ಕೇರಳದ ಕೊಲ್ಲಂ ಹಾಗೂ ಅಲಪ್ಪುಳ ಕರಾವಳಿ ಪ್ರದೇಶಗಳ ಗಣಿಗಾರಿಕೆ ಕಂಪನಿಗಳಿಂದ ಸಂಶಯಾತ್ಮಕ ನೆರವು ಸ್ವೀಕರಿಸಿದ ಆರೋಪದ ಮೇಲೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.
ಸಂಶಯಾತ್ಮಕ ನೆರವು ಸ್ವೀಕರಿಸಿದ ಹಿನ್ನೆಲೆಯಲ್ಲಿ ವೀಣಾ ಅವರ ವಿರುದ್ಧ ಕೇಂದ್ರ ಕಾರ್ಪೋರೇಟ್ ಸಚಿವಾಲಯಗಳಡಿ ಬರುವ ಗಂಭೀರ ಅಪರಾಧ ತನಿಖಾ ಸಂಸ್ಥೆ(ಎಸ್ಐಎಫ್ಒ) ತನಿಖೆ ಕೈಗೊಂಡಿತ್ತು.
ಎಸ್ಐಎಫ್ಒ ಶಿಫಾರಸ್ಸಿನ ಮೇರೆಗೆ ಜಾರಿ ನಿರ್ದೇಶನಾಲಯವು ವೀಣಾ ಅವರ ವಿರುದ್ಧ ತನಿಖೆ ಆರಂಭಿಸಿದೆ. ವೀಣಾ ಅವರಿಗೆ ಹಾಗೂ ಅವರು ಬೆಂಗಳೂರಿನಲ್ಲಿ ನಡೆಸುತ್ತಿರುವ ಎಕ್ಸಲಾಜಿಕ್ ಸಲೂಷನ್ಸ್ ಸಂಸ್ಥೆಗೆ ಕೊಚ್ಚಿನ್ನ ಖನಿಜಗಳು ಮತ್ತು ಲೋಹಗಳ ಸಂಸ್ಥೆ 1.72 ಕೋಟಿ ರೂ. ಹಣವನ್ನು ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಭ್ರಷ್ಟರು ಬೇಕಾಗಿದ್ದಾರೆ’ ಇದು ಬಿಜೆಪಿಯ ಹೊಸ ಜಾಹೀರಾತು
ವೀಣಾ ಅವರ ಕಂಪನಿ ವಿರುದ್ಧ ಆದಾಯ ತೆರಿಗೆ ಇಲಾಖೆಯ ಮಧ್ಯಂತರ ವಸಾಹತು ಮಂಡಳಿ ಕೂಡ ಈ ಮೊದಲು ತನಿಖೆ ಕೈಕೊಂಡಿತ್ತಾದರೂ ಯಾವುದೇ ಪುರಾವೆಗಳು ದೊರೆತಿರಲಿಲ್ಲ.
ಇ.ಡಿ ತನಿಖೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಆಡಳಿತರೂಢ ಸಿಪಿಎಂ ಪಕ್ಷ, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದು, ಜಾರಿ ನಿರ್ದೇಶನಾಲವು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ವಿಪಕ್ಷ ನಾಯಕ ವಿ. ಡಿ ಸತೀಶನ್, ಇ.ಡಿ ಸಿಪಿಐಎಂ ಸರ್ಕಾರದ ಹಲವು ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿದೆ. ಆದರೆ ಅಪರಾಧಿಗಳನ್ನು ಇನ್ನು ಬಂಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ.