ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಚಿತ್ರದುರ್ಗದ ಅಭ್ಯರ್ಥಿಯನ್ನು ಘೋಷಿಸದೇ ಕುತೂಹಲ ಮೂಡಿಸಿದ್ದ ಬಿಜೆಪಿ ಹೈಕಮಾಂಡ್, ಕೊನೆಗೂ ಬುಧವಾರ ಸಂಜೆ ಅಭ್ಯರ್ಥಿಯನ್ನು ಘೋಷಿಸಿದೆ.
ಚಿತ್ರದುರ್ಗ ಎಸ್ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೋವಿಂದ ಕಾರಜೋಳ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದ್ದು, ಹೆಸರನ್ನು ಬುಧವಾರ ಸಂಜೆ ಅಧಿಕೃತವಾಗಿ ಘೋಷಿಸಿದೆ. ಹಾಲಿ ಸಂಸದ ಎ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ @GovindKarjol ಅವರಿಗೆ ಅಭಿನಂದನೆಗಳು.
ವಿಜಯೀಭವ…#PhirEkBaarModiSarkar#ಮತ್ತೊಮ್ಮೆಮೋದಿಸರ್ಕಾರ pic.twitter.com/642n45eIbA
— BJP Karnataka (@BJP4Karnataka) March 27, 2024
ಚಿತ್ರದುರ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾದಾರ ಚೆನ್ನಯ್ಯ ಶ್ರೀಗಳಿಗಾಗಿಯೇ ಟಿಕೆಟ್ ಘೋಷಣೆ ವಿಳಂಬ ಆಗುತ್ತಿದೆ ಎಂಬ ಚರ್ಚೆಗಳು ಶುರುವಾಗಿದ್ದವು. ಆದರೆ, ಅವರು ರಾಜಕೀಯ ಪ್ರವೇಶಕ್ಕೆ ಆಸಕ್ತಿ ತೋರಿಸದ ಹಿನ್ನೆಲೆ ಅವರನ್ನು ಮನವೊಲಿಸುವ ಕಾರ್ಯ ಬಿಜೆಪಿ ಹೈಕಮಾಂಡ್ನಿಂದ ನಡೆಸುತ್ತಿವೆ ಎಂದು ಸುದ್ದಿ ಹಬ್ಬಿತ್ತು. ಮಾದಾರ ಚೆನ್ನಯ್ಯ ಶ್ರೀಗಳನ್ನು ಕರ್ನಾಟಕದ ಯೋಗಿಯಾಗಿ ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಈಗ ಎಲ್ಲದಕ್ಕೂ ತೆರೆ ಎಳೆದಿರುವ ಬಿಜೆಪಿ ಹೈಕಮಾಂಡ್, ಅಭ್ಯರ್ಥಿಯಾಗಿ ಗೋವಿಂದ ಕಾರಜೋಳ ಅವರನ್ನು ಆಯ್ಕೆ ಮಾಡಿದೆ.
ಚಿತ್ರದುರ್ಗ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲು ಕ್ಷೇತ್ರವಾಗಿದೆ. ಸೂಕ್ತ ಅಭ್ಯರ್ಥಿ ಸಿಗದ ಹಿನ್ನೆಲೆಯಲ್ಲಿ ವಿಜಯಪುರ ಮೂಲದವರಾದರೂ, ಹಿರಿಯ ಹಾಗೂ ಸಮುದಾಯದ ನಾಯಕ ಎಂಬ ವರ್ಚಸ್ಸಿನಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಹೆಸರು ಘೋಷಣೆಯ ಮೂಲಕ ಬಿಜೆಪಿ ತಾನು ಸ್ಪರ್ಧಿಸುತ್ತಿರುವ ಎಲ್ಲ 25 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದ್ದು, ಬಿ ಎಲ್ ಚಂದ್ರಪ್ಪ ಅವರಿಗೆ ಟಿಕೆಟ್ ನೀಡಿತ್ತು.
ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಕೋಲಾರ, ಮಂಡ್ಯ ಹಾಗೂ ಹಾಸನ ಕ್ಷೇತ್ರವನ್ನು ಜೆಡಿಎಸ್ಗೆ ಬಿಜೆಪಿ ಬಿಟ್ಟುಕೊಟ್ಟಿದೆ.
ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ:
(ಕೋಲಾರ ಕ್ಷೇತ್ರದ ಟಿಕೆಟ್ ಅನ್ನು ಜೆಡಿಎಸ್ ಇನ್ನೂ ಅಂತಿಮಗೊಳಿಸಿಲ್ಲ)