ವಿಶ್ವದಾದ್ಯಂತ 300ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಭಾರತದ ಹರ್ಯಾಣ ಮತ್ತು ಪಂಜಾಬಿನಲ್ಲಿ ತಯಾರಾಗುತ್ತಿರುವ 7 ಕೆಮ್ಮಿನ ಸಿರಪ್ಗಳು ವಿಷಪೂರಿತವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಸಿರಪ್ಗಳನ್ನು ಹರಿಯಾಣ ಮೂಲದ ಮೈಡೆನ್ ಫಾರ್ಮಾಸ್ಯುಟಿಕಲ್ಸ್, ಮರಿಯನ್ ಬಯೋಟೆಕ್ ಮತ್ತು ಕ್ಯೂಪಿ ಫಾರ್ಮಾ ಕಂಪನಿಗಳು ಹಾಗೂ ಪಂಜಾಬಿನ ಫರ್ಮಾಂಚೆ ಸಂಸ್ಥೆ ತಯಾರಿಸುತ್ತಿವೆ. ವಿಷಪೂರಿತವಾಗಿವೆ ಎಂದು ಈ ಹಿಂದೆ ಎಚ್ಚರಿಕೆ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆ, ತನಿಖೆಯನ್ನು ಸಂಪೂರ್ಣಗೊಳಿಸಿದ ನಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಭಾರತ ಹಾಗೂ ಇಂಡೋನೇಷ್ಯಗಳಲ್ಲಿರುವ 15 ವಿವಿಧ ಕಂಪನಿಗಳು ಉತ್ಪಾದಿಸುತ್ತಿರುವ 20 ಉತ್ಪನ್ನಗಳು ವಿಷಪೂರಿತವಾಗಿದ್ದು ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಅತೀ ಹೆಚ್ಚು ಸಾವುನೋವುಗಳಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ವಿಶ್ವ ಸಂಸ್ಥೆ ನೀಡಿರುವ ತನಿಖೆಯಲ್ಲಿ ಈ ಸಿರಪ್ಗಳಲ್ಲಿ ಹೆಚ್ಚಿನ ಮಟ್ಟದ ವಿಷಕಾರಿ ಅಂಶಗಳಾದ ಡೈಥಿಲೀನ್ ಮತ್ತು ಎಥಿಲೀನ್ ಗ್ಲೈಕೋಲ್ ಇರುವುದು ಪತ್ತೆಯಾಗಿದೆ. ಇದು ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ನೂರಾರು ಸಾವುಗಳಿಗೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಮೊಬೈಲ್ ಕೊಡದೆ ಕಟ್ಟುನಿಟ್ಟು ಮಾಡಿದ್ದಕ್ಕೆ ತಾಯಿಯನ್ನೇ ಕೊಲ್ಲಲು ಹೊರಟ ಮಗಳು!
ಕೆಮ್ಮು ಸಿರಪ್ ಸೇವನೆಯ ನಂತರ ಆಫ್ರಿಕನ್ ದೇಶಗಳಲ್ಲಿ ಹಲವಾರು ಸಾವುಗಳು ವರದಿಯಾದ ನಂತರ ಭಾರತದಿಂದ ಗುಣಮಟ್ಟವಿಲ್ಲದ ಔಷಧಿಗಳ ಪೂರೈಕೆಯ ಬಗ್ಗೆ ವರದಿ ಬೆಳಕಿಗೆ ಬಂದಿತ್ತು. ಕಳೆದ ವರ್ಷ, ಭಾರತದಲ್ಲಿ ತಯಾರಿಸಿದ ಔಷಧಿಗಳು ಗ್ಯಾಂಬಿಯಾ ದೇಶದಲ್ಲಿ 60 ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾಯಿತು ಮತ್ತು ಉಜ್ಬೇಕಿಸ್ತಾನ್ನಲ್ಲಿ ಸುಮಾರು 20 ಮಕ್ಕಳು ಮೃತಪಟ್ಟಿದ್ದರು.
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಮತ್ತು ಗ್ಯಾಂಬಿಯಾದ ಆರೋಗ್ಯ ಅಧಿಕಾರಿಗಳು ನಡೆಸಿದ ಜಂಟಿ ತನಿಖೆಯು ಗ್ಯಾಂಬಿಯಾದಲ್ಲಿ ಅನೇಕ ಮಕ್ಕಳ ಸಾವು ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ಗಳ ಸೇವನೆಯಿಂದ ಆಗಿದೆಯೆಂದು ದೃಢಪಡಿಸಿತ್ತು.
ಇತ್ತೀಚಿಗೆ ಮಧ್ಯ ಆಫ್ರಿಕಾದ ರಾಷ್ಟ್ರ ಕ್ಯಾಮರೂನ್ನಲ್ಲೂ ಕೂಡ ವಿಷಪೂರಿತ ಕೆಮ್ಮು ಸಿರಪ್ಗಳಿಂದ ಹನ್ನೆರಡು ಮಕ್ಕಳು ಸಾವಿಗೀಡಾಗಿದ್ದರು. ಇದಕ್ಕೆ ಭಾರತದ ಇಂದೂರ್ ಮೂಲದ ರೀಮನ್ ಲ್ಯಾಬ್ಸ್ ಪ್ರೈ.ಲಿ. ಔಷಧ ಸಂಸ್ಥೆ ಕಾರಣವಿರಬಹುದು ಎಂದು ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದರು. ಆದರೆ ರೀಮನ್ ಲ್ಯಾಬ್ಸ್ ಸಂಸ್ಥೆಯ ಅಧಿಕಾರಿಗಳು, ’ತಾವು ಕಟ್ಟುನಿಟ್ಟಾದ ಗುಣಮಟ್ಟದ ನಿಯಂತ್ರಣಗಳನ್ನು ಅನುಸರಿಸುತ್ತಿದ್ದು, ಕಳಂಕಿತ ಔಷಧವನ್ನು ತಯಾರಿಸುವ ಯಾವುದೇ ಸಾಧ್ಯತೆಯಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.