ಕಳೆದ 10 ವರ್ಷಗಳಲ್ಲಿ 5.3 ಲಕ್ಷ ಕೋಟಿ ರೂ. ಆನ್‌ಲೈನ್ ವಂಚನೆ; ಬ್ಯಾಂಕ್‌ಗಳ ವರದಿ

Date:

ಕಳೆದ 10 ವರ್ಷಗಳಲ್ಲಿ ಆನ್‌ಲೈನ್‌ ಮೂಲಕ 5.3 ಲಕ್ಷ ಕೋಟಿ ರೂ. ವಂಚನೆಯಾಗಿದೆ ಎಂದು ಭಾರತೀಯ ಬ್ಯಾಂಕ್‌ಗಳು ವರದಿ ಮಾಡಿವೆ. ‘ಮನಿ ಕಂಟ್ರೋಲ್‌’ ಸುದ್ದಿಸಂಸ್ಥೆ ಸಲ್ಲಿಸಿದ್ದ ಆರ್‌ಟಿಐಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಉತ್ತರಿಸಿದ್ದು, ವಂಚನೆ ಬಗ್ಗೆ ಬ್ಯಾಂಕ್‌ಗಳ ವರದಿಯ ಕುರಿತು ಮಾಹಿತಿ ನೀಡಿದೆ.

2013-14ರ ಆರ್ಥಿಕ ವರ್ಷದಿಂದ 2022-23ರ ಆರ್ಥಿಕ ವರ್ಷದವರೆಗೆ ಒಟ್ಟು 4,62,733 ಲಕ್ಷ ಕೋಟಿ ರೂ. ವಂಚನೆಯಾಗಿರುವುದಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವರದಿ ಮಾಡಿವೆ ಎಂದು ಆರ್‌ಬಿಐ ಒದಗಿಸಿರುವ ಡೇಟಾ ಹೇಳಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಕಾರ, 10 ವರ್ಷಗಳಲ್ಲಿ ಮಹಾರಾಷ್ಟ್ರದ ಬ್ಯಾಂಕ್‌ಗಳು ಅತೀ ಹೆಚ್ಚು ವಂಚನೆ ಪ್ರಕರಣಗಳನ್ನು ದಾಖಲಿಸಿವೆ. ಆ ರಾಜ್ಯದಲ್ಲಿ ಒಟ್ಟು 1.59 ಲಕ್ಷ ಪ್ರಕರಣಗಳು ವರದಿಯಾಗಿದ್ದು, 2.24 ಲಕ್ಷ ಕೋಟಿ ರೂ. ವಂಚನೆಯಾಗಿದೆ. ನಂತರ ಸ್ಥಾನದಲ್ಲಿ ದೆಹಲಿ, ಹರಿಯಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಿವೆ. ಇನ್ನು, ಕರ್ನಾಟಕ, ಗುಜರಾತ್, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕಳೆದ 10 ವರ್ಷಗಳಲ್ಲಿ ಒಟ್ಟು 8,000 ರಿಂದ 12,000 ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ನಡೆದಿರುವುದಾಗಿ ಬ್ಯಾಂಕ್‌ಗಳು ವರದಿ ಮಾಡಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಫೋಟೋ ಕ್ರೆಡಿಟ್‌: ಮನಿ ಕಂಟ್ರೋಲ್
ಚಿತ್ರ ಕೃಪೆ: ಮನಿ ಕಂಟ್ರೋಲ್

ಕೇರ್‌ರೇಟಿಂಗ್ಸ್‌, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆಯ ಹಿರಿಯ ನಿರ್ದೇಶಕ ಸಂಜಯ್ ಅಗರ್‌ವಾಲ್, “ವಂಚನೆಯಲ್ಲಿ ಏರಿಕೆಯಾಗುತ್ತಿರುವುದನ್ನು ಬ್ಯಾಂಕ್‌ಗಳು ಗಮನಿಸವೆ. ಆದರೆ, ಬ್ಯಾಂಕ್‌ಗಳು ಕ್ರೆಡಿಟ್ ರಿಸ್ಕ್ ಮೌಲ್ಯಮಾಪನದತ್ತ ಗಮನಹರಿಸುತ್ತಿವೆ” ಎಂದು ಹೇಳಿದ್ದಾರೆ.

ಆತಂಕಕಾರಿ ಏರಿಕೆ

ಆರ್‌ಬಿಐನ ಇತ್ತೀಚಿನ ಕೆಲವು ವಾರ್ಷಿಕ ವರದಿಗಳ ವಿಶ್ಲೇಷಣೆ ಪ್ರಕಾರ, ಹೆಚ್ಚಿನ ವಂಚನೆಗಳು ಮುಂಗಡ, ಕಾರ್ಡ್‌ಗಳು ಹಾಗೂ ಡಿಜಿಟಲ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಸಂಬಂಧಿಸಿವೆ ಎಂದು ತೋರಿಸಿದೆ.

ಉದಾಹರಣೆಗೆ, ಆರ್ಥಿಕ ವರ್ಷ-2023ರಲ್ಲಿ, ಬ್ಯಾಂಕ್‌ಗಳು ಕಾರ್ಡ್‌ಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಗರಿಷ್ಠ ವಂಚನೆಗಳನ್ನು ವರದಿ ಮಾಡಿದೆ. ಜೊತೆಗೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಂಚನೆಯೂ ಹೆಚ್ಚಿನ ಪ್ರಮಾಣದಲ್ಲಿದೆ. 2023ರಲ್ಲಿ ವರದಿಯಾದ 13,530 ಪ್ರಕರಣಗಳಲ್ಲಿ 6,659 ಪ್ರಕರಣಗಳು ಕಾರ್ಡ್‌ಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ವಂಚನೆಯಾಗಿರುವ ಪ್ರಕರಣಗಳಾಗಿವೆ. ಮುಂಗಡ (ಅಡ್ವಾನ್ಸ್‌) ಮೂಲಕ 4,109 ವಂಚನೆ ಪ್ರಕರಣಗಳು ನಡೆದಿರುವುದಾಗಿಯೂ ವರದಿ ಮಾಡಿವೆ.

2022ರಲ್ಲಿ, ವರದಿಯಾದ ಒಟ್ಟು 9,097 ವಂಚನೆ ಪ್ರಕರಣಗಳಲ್ಲಿ, ಮುಂಗಡ ಮೂಲಕ 3,833 ಪ್ರಕರಣಗಳು ನಡೆದಿದ್ದರೆ, ಕಾರ್ಡ್‌ಗಳು ಮತ್ತು ಇಂಟರ್ನೆಟ್ ಮೂಲಕ 3,596 ಪ್ರಕರಣಗಳು ಘಟಿಸಿವೆ. ಇನ್ನು, 2021ರ ಆರ್ಥಿಕ ವರ್ಷದಲ್ಲಿ, 3,476 ಮುಂಗಡ ವಂಚನೆಗಳು, ಹಾಗೂ ಕಾರ್ಡ್‌ಗಳು ಮತ್ತು ಇಂಟರ್ನೆಟ್ ಮೂಲಕ 2,545 ಪ್ರಕರಣಗಳು – ಒಟ್ಟು 7,338 ಪ್ರಕರಣಗಳು ವರದಿಯಾಗಿವೆ.

ಇದೆಲ್ಲದರ ನಡುವೆ, 2024ರ ಫೆಬ್ರವರಿ 2ರಂದು ವಂಚನೆಗೆ ಒಳಗಾಗುತ್ತಿರುವ ಗ್ರಾಹಕರನ್ನು ಎಚ್ಚರಿಸುವ ಕ್ರಮಕ್ಕೆ ಮುಂದಾಗಿದೆ. ಗ್ರಾಹಕರ ‘ಕೆವೈಸಿ’ ಮಾನದಂಡಗಳನ್ನು ನವೀಕರಿಸುವ ಹೆಸರಿನಲ್ಲಿ ನಡೆಯುವ ವಂಚನೆಗಳ ವಿರುದ್ಧ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಫೋನ್ ಕರೆಗಳು, ಎಸ್‌ಎಂಎಸ್ ಅಥವಾ ಇಮೇಲ್‌ಗಳು ಸೇರಿದಂತೆ ನಾನಾ ರೀತಿಯಲ್ಲಿ ವಂಚಕರು ಸಂವಹನ ನಡೆಸಬಹುದು. ವೈಯಕ್ತಿಕ ಮಾಹಿತಿಗಳನ್ನು ಪಡೆಯಲು ಅವರು ಚಾಕಚಕ್ಯತೆಯಿಂದ ಮಾತನಾಡಬಹುದು. ಅಂತಹ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ, ಡಿಜಿಟಲ್ ಬ್ಯಾಂಕಿಂಗ್ ಮತ್ತು ಆನ್‌ಲೈನ್‌ ಪಾವತಿ ಸೇವೆಗಳ ಬಳಕೆಯು ಹೆಚ್ಚುತ್ತಿದ್ದು, ಅದರ ಜೊತೆಗೆ, ಬ್ಯಾಂಕಿಂಗ್‌ ವಂಚನೆಗಳು ಏರಿಕೆ ಕಂಡಿವೆ ಎಂದು ತಜ್ಞರು ಹೇಳಿದ್ದಾರೆ.

“ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಬಳಕೆಯು ಗಣನೀಯವಾಗಿ ಜಿಗಿತ ಕಂಡಿದೆ. ಗ್ರಾಹಕರು ಬ್ಯಾಂಕಿಂಗ್ ಅಪ್ಪಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಇದೇ ಸಮಯದಲ್ಲಿ ದೂರುಗಳು ಮತ್ತು ವಂಚನೆಗಳು ಹೆಚ್ಚುತ್ತಿವೆ” ಎಂದು ಆರ್‌ಬಿಐ ಮಾಜಿ ಕಾರ್ಯನಿವಾರ್ಹಕ ನಿರ್ದೇಶಕ ಚಂದನ್‌ ಸಿನ್ಹಾ ಹೇಳಿದ್ದಾರೆ.

‘ಎಐ’ ಮೊರೆ ಹೋಗುತ್ತಿರುವ ಬ್ಯಾಂಕ್‌ಗಳು

ಬ್ಯಾಂಕಿಂಗ್‌ ಸೇವೆಗಳನ್ನು ಹೆಚ್ಚಿಸಲು ಮತ್ತು ವಂಚನೆ ಪ್ರಕರಣಗಳನ್ನು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ (ಎಐ), ‘ಮಷಿನ್ ಲರ್ನಿಂಗ್ (ಎಂಎಲ್‌) ಮುಂತಾದ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಡಿಜಿಟಲ್ ಸೇವೆಗಳನ್ನು ಸುಧಾರಿಸಲು ಕೆಲಸ ಮಾಡುತ್ತಿವೆ. ಉದಾಹರಣೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಐ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಕೇಂದ್ರಗಳನ್ನು ಸ್ಥಾಪಿಸಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಶಾಖೆಗಳಲ್ಲಿ ಖಾತೆ ವಿವರಗಳನ್ನು ಒದಗಿಸಲು ಮತ್ತು ಇತರ ಸೇವೆಗಳನ್ನು ನೀಡಲು ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಅನೇಕ ಬ್ಯಾಂಕುಗಳು ತಮ್ಮ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಚಾಟ್‌ಬಾಟ್‌ಗಳನ್ನು ಪರಿಚಯಿಸಿವೆ. ICICI ಬ್ಯಾಂಕ್‌ನ ‘ಐಪಾಲ್’ ಚಾಟ್‌ಬಾಟ್ ಬಳಸುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ‘ಇವಾ’ ಚಾಟ್‌ಬಾಟ್ ಬಳಸುತ್ತಿವೆ. ಇವುಗಳನ್ನು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ.

2023ರ ಮಾರ್ಚ್‌7ರಂದು ನಡೆದ ‘ಇಂಡಿಯಾ ಫಿನ್‌ಟೆಕ್ ಕಾನ್ಕ್ಲೇವ್’ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ್ದ ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕುಮಾರ್ ಚೌಧರಿ, “ಆನ್‌ಲೈನ್ ವಂಚನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಆರ್‌ಬಿಐ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಆನ್‌ಲೈನ್‌ ವಂಚನೆಗಳನ್ನು ತಡೆಯಲು ಡೇಟಾ ಗೌಪ್ಯತೆ ಕಾನೂನು ನೆರವಾಗುತ್ತದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಮಪತ್ರ ತಿರಸ್ಕೃತಗೊಂಡ ಸೂರತ್ ಅಭ್ಯರ್ಥಿ ನೀಲೇಶ್ ಕಾಂಗ್ರೆಸ್‌ನಿಂದ ಅಮಾನತು

ಸೂರತ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿಯ ಮುಖೇಶ್...

ಹದಗೆಟ್ಟ ರಸ್ತೆ| 600ಕ್ಕೂ ಹೆಚ್ಚು ತ್ರಿಪುರಾ ಬುಡಕಟ್ಟು ಮತದಾರರಿಂದ ಚುನಾವಣೆ ಬಹಿಷ್ಕಾರ

ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯ ದೂರದ ಬುಡಕಟ್ಟು...

ಮೋದಿಯವರ ‘ಚಾರ್‌ ಸವ್ ಪಾರ್’ ಘೋಷಣೆ ಹಿಂದಿನ ಉದ್ದೇಶವೇನು? ಅರಿತಿದ್ದಾರೆಯೇ ‘ಒಬಿಸಿ’ಗಳು!

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. ಮೀಸಲಾತಿಯನ್ನು...

ಭಯಗೊಂಡಿರುವ ಪ್ರಧಾನಿ ವೇದಿಕೆಯಲ್ಲೇ ಕಣ್ಣೀರು ಹಾಕಬಹುದು: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ನಡೆಸಿರುವ ವಾಗ್ದಾಳಿಗೆ ತಿರುಗೇಟು ನೀಡಿರುವ...