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲವು ಕೊಠಡಿಗಳಿದ್ದು ಅಲ್ಲಿಯೇ ಪ್ರಸ್ತುವ ವರ್ಷದಿಂದ ಸ್ನಾತಕೋತ್ತರ ಪದವಿ ತರಗತಿಗಳನ್ನು ಸ್ಥಾಪಿಸಲು ಅಗತ್ಯ ಪ್ರಕ್ರಿಯೆಗಳನ್ನು ಕೂಡಲೇ ಕೈಗೊಳ್ಳುವಂತೆ” ಮನವಿ ಮಾಡಿಕೊಂಡರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ರಮೇಶ್ ಕುಂಟೋಜಿ, ಖಜಾಂಚಿ ರೋಷನ್ ಯಾಳ್ಪಿ, ಗೌರವಾಧ್ಯಕ್ಷ ಹೇಮಂತ್ ಕುಮಾರ್ ಡಿ, ಕಾರ್ಯಕಾರಣಿ ಸದಸ್ಯ ಗಂಗಾವತಿ ಕೃಷ್ಣ, ಸುಭಾನ್, ಗುರು ಶಾಸ್ತ್ರೀ, ಪಿ.ಸಿ ಈರಣ್ಣ, ಎಂ. ಪಂಪನ ಗೌಡ, ಪುರುಷೋತ್ತಮ್, ದೇವರಾಜ್ ಹೆಚ್, ಸಿ.ಡಿ.ಅನಿಲ್ ಕುಮಾರ್, ಧನರಾಜ್, ಕೆ. ಶಾಂತ ಕುಮಾರ್, ವೆಂಕಟೇಶ್, ಗಣೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.