ಕೆಂಪು ಮೆಣಸಿಕಾಯಿಗೆ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಿಲ್ಲಾಧಿಕಾರಿ ಟಿ. ಬೂಬಾಲನ ಅವರಿಗೆ ಮನವಿ ಸಲ್ಲಿಸಿದ್ದು, ಸರ್ಕಾರದಿಂದ ಬೆಲೆ ನೀಡಿ ಖರೀದಿಸುವಂತೆ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಪ್ರತಿವರ್ಷ ಮುಂಗಾರಿನಲ್ಲಿ 13,000 ಹೆಕ್ಟರ್ ಹಾಗೂ ಹಿಂಗಾರಿನಲ್ಲಿ ಸುಮಾರು 3500 ಹೆಕ್ಟರ್ ಕೆಂಪು ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದು, ಸಾಕಷ್ಟು ಹಣ ಹಾಗೂ ಸಮಯ ಕೊಟ್ಟು ಕೂಸಿನಂತೆ ಜೋಪನಮಾಡಿ ಬೆಳೆದ ಬೆಳೆಗೆ ಈಗ ಬೆಲೆ ಇಲ್ಲದೇ ರೈತರು ಸಂಕಷ್ಟ ಪಡುತ್ತಿದ್ದಾರೆ, ಇದಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಾದ ಟಿ. ಬೂಬಾಲನ ಅವರಿಗೆ ಮನವಿ ಸಲ್ಲಿಸಿ ಸರಕಾರದಿಂದ ಬೆಂಬಲ ಬೆಲೆ ನೀಡಿ ಖರೀದಿ ಸಬೇಕೆಂದು ರೈತರು ಆಗ್ರಹಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ ಕಳೆದ ಭಾರಿ ಕ್ವಿಂಟಾಲ ಮೆಣಸಿನಕಾಯಿಗೆ 30,000 ರೂ.ಗಳ ವರೆಗೆ ಖರೀದಿಸಲಾಗಿತ್ತು. ಆದರೆ, ಈಗ ಬೆಲೆ ಪಾತಾಳ ಸೇರಿದಂತಾಗಿದೆ. ಈಗ ಕ್ವಿಂಟಾಲಗೆ 9000ದ ಆಚೆ ಈಚೆ ಕೇಳುತ್ತಿದ್ದಾರೆ. ಇದರಲ್ಲಿ ದಲ್ಲಾಳಿಗಳ ಕೈವಾಡದಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ರೈತರು ಖರ್ಚು ಮಾಡಿರುವಷ್ಟು ಸಹ ಅವರ ಕೈಗೆ ಸಿಗುತ್ತಿಲ್ಲ ಎಂದರು.
ಆದ್ದರಿಂದ, ಕೂಡಲೇ ಸರ್ಕಾರ ಬೆಂಬಲ ಬೆಲೆ ನೀಡಿ. ರೈತರ ಪರವಾಗಿ ಸರ್ಕಾರ ಇರಬೇಕು. ಕೂಡಲೇ ಸಂಬಂಧಿಸಿದ ಎ.ಪಿ.ಎಂ.ಸಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಡನೆ ಚರ್ಚಿಸಿ ಸರ್ಕಾರಕ್ಕೆ ಒಂದು ಸೂಕ್ತ ವರದಿ ಕಳುಹಿಸಿ ಒಳ್ಳೆಯ ಬೆಲೆಯೊಂದಿಗೆ ಮೆಣಸಿನಕಾಯಿ ಖರೀದಿಸಬೇಕೆಂದು ಆಗ್ರಹಿಸಿದರು.
ಈ ವರ್ಷ ಸರಿಯಾಗಿ ಮಳೆ ಬಾರದೇ ಸಾಲ ಸೋಲ ಮಾಡಿರುವ ರೈತನಿಗೆ ಮುಂಗಾರು ಹಾಗೂ ಹಿಂಗಾರು ಮಳೆ ಆಗದೇ, ಯಾವ ಬೆಳೆ ಕೂಡಾ ಸರಿಯಾಗಿ ಬೆಳೆಯದೇ ಆತ್ಮಹತ್ಯೆ ಅಂತಹ ಕೆಟ್ಟ ಘಟನೆಗಳು ನಡೆದಿರುವುದು ಕಂಡುಬರುತ್ತಿವೆ, ಈಗಾಗಲೇ ಹಿಂಗಾರು ಸಹ ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರಿಗೆ ಪರಿಹಾರ ಹಾಗೂ ಫಸಲ ಭೀಮಾ ಯೋಜನೆಯಡಿ ವಿಮೆ ತುಂಬಿರುವ ರೈತರಿಗೂ ವಿಮಾ ಪರಿಹಾರ ಕೊಡಬೇಕು ಎಂದರು. ವಿಮೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ಮಾಡಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಬೇಕು ಎಂದರು.
ಈ ವೇಳೆ ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ಸಹಸಂಚಾಲಕ ಮಹಾಂತೇಶವ ಮಮದಾಪುರ, ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ತಾ.ಪ್ರಧಾನ ಕಾರ್ಯದರ್ಶಿ ಮಲ್ಲಿಕರ್ಜುನ ಗೋಡೆಕಾರ, ವಿಜಯಪುರ ನಗರ ಘಟಕದ ಅಧ್ಯಕ್ಷ ಸಂಗಪ್ಪ ಚಲವಾದಿ, ಮುಖಂಡರಾದ ತಪ್ಪಣ್ಣ ನಾಟಿಕಾರ, ಪ್ರಭು ಕಾರಜೋಳ, ಮಹಾಂತೇಶ ಮಹಾಂತಮಠ ಇದ್ದರು.