ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶಕ್ಕೆ ಮುದ್ದೇಬಿಹಾಳ ತಾಲೂಕು ಪಂಚಾಯ್ತಿಯಿಂದ ಪಟ್ಟಣದಲ್ಲಿ ನಿರ್ಮಿಸಿರುವ ಮಳಿಗೆಗಳು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.
ಪಟ್ಟಣದ ಲಕ್ಷ್ಮೀ ಚಿತ್ರಮಂದಿರದ ಎದುರಿಗೆ ಮುದ್ದೇಬಿಹಾಳದಿಂದ ತಂಗಡಗಿಗೆ ಹೋಗುವ ರಸ್ತೆಯಲ್ಲಿ ಕಳೆದ ಹದಿಮೂರು ವರ್ಷಗಳಿಂದ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ, ಈವರೆಗೆ ಹರಾಜು ಆಗದೇ ಪಾಳುಬಿದ್ದಿದ್ದು, ಕುಡುಕರು, ಪುಂಡಪೋಕರಿಗಳಿಗೆ ಅಕ್ರಮ ಚಟುವಟಿಕೆಯ ತಾಣವಾಗಿ ಬದಲಾಗಿದೆ.
ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆಯಡಿ 2010-11ನೇ ಸಾಲಿನಲ್ಲಿ ಒಂದು ಸಂಘಕ್ಕೆ ಅಥವಾ ಒಕ್ಕೂಟಕ್ಕೆ ಒಂದು ಮಳಿಗೆಯನ್ನು ಹಂಚಿಕೆ ಮಾಡಲು ಪಟ್ಟಣದ ವ್ಯಾಪ್ತಿಯಲ್ಲಿ 16 ಮಳಿಗೆಗಳನ್ನು ನಿರ್ಮಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಟಿ.ಎಂ. ಕರಜಗಿ ಎಂಬುವವರು ಹಾಕಿದ್ದ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯಿಸಿದ್ದ ತಾಲೂಕು ಪಂಚಾಯ್ತಿ ಅಧಿಕಾರಿಗಳು, ಮಳಿಗೆಗಳ ಕುರಿತು ಮಾಹಿತಿ ಇಲ್ಲ ಎಂದು ತಿಳಿಸಿದ್ದರು. ಪ್ರತಿ ಮಳಿಗೆಗೆ ಕೇವಲ ₹1,413 ಬಾಡಿಗೆ ನಿಗದಿಪಡಿಸಲಾಗಿತ್ತು. 2018ರಲ್ಲಿ ಮಳಿಗೆಗಳ ಕುರಿತು ಕಚೇರಿಯಲ್ಲಿ ಮಾಹಿತಿಯೇ ಇಲ್ಲವೇ? ಮಳಿಗೆ ಹರಾಜು ಮಾಡದೇ ಅಧಿಕಾರಿಗಳು ಪಂಚಾಯತ್ ರಾಜ್ ಕಾಯಿದೆ ಉಲ್ಲಂಘನೆ ಮಾಡಿದ್ದಾರೆ. ಇಲಾಖೆ ತನಿಖೆ ನಡೆಸಿ ತಪ್ಪು ಮಾಡಿದ ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ಮಳಿಗೆಗಳ ಹರಾಜಿಗೆ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.