ಪತಾಂಜಲಿ ಆಯುರ್ವೇದ ಸಂಸ್ಥೆಯ ದಾರಿ ತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮ್ದೇವ್ ಅವರಿಗೆ ಇನ್ನೆರಡು ವಾರಗಳಲ್ಲಿ ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಪತಾಂಜಲಿ ಆಯುರ್ವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆಚಾರ್ಯ ಬಾಲಕೃಷ್ಣ ಅವರು ಕೂಡ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ.
ಕಳೆದ ಫೆ.27 ರಂದು ರಕ್ತದೊತ್ತಡ, ಮಧುಮೇಹ, ಅಸ್ತಮ ಹಾಗೂ ಬೊಜ್ಜು ಮುಂತಾದ ಕಾಯಿಲೆಗಳ ಔಷಧಿಗಳ ಬಗ್ಗೆ ಜಾಹಿರಾತು ಪ್ರಕಟಣೆಯನ್ನು ಪತಾಂಜಲಿ ಆಯುರ್ವೇದ ಸಂಸ್ಥೆ ನಿಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಾಂಜಲಿ ಆಯುರ್ವೇದ ಸಂಸ್ಥೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೆ ನಿಂದನೆಯ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು.
ಪತಾಂಜಲಿ ಆಯೂರ್ವೇದ ಸಂಸ್ಥೆ ತಪ್ಪು ದಾರಿಗೆಳೆಯುವ ಜಾಹಿರಾತುಗಳನ್ನು ಪ್ರಸಾರ ಮಾಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ನಿಂದನೆಯ ನೋಟಿಸ್ ಜಾರಿಗೊಳಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ನಿರ್ದೇಶನಗಳ ಹೊರತಾಗಿಯೂ ಪ್ರತಿಕ್ರಿಯೆ ನೀಡುತ್ತಿಲ್ಲದಿರುವುದನ್ನು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹಾಗೂ ಅಮಾನುಲ್ಲಾ ನೇತೃತ್ವದ ಪೀಠ ಗಮನಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು
ಬಾಬಾ ರಾಮ್ದೇವ್ ಕೋರ್ಟ್ಗೆ ಖುದ್ದು ಹಾಜರಾಗುವುದು ಮಾತ್ರವಲ್ಲದೆ, ನ್ಯಾಯಾಂಗ ನಿಂದನೆಗೆ ಒಳಪಟ್ಟಿರುವ ಕಾರಣ ರಾಮ್ದೇವ್ ಮೇಲೆ ಏಕೆ ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿದೆ.
ಔಷಧ ಹಾಗೂ ಮ್ಯಾಜಿಕ್ ರೆಮಿಡಿಸ್ ಕಾಯ್ದೆಯ ಸೆಕ್ಷನ್ 3 ಮತ್ತು 4ರ ನಿಬಂಧನೆಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ವಿಚಾರಣೆಯ ಸಂದರ್ಭದಲ್ಲಿ ನೀಡಿದ ಶೋಕಾಸ್ ನೋಟಿಸ್ಗೆ ಪ್ರತಿವಾದಿಗಳು ಸೂಕ್ತ ವಿವರಣೆ ನೀಡಿಲ್ಲ ಎಂಬುದನ್ನು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕೊಹ್ಲಿ ತಿಳಿಸಿದರು.
ನ್ಯಾಯಾಂಗ ನಿಂದನೆ ಅರ್ಜಿಗೆ ಯಾಕೆ ಪ್ರತಿಕ್ರಿಯೆ ನೀಡಿಲ್ಲ. ನಿಮ್ಮ ಕಕ್ಷಿದಾರರಿಗೆ ಕೋರ್ಟ್ಗೆ ಹಾಜರಾಗಲು ತಿಳಿಸಿ.ಈಗ ರಾಮ್ದೇವ್ ಅವರನ್ನು ಪಾರ್ಟಿಯನ್ನಾಗಿ ಕೂಡ ಮಾಡುತ್ತೇವೆ. ಇಬ್ಬರು ಕೋರ್ಟ್ಗೆ ಹಾಜರಾಗಬೇಕೆಂದು ಬಾಬಾ ರಾಮ್ದೇವ್ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೊಹ್ಟಗಿ ಅವರಿಗೆ ಪೀಠ ಪ್ರಶ್ನಿಸಿತು.
ತಪ್ಪು ದಾರಿಗೆಳೆಯುವ ಜಾಹಿರಾತು ಪ್ರಕಟಿಸಿದ್ದಕ್ಕಾಗಿ ಪತಾಂಜಲಿ ಆಯುರ್ವೇದ ಕಂಪನಿಯ ವಿರುದ್ಧ ವಿವಿಧ ಕಂಪನಿಗಳು 35,556 ಪ್ರಕರಣಗಳನ್ನು ದಾಖಲಿಸಿವೆ.