ಐಯುಎಂಎಲ್ ಹಾಗೂ ಕೆಲವು ಪ್ರಮುಖ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಕೇರಳ ದಲ್ಲಿ ಶುಕ್ರವಾರ ಘೋಷಿಸಲಾಗಿರುವ ಲೋಕಸಭಾ ಚುನಾವಣಾ ದಿನಾಂಕವನ್ನು ಬದಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ.
ಇಸ್ಲಾಂ ವಿದ್ವಾಂಸರ ವೇದಿಕೆ ದಿ ಸಂಸ್ಥಾ ಜಮಿಯತುಲ್ ಉಲ್ಮಾ, ಆಲ್ ಇಂಡಿಯಾ ಸುನ್ನಿ ಜಮಿಯತುಲ್ ಉಲಾಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ ಪಿ ಅಬೂಬ್ಕರ್ ಮುಸ್ಲಿಯಾರ್ ಒಳಗೊಂಡ ನಾಯಕರು ಶುಕ್ರವಾರದ ದಿನಾಂಕವನ್ನು ಬದಲಿಸುವಂತೆ ಕೋರಿದ್ದಾರೆ.
ಶುಕ್ರವಾರ ಚುನಾವಣಾ ದಿನಾಂಕ ಹಮ್ಮಿಕೊಂಡರೆ ಇಸ್ಲಾಂ ಧಾರ್ಮಿಕ ನಂಬಿಕೆಯಂತೆ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವ ಮುಸ್ಲಿಂ ಮತದಾರರು ಹಾಗೂ ಚುನಾವಣೆಗೆ ನಿಯೋಜನೆಗೊಳ್ಳುವ ಮುಸ್ಲಿಂ ಸಮುದಾಯದ ಅಧಿಕಾರಿಗಳು ಕರ್ತವ್ಯ ನಿಭಾಯಿಸುವುದಕ್ಕೆ ಅನಾನುಕೂಲವಾಗುತ್ತದೆ ಎಂದು ಈ ಸಂಘಟನೆಗಳ ಕಳವಳ ವ್ಯಕ್ತಪಡಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು
ಐಯುಎಂಎಲ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಎಂ ಎ ಸಲೀಮ್ ಸುದ್ದಿಗಾರರೊಂದಿಗೆ ಮಾತನಾಡಿ, ಸಮುದಾಯದ ಕಾಳಜಿಯ ಹಿತದೃಷ್ಟಿಯಿಂದ ಪಕ್ಷವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಏಪ್ರಿಲ್ 26ರಂದು ಶುಕ್ರವಾರ ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ನಡೆಯುವ ಮೊದಲ ಹಂತದ ಚುನಾವಣೆ ಕೂಡ ಶುಕ್ರವಾರವೇ ನಡೆಯಲಿದೆ. ಈ ದಿನಾಂಕದಂದು ತಮಿಳುನಾಡಿನ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಐಯುಎಂಎಲ್ ಕಾಂಗ್ರೆಸ್ನ ಮಿತ್ರ ಪಕ್ಷವಾಗಿದ್ದು, ಕೇರಳ ಹಾಗೂ ತಮಿಳುನಾಡಿನಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ.
ಶುಕ್ರವಾರ ನಡೆಯುವ ಚುನಾವಣೆ ಬಗ್ಗೆ ಕೇರಳದ ಬಿಜೆಪಿ ನಾಯಕರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.