- ಪ್ರಜಾತಂತ್ರದಲ್ಲಿ ಎಲ್ಲವೂ ಎಲ್ಲರಿಗೂ ಸಮನಾಗಿ ಸಿಗತಿಲ್ಲ
- ಜಾತಿ, ಲಿಂಗ, ವರ್ಗದ ಹೆಸರಲ್ಲಿ ಅಸಮಾನತೆ ಹೆಚ್ಚುತ್ತಿದೆ
ನನ್ನನ್ನು ಹೀಯಾಳಿಸಲು ನೀವು ಯಾರು ಅಂತ ಕೇಳುವ ಎದೆಗಾರಿಕೆ ನನ್ನಲ್ಲಿ ಹುಟ್ಟಿದೆ. ನನ್ನ ಕವನಗಳಲ್ಲಿ ಸಿಂಪತಿ ಇಲ್ಲ, ತುಳಿತಕ್ಕೆ ಒಳಗಾದವರ ನೋವಿದೆ. ಪ್ರತಿರೋಧ ಇದೆ ಎಂದು ತಮಿಳುನಾಡು ಶಿಕ್ಷಕಿ ಸುಕೀರ್ತ ರಾಣಿ ಹೇಳಿದರು.
ವಿಜಯಪುರದಲ್ಲಿ ಗದುಗಿನ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ವಿಜಯಪುರದ ಮೇ ಸಾಹಿತ್ಯ ಮೇಳ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ 9ನೇ ಮೇ ಸಾಹಿತ್ಯ ಮೇಳ ಎರಡನೇ ದಿನದ ಕವಿಗೋಷ್ಠಿಯಲ್ಲಿ ಆಶಯ ಮಾತುಗಳನ್ನಾಡಿದರು.
ಪ್ರಜಾತಂತ್ರದಲ್ಲಿ ಎಲ್ಲವೂ ಎಲ್ಲರಿಗೂ ಸಮನಾಗಿ ಸಿಗತಿದೆಯೆ? ಇಲ್ಲ. ಜಾತಿ, ಲಿಂಗ, ವರ್ಗದ ಹೆಸರಿನಲ್ಲಿ ಈಗಲೂ ಅಸಮಾನತೆ ತುಂಬಿ ತುಳುಕುತ್ತಿದೆ. ಈ ತುಳಿತವನ್ನು ಹೀಯಾಳಿಕೆಯನ್ನು ಖಂಡಿಸುತ್ತೇನೆ. ತಮಿಳುನಾಡಿನಲ್ಲಿ ಹಲವರು ಇಂತಹ ಸಮಾನ ಮನಸ್ಕ ಕವಿಗಳಿದ್ದಾರೆ. ದ್ರಾವಿಡ ಚಳವಳಿ ಮೂಲಕ ಬಂದಿರುವ ನಮ್ಮ ಮುಂದೆ ಕಮ್ಯುನಿಸ್ಟ್ ಮತ್ತು ಅಂಬೇಡ್ಕರ್ ಸಿದ್ಧಾಂತಗಳಿವೆ. ನನ್ನ ಕವನಗಳಲ್ಲಿ ಅದೆಲ್ಲ ಪ್ರತಿಫಲಿಸಿದೆ ಎಂದು ಎಂದು ತಿಳಿಸಿದರು.
ಕಳೆದ ಫೆಬ್ರವರಿಯಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ನನ್ನನ್ನು ದಲಿತ ಸಾಹಿತ್ಯ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದರು. ಅದು ಅದಾನಿ ಪ್ರಾಯೋಜಿತ ಪ್ರಶಸ್ತಿ ಆಗಿತ್ತು. ಯಾವ ಅದಾನಿಯಿಂದಾಗಿ ನನ್ನ ನಾಡಿನ ಜನರ ಹಕ್ಕುಗಳ ದಮನ ಆಗಿದೆಯೊ ಅವರ ಅವಕಾಶಗಳು ಕಳೆದು ಹೋಗಿವೆಯೊ ಅಂಥವರು ಕೊಡುವ ಪ್ರಶಸ್ತಿ ನನಗೆ ಬೇಡ ಎಂದು ನಾನು ನಿರಾಕರಿಸಿದೆ. ತಮಿಳುನಾಡಿನಲ್ಲಿ ಮಾತ್ರವಲ್ಲ ಎಲ್ಲೆಡೆ ಈ ಪರಿಸ್ಥಿತಿ ಇದೆ. ಈಗಲೂ ನಮಗೆ ನಮ್ಮದೇ ಭೂಮಿಯನ್ನು ಹೊಂದುವ ಅವಕಾಶಗಳಿಲ್ಲ. ಸ್ಮಶಾನ ಭೂಮಿಗಳು ಕೂಡ ಮೇಲಿನವರಿಗೂ ನಮಗೂ ಬೇರೆ ಬೇರೆ ಇವೆ. ಸರ್ಕಾರಕ್ಕೆ ಇದೊಂದು ಸಂಗತಿಯೇ ಅಲ್ಲ. ಅದು ಇಂತಹದರ ವಿರುದ್ಧ ಏನೂ ಕ್ರಮ ಕೈಗೊಳ್ಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರಿಗೆ ಸಿಗುವ ಪ್ರಜಾತಾಂತ್ರಿಕ ಅನುಕೂಲಗಳೇ ಬೇರೆ. ಇತರರಿಗೆ ಸಿಗುವ ಅವಕಾಶಗಳು ಬೇರೆ. ಇದನ್ನು ಡೆಮಾಕ್ರಸಿ ಎಂದು ಹೇಗೆ ಕರೆಯುವಿರಿ? ನನ್ನ ಕವನಗಳು ಯಾವಾಗಲೂ ಇದನ್ನೇ ಪ್ರಶ್ನಿಸುತ್ತವೆ. ಜಾತಿ, ಗುಲಾಮಗಿರಿಗಳನ್ನು ಮೆಟ್ಟಿ ನಿಂತಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.
ಕೊನೆಯಲ್ಲಿ ಸುಕೀರ್ತ ರಾಣಿ ಅವರು ತಮ್ಮ ಕವಿತೆ “ಹುಚ್ಚೆ ಹೊಯ್ಯಲಾದರು ಬಿಡಿ” ಓದಿ ಸಭಿಕರ ಗಮನ ಸೆಳೆದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅಂಕಣಕಾರ್ತಿ ಸಬಿತಾ ಬನ್ನಾಡಿ ಮಾತನಾಡಿ, ಕನ್ನಡ ಕವಿಗಳು ಒಂದೆ ದಾಟಿಯಲ್ಲಿ ಓದುತ್ತಾ ಬರುತ್ತಿದ್ದಾರೆ. ಆ ದಾಟಿಯನ್ನು ಇಂದಿನ ಮುಂದಿನ ಕವಿಗಳು ಮುರಿದು ಓದಬೇಕು ಎಂದು ಹೇಳಿದರು.
ಜನಪದರ ಸಾಹಿತ್ಯವೇ ಸ್ವಾಭಾವೋಕ್ತಿ ಯಾಗಿರುತ್ತದೆ. ಜನ ಸಾಹಿತ್ಯ ಅನುಭವ ಮತ್ತುಲೋಕಾನುಭ ಕಟ್ಟಿಕೊಡುವ ಕ್ರಮ ಇದೆಯಲ್ಲ, ಅದು ಬದುಕಿನ ಚಲುವಿನ ಸತ್ವವನ್ನು ಹೇಳುತ್ತಿದೆ. ಅದಕ್ಕೆ ಸಾವಿರ ವರ್ಷಗಳ ಚರ್ಚೆ ಮಾಡಬೇಕಿಲ್ಲ, ಇಂತಹ ಸಾಹಿತ್ಯದ ಕುರಿತೇ ನಾವು ಹೇಳುತ್ತಿರುವುದೇ ಸ್ವಾಭಾವೋಕ್ತಿ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ವ್ಯವಸ್ಥೆಯಲ್ಲಿ ನಮ್ಮನ್ನು ಪಳಗಿಸಲಾಗಿದೆ, ಎಷ್ಟು ಪಳಗಿಸಲಾಗಿದೆ ಎಂದರೆ ಅವರು ತುಳಿದು ತುಳಿದು ಹದಗೊಂಡ ಬ್ರೆಡ್ ಮಾದರಿ, ತುಳಿದವರಿಗೆ ಆಹಾರವಾಗಿದ್ದೇವೆ. ಇದ್ದನ್ನು ಮುರಿಯಲು ಕವಿತೆಗೆ ಸಾಧ್ಯವಾಗಬೇಕು ಎಂದರು.
ಹಾಡುತ್ತಲೆ ನಮ್ಮ ಜನಪದರು, ಕಷ್ಟದ ಜೊತೆಗೆ ಸುಖದ ಕುರಿತು ಹೇಳಿದ್ದಾರೆ. ಸುಖ ನಿಮಗಷ್ಟೆ ಅಲ್ಲ, ಅದು ನಮಗೂ ಗೊತ್ತು, ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂದು ಜನಪದರು ಹೇಳುತ್ತಾರೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಂಟು ಪ್ರಮುಖ ನಿರ್ಣಯದೊಂದಿಗೆ ‘ಮೇ ಸಾಹಿತ್ಯ ಮೇಳ’ ಸಮಾರೋಪ