ಉತ್ತರ ಪ್ರದೇಶದ ರಾಮ್ಪುರ ಜಿಲ್ಲೆಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗೋಹತ್ಯೆ ಆರೋಪಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಪಟ್ವಾಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಹತ್ಯೆ ಪ್ರಕರಣದ ತನಿಖೆ ನಡೆಸಲಾಗುತ್ತಿತ್ತು. ಆರೋಪಿಗಳು ಶನಿವಾರ ತಡರಾತ್ರಿ ಮೊರಾದಾಬಾದ್ಗೆ ವಾಹನದಲ್ಲಿ ಬರುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು ಎಂದು ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಹೇಳಿದ್ದಾರೆ.
ಪಟ್ವಾಯಿ ಪೊಲೀಸರು ಚೆಕ್ಪಾಯಿಂಟ್ ತೆರೆದಿದ್ದರು. ಕಾರುಗಳನ್ನು ಪರಿಶೀಲಿಸುವ ವೇಳೆ ಮೊರಾದಾಬಾದ್ನಿಂದ ಅತಿವೇಗದಲ್ಲಿ ವಾಹನ ಬರುತ್ತಿರುವುದನ್ನು ಗಮನಿಸಲಾಯಿತು. ಚೆಕ್ಪಾಯಿಂಟ್ ನೋಡಿದ ನಂತರ, ಕಾರನ್ನು ಹಿಂದಕ್ಕೆ ತಿರುಗಿಸಲಾಯಿತು. ಪೊಲೀಸರು ಚೇಸ್ ಮಾಡಿದರು ಎಂದು ಅಧಿಕಾರಿ ವಿವರಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ಮಿಲಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಲ್ಟಿಯಾಗಿತ್ತು. ಇಬ್ಬರು ಆರೋಪಿಗಳು ಕಾರಿನಿಂದ ಹೊರಬಂದು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಪೊಲೀಸರು ಪ್ರತಿ ದಾಳಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಆರೋಪಿಗಳು ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಸಾಜಿದ್ (23) ಎಂಬವರು ಮೃತಪಟ್ಟಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಮತ್ತೋರ್ವ ಆರೋಪಿ ಬಬ್ಲು ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಜಿದ್ ಮತ್ತು ಬಬ್ಲು ಇಬ್ಬರೂ ಮೊರಾದಾಬಾದ್ ನಿವಾಸಿಗಳಾಗಿದ್ದು, ಹಲವು ಅಪರಾಧ ಪ್ರಕರಣಗಳು ಅವರ ಮೇಲಿವೆ ಎಂದು ದ್ವಿವೇದಿ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಾರು, ಪಿಸ್ತೂಲ್ಗಳು, ಮದ್ದುಗುಂಡುಗಳು, ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಗೋಹತ್ಯೆಗೆ ಬಳಸಿದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.