ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಅಪ್ರಾಪ್ತ ಸಹೋದರರಾದ ಆಯುಷ್ (13) ಮತ್ತು ಹನಿಯನ್ನು (6) ಕೊಂದ ಆರೋಪಿ ಸ್ಥಳೀಯ ಕ್ಷೌರಿಕ ಸಾಜಿದ್ (30) ಮಂಗಳವಾರ ರಾತ್ರಿ ಮನೆಯ ಸಮೀಪದಲ್ಲೇ ಪೊಲೀಸರ ಎನ್ಕೌಂಟರ್ಗೆ ಬಲಿ ಆಗಿದ್ದಾನೆ.
ಘಟನೆ ನಡೆದು ಸುಮಾರು ಎರಡು ಗಂಟೆಗಳ ನಂತರ, ಪೊಲೀಸ್ ಎನ್ಕೌಂಟರ್ನಲ್ಲಿ ಸಾಜಿದ್ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಯುಪಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ಈ ಬಗ್ಗೆ ತಿಳಿಸಿದ್ದು, “ಸಾಜಿದ್ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದಾಗ ನಾವು ಕೂಡಾ ಗುಂಡು ಹಾರಿಸಿದ್ದೇವೆ” ಎಂದಿದ್ದಾರೆ.
“ಅಪ್ರಾಪ್ತ ಬಾಲಕರನ್ನು ಕೊಂದ ಉದ್ದೇಶ ಇನ್ನೂ ತಿಳಿದುಬಂದಿಲ್ಲ” ಎಂದು ಬರೇಲಿ ಶ್ರೇಣಿಯ ಪೊಲೀಸ್ ಮಹಾನಿರೀಕ್ಷಕ ರಾಕೇಶ್ ಸಿಂಗ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಬದೌನ್ನ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬಾ ಕಾಲೋನಿಯಲ್ಲಿರುವ ಬಾಲಕರ ಮನೆಯ ಸಮೀಪ ಸಾಜಿದ್ ಅಂಗಡಿ ಇದೆ. ಬಾಲಕರ ತಂದೆ ವಿನೋದ್ ಸಿಂಗ್ ಗುತ್ತಿಗೆದಾರರಾಗಿದ್ದರೆ, ಅವರ ತಾಯಿ ಸಂಗೀತಾ ಬ್ಯೂಟಿ ಪಾರ್ಲರ್ ಹೊಂದಿದ್ದಾರೆ.
ಇದನ್ನು ಓದಿದ್ದೀರಾ? ಯುಪಿ: ಗೋಹತ್ಯೆ ಆರೋಪಿ ಎನ್ಕೌಂಟರ್ನಲ್ಲಿ ಬಲಿ
“ಮಂಗಳವಾರ ಸಂಜೆ 7.45ರ ಸುಮಾರಿಗೆ ಸಾಜಿದ್ ಸಿಂಗ್ ಈ ಬಾಲಕರ ಮನೆಗೆ ಹೋಗಿದ್ದು ಆ ಸಮಯದಲ್ಲಿ, ಸಿಂಗ್ ಮಾರುಕಟ್ಟೆಗೆ ಹೋಗಿದ್ದರು. ಅವರ ಪತ್ನಿ ತನ್ನ ಬ್ಯೂಟಿ ಪಾರ್ಲರ್ನಲ್ಲಿದ್ದರು. ಬಾಲಕರು ತಮ್ಮ ಅಜ್ಜಿಯೊಂದಿಗೆ ಮನೆಯಲ್ಲಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
“ಸಿಂಗ್ ತಾಯಿ ಚಹಾ ಮಾಡಲು ಹೋದಾಗ, ಸಾಜಿದ್ ಮನೆಯ ಮೂರನೇ ಮಹಡಿಗೆ ಹೋಗಿದ್ದು, ಅಲ್ಲಿ ಇಬ್ಬರು ಬಾಲಕರು ತಮ್ಮ ಸಹೋದರ ಪಿಯೂಷ್ (8) ಜೊತೆ ಆಟವಾಡುತ್ತಿದ್ದರು. ಸಾಜಿದ್ ಇಬ್ಬರು ಬಾಲಕರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಇಬ್ಬರ ಕತ್ತು ಸೀಳಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ.
ಸಣ್ಣಪುಟ್ಟ ಗಾಯಗಳಾಗಿರುವ ಪಿಯೂಷ್ ಪ್ರಾಣಾಪಾಯದಿಂದ ಪಾರಾಗಿದ್ದು, ಮನೆಯವರು ಬರುತ್ತಿದ್ದಂತೆ ಸಾಜಿದ್ ಆ ಪ್ರದೇಶದಿಂದ ಪರಾರಿಯಾಗಿದ್ದಾನೆ. ರಾತ್ರಿ ಸುಮಾರು 10 ಗಂಟೆಗೆ, ಸಂತ್ರಸ್ತರ ಮನೆಯಿಂದ ಸುಮಾರು 7 ಕಿಮೀ ದೂರದಲ್ಲಿರುವ ಶೇಕುಪುರ ಪ್ರದೇಶದಲ್ಲಿ ಸಾಜಿದ್ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಬಾಲಕರ ಹತ್ಯೆ ಬಳಿಕ ಪ್ರತಿಭಟನಾಕಾರರು ಸಾಜಿದ್ ಅಂಗಡಿಯನ್ನು ಧ್ವಂಸ ಮಾಡಿ ಸುಟ್ಟು ಹಾಕಿದ್ದಾರೆ. ಎರಡು ತಳ್ಳು ಗಾಡಿಗಳಿಗೂ ಬೆಂಕಿ ಹಚ್ಚಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.