ಮೋದಿ ಉಪನಾಮ ಪ್ರಕರಣದಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಮಧ್ಯಂತರ ರಕ್ಷಣೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ ನ್ಯಾಯಾಲಯವು ತನ್ನ ತೀರ್ಪನ್ನು ಬೇಸಿಗೆ ರಜೆಯ ನಂತರ ಪ್ರಕಟಿಸಲು ಕಾಯ್ದಿರಿಸಿದೆ.
ರಾಹುಲ್ ಗಾಂಧಿ ಅವರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ಕೋರಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಹೇಮಂತ್ ಎಂ ಪ್ರಚ್ಚಕ್ ಅವರ ನ್ಯಾಯಪೀಠವು, ಯಾವುದೇ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿತು. ರಾಹುಲ್ ಅವರಿಗೆ ಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆ ಎಂಬ ನಿರ್ಧಾರವನ್ನು ಗುಜರಾತ್ ಹೈಕೋರ್ಟ್ ಬೇಸಿಗೆ ರಜೆ ನಂತರ ನೀಡುವುದಾಗಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?: ಮಾನ ಹಾನಿ ಪ್ರಕರಣ | ಶಿಕ್ಷೆಗೆ ತಡೆ ಕೋರಿದ್ದ ರಾಹುಲ್ ಗಾಂಧಿ ಅರ್ಜಿ ತಿರಸ್ಕರಿಸಿದ ಸೂರತ್ ನ್ಯಾಯಾಲಯ
ದೂರುದಾರ ಪೂರ್ಣೇಶ್ ಮೋದಿ ಪರ ಹಿರಿಯ ವಕೀಲ ನಿರುಪಮ್ ನನ್ವತಿ ಹಾಗೂ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ನ್ಯಾಯಮೂರ್ತಿ ಹೇಮಂತ್ ಎಂ ಪ್ರಚ್ಚಕ್ ಅವರ ಪೀಠದ ಮುಂದೆ ವಾದಿಸಿದ ನಂತರ ಆಪಾದಿತನ ಅಪರಾಧವು ನೈತಿಕ ದೌರ್ಬಲ್ಯದ ಅಂಶವನ್ನು ಒಳಗೊಂಡಿಲ್ಲ ಎಂದು ತೀರ್ಪನ್ನು ಕಾಯ್ದಿರಿಸಲಾಯಿತು.
ರಾಹುಲ್ ಪರ ವಕೀಲರಾದ ಅಭಿಷೇಕ್ ಸಿಂಘ್ವಿ, ಪ್ರಕರಣವು ಗುರುತಿಸಬಹುದಾದ, ಜಾಮೀನು ನೀಡಬಹುದಾದ ಮತ್ತು ಗಂಭೀರವಲ್ಲದ ಅಪರಾಧ. ಆದ್ದರಿಂದ ಶಿಕ್ಷೆಯನ್ನು ಅಮಾನತುಗೊಳಿಸಬೇಕು. ಹೆಚ್ಚು ಗಂಭೀರವಾದ ಅಪರಾಧಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಶಿಕ್ಷೆಗೆ ತಡೆ ನೀಡಿವೆ ಎಂದು ವಾದಿಸಿದರು.