- ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಎಂಟು ನಿರ್ಣಯ ಮಂಡಿಸಿದ ಸಂಘಟಕ ಬಸವರಾಜ ಸೂಳಿಭಾವಿ
- ದೆಹಲಿಯಲ್ಲಿ ಕುಸ್ತಿಪಟುಗಳ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಸಾಂಕೇತಿಕ ಪ್ರತಿಭಟನೆ
ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಹಿಟ್ನಳ್ಳಿಯಲ್ಲಿ ಆರಂಭಿಸಲಾಗಿರುವ ಬಿ ಟೆಕ್ (ಕೃಷಿ) ಮಹಾವಿದ್ಯಾಲಯ ಮತ್ತು ಆಲಮೇಲಕ್ಕೆ ಮಂಜೂರಾದ ತೋಟಗಾರಿಕೆ ಮಹಾವಿದ್ಯಾಲಯ ಮರು ಆರಂಭ ಸೇರಿದಂತೆ ಎಂಟು ಪ್ರಮುಖ ನಿರ್ಣಯಗಳೊಂದಿಗೆ ವಿಜಯಪುರದಲ್ಲಿ ಎರಡು ದಿನಗಳ ಕಾಲ ನಡೆದ ‘ಮೇ ಸಾಹಿತ್ಯ ಮೇಳ’ವು ಭಾನುವಾರ ಸಂಜೆ ಸಮಾರೋಪಗೊಂಡಿತು.
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗದುಗಿನ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ವಿಜಯಪುರದ ಮೇ ಸಾಹಿತ್ಯ ಮೇಳ ಬಳಗದ ಸಹಯೋಗದಲ್ಲಿ ಮೇ, 27-28ರಂದು ನಡೆದ ಮೇಳದಲ್ಲಿ ಸಂಘಟಕ, ಚಿಂತಕ ಬಸವರಾಜು ಸೂಳಿಭಾವಿ ಈ ಪ್ರಮುಖ ನಿರ್ಣಯಗಳನ್ನು ಮಂಡಿಸಿದರು.
ಅಲ್ಲದೇ, ಈ ನಿರ್ಣಯಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರದ ಗಮನಕ್ಕೂ ತಂದು ಕಾರ್ಯರೂಪಕ್ಕೆ ತರಲು ಯತ್ನಿಸುವುದಾಗಿ ತಿಳಿಸಿದರು.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ, ನ್ಯಾಯಯುತ ಬೆಂಬಲ ಬೆಲೆ ಘೋಷಿಸಬೇಕು. ಸರ್ಕಾರದಿಂದ ಕೋಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮಂಜೂರಾಗಿರುವ ವಿವಿಧ ಏತನೀರಾವರಿ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಭೀಮಾ ನದಿಯ ನೀರಿನ ಸಂಪೂರ್ಣ ಸದ್ಬಳಕೆ ಜಿಲ್ಲೆಯ ರೈತರಿಗಾಗಬೇಕು. ಡೋಣಿ ನದಿ ನೀರು ಸಂಪೂರ್ಣ ಸದ್ಬಳಕೆಯಾಗಬೇಕು.
ಜಿಲ್ಲೆಯಿಂದ ಅನೇಕ ಜನ ತಮ್ಮ ಜೀವನೋಪಾಯಕ್ಕಾಗಿ ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶಗಳಿಗೆ ಪ್ರತಿ ವರ್ಷ ಗುಳೇ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಅವರ ಜೀವನೋಪಾಯಕ್ಕೆ ನಿರಂತರ ಉದ್ಯೋಗ ಕಲ್ಪಿಸುವ ಸಲುವಾಗಿಯೇ ಕೈಗಾರಿಕೆಗಳನ್ನು ಸ್ಥಾಪಿಸಬೇಕು.
ವಿಜಯಪುರದಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಒಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಸರ್ಕಾರಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಬೇಕು.
ಜಿಲ್ಲೆಯಲ್ಲಿ ಬಹಳದೊಡ್ಡ ಸಂಖ್ಯೆಯಲ್ಲಿ ವಸತಿ ರಹಿತ ಕಾರ್ಮಿಕರಿದ್ದು, ಇವರೆಲ್ಲರಿಗೂ ನಿವೇಶನ ಹಂಚುವ ಹಾಗೂ ಮನೆ ಕಟ್ಟಿಸಿಕೊಡುವ ಕೆಲಸವಾಗಬೇಕು.
ಪಡಿತರ ವ್ಯವಸ್ಥೆ ಮೂಲಕ ಐದು ಕೆಜಿ ಅಕ್ಕಿಯ ಜೊತೆಗೇ 5 ಕೆಜಿ ಗೋಧಿ ಅಥವಾ ಐದು ಕೆಜಿ ಬಿಳಿಜೋಳ ಕೊಡುವ ಕೆಲಸವಾಗಬೇಕು ಎಂಬ ನಿರ್ಣಯಗಳನ್ನು ಸೂಳಿಭಾವಿ ಮಂಡಿಸಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಒಡಿಶಾ ಎದುರಿಸುತ್ತಿರುವ ಮಾಸಾಶನ ಸಮಸ್ಯೆ ಕರ್ನಾಟಕವನ್ನು ಕಾಡದಿರಲಿ
ಸಮಾರೋಪದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಕಾಳೇಗೌಡ ನಾಗವಾರ ವಹಿಸಿದ್ದರು. ಪುಣೆಯ ನೀರಜ್ ಜೈನ್ ಸಮಾರೋಪ ನುಡಿಗಳನ್ನಾಡಿದರು.
ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಭಾಗ್ಯಜ್ಯೋತಿ ಹಿರೇಮಠ್ ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ, ಎನ್ ವೆಂಕಟೇಶ್ ಅವರಿಗೆ ‘ಬಂಡಿ, ನರಸಪ್ಪ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿ, ಮಾಲತಿ ಪಟ್ಟಣಶೆಟ್ಟಿ ಅವರಿಗೆ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ’, ರೈತ ಮುಖಂಡ ಜೆ ಎಂ ವೀರಸಂಗಯ್ಯ ಅವರಿಗೆ ‘ನಿಂಗಪ್ಪ ಸಂತಿ ರೈತಚೇತನ ಪ್ರಶಸ್ತಿ, ರಂಗಕರ್ಮಿ ಸಿ. ಬಸವಲಿಂಗಯ್ಯ ಅವರಿಗೆ ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇದೇ ವೇಳೆ ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳ ಬಂಧನ ಖಂಡಿಸಿ ಹಾಗೂ ಲೈಂಗಿಕ ಕಿರುಕುಳದ ಆರೋಪಿ ಸಂಸದ ಬೃಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.