ಲೋಕಸಭೆ ಚುನಾವಣೆಗೂ ಮುನ್ನ ಜಾರ್ಖಂಡ್ನ ಬಿಜೆಪಿ ಶಾಸಕ ಜೈ ಪ್ರಕಾಶ್ ಭಾಯ್ ಪಟೇಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ಜಾರ್ಖಂಡ್ನ ಎಐಸಿಸಿ ಉಸ್ತುವಾರಿ ಗುಲಾಂ ಅಹ್ಮದ್ ಮಿರ್, ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಅವರ ಸಮ್ಮುಖದಲ್ಲಿ ಪಟೇಲ್ ಕಾಂಗ್ರೆಸ್ಗೆ ಸೇರಿದ್ದಾರೆ.
ಜೈ ಪ್ರಕಾಶ್ ಭಾಯ್ ಪಟೇಲ್ ಜಾರ್ಖಂಡ್ನ ಹಜಾರಿಬಾಗ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಾಂಡು ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದು ಈ ಹಿಂದೆ ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕರಾಗಿದ್ದರು. “ಎನ್ಡಿಎಯಲ್ಲಿ ನನ್ನ ತಂದೆಯ ಸಿದ್ಧಾಂತ ಕಾಣುತ್ತಿಲ್ಲ” ಎಂದು ಬಿಜೆಪಿ ತೊರೆದು ಕಾಂಗ್ರೆಸ್ ತೆಕ್ಕೆ ಸೇರಿದ್ದಾರೆ.
“ಮಾಜಿ ಸಂಸದ, ನನ್ನ ತಂದೆ ತೆಕ್ ಲಾಲ್ ಮಹ್ತೊ ಕನಸುಗಳನ್ನು ನನಸು ಮಾಡಲು ನಾನು ಈ ನಿರ್ಧಾರವನ್ನು ಮಾಡಿದೆ. ನನ್ನ ತಂದೆ ಮೆಚ್ಚುವ ಸಿದ್ಧಾಂತ ಎನ್ಡಿಎಯಲ್ಲಿ ಕಾಣುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ‘ಇಂಡಿಯಾ’ ಮೈತ್ರಿಕೂಟವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕಾಂಗ್ರೆಸ್ಗೆ ಸೇರುತ್ತಿದ್ದೇನೆ” ಎಂದು ತಿಳಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಜಾರ್ಖಂಡ್ನ ಎಲ್ಲ 14 ಲೋಕಸಭಾ ಕ್ಷೇತ್ರಗಳಲ್ಲಿ ‘ಇಂಡಿಯಾ’ ಮೈತ್ರಿಕೂಟ ಜಯ ಕಾಣಲಿದೆ ಎಂದು ಜೈ ಪ್ರಕಾಶ್ ಭಾಯ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು. ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಪಟೇಲ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ.
ಜಾರ್ಖಂಡ್ ಲೋಕಸಭೆ ಚುನಾವಣೆ
ಜಾರ್ಖಂಡ್ನಲ್ಲಿ ಲೋಕಸಭೆ ಚುನಾವಣೆಯು ನಾಲ್ಕು ಹಂತಗಳಲ್ಲಿ ಮೇ 13ರಿಂದ ಜೂನ್ 1ರವರೆಗೆ ನಡೆಯಲಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆಯು ಜೂನ್ 4ರಂದು ನಡೆಯಲಿದೆ.