ಆದಿಕಾರ್ಪ್ ಜೊತೆಗೆ ಅದಾನಿ ಸಮೂಹ ಸಂಬಂಧದ ತನಿಖೆಗೆ ವಿಪಕ್ಷಗಳ ಒತ್ತಾಯದ ನಡುವೆ ಮತ್ತೊಂದು ಹರಾಜು ಪ್ರಕ್ರಿಯೆ ತಿರುಚುವಿಕೆಯಲ್ಲಿ ಅದರ ಕೈವಾಡ ಕಂಡುಬಂದಿದೆ.
ಹಣಕಾಸು ದುರ್ವ್ಯವಹಾರಗಳ ಆರೋಪದ ನಡುವೆಯೇ ಅದಾನಿ ಸಮೂಹ ಭಾರತದಲ್ಲಿ ಮತ್ತೊಂದು ಹರಾಜನ್ನು ಗೆದ್ದಿದೆ. ಇದೇ ಮಾರ್ಚ್ನಲ್ಲಿ ಸರ್ಕಾರ ಕರೆದ ವಾಣಿಜ್ಯ ಕಲ್ಲಿದ್ದಲು ಹರಾಜಿನಲ್ಲಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಅತಿಕಡಿಮೆ ಬೆಲೆ ಸೂಚಿಸಿದೆ. ಆದರೆ ಈ ಹರಾಜು ಪ್ರಕ್ರಿಯೆಯಲ್ಲೂ ದುರ್ವವ್ಯವಹಾರದ ವಾಸನೆ ಹೊಡೆದಿದೆ.
ಅದಾನಿ ಗೆದ್ದ ಮಧೇರಿ ಬ್ಲಾಕ್ಗೆ ‘ಕ್ಯಾವಿಲ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್’ ಮಾತ್ರ ಬಿಡ್ ಕರೆದಿತ್ತು! ‘ಸ್ಕ್ರೋಲ್’ ಜಾಲತಾಣ ಪ್ರಕಟಿಸಿದ ವಿವರಗಳ ಪ್ರಕಾರ ಕ್ಯಾವಿಲ್ ಮೈನಿಂಗ್ನ ಮಾಲೀಕ ಆದಿಕಾರ್ಪ್ ಎಂಟರ್ಪ್ರೈಸಸ್ನ ಪ್ರಮುಖ ಪ್ರಾಯೋಜಕರು.
ಆದಿಕಾರ್ಪ್ ಮೇಲೆ ಹಿಂಡನ್ಬರ್ಗ್ ರೀಸರ್ಚ್ ಅದಾನಿ ಸಮೂಹದ ಕಂಪನಿಗಳಿಗೆ ತೆರೆಮರೆಯಲ್ಲಿ ಹಣಕಾಸು ನೀಡುತ್ತಿರುವ ಆರೋಪ ಹೊರಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಆದಿಕಾರ್ಪ್ ಜೊತೆಗೆ ಅದಾನಿ ಸಮೂಹ ಸಂಬಂಧದ ತನಿಖೆಯಾಗಬೇಕು ಎಂದು ವಿರೋಧ ಪಕ್ಷಗಳು ಬೇಡಿಕೆ ಇಡುತ್ತಲೇ ಇರುವ ನಡುವೆ ಮತ್ತೊಂದು ಹರಾಜು ಪ್ರಕ್ರಿಯೆ ತಿರುಚುವಿಕೆಯಲ್ಲಿ ಅದರ ಕೈವಾಡ ಕಂಡುಬಂದಿದೆ.
ಆದಿಕಾರ್ಪ್ ಮತ್ತು ಕ್ಯಾವಿಲ್ ಮೈನಿಂಗ್ ಅಹಮದಾಬಾದ್ನ ಒಂದೇ ವಿಳಾಸ ಹೊಂದಿದ್ದು, ಎರಡೂ ಸಂಸ್ಥೆಗಳ ಪ್ರಾಯೋಜಕರು ಉತ್ರಾಕ್ಷ್ ಶಾ ಎಂಬ ವಿವರವಿದೆ. ಇತ್ತೀಚೆಗೆ ಪ್ರಕಟವಾದ ಗೌತಮ್ ಅದಾನಿಯ ಆತ್ಮಚರಿತ್ರೆಯಲ್ಲಿ ಉತ್ರಾಕ್ಷ್ರನ್ನು ಅದಾನಿ ಸ್ನೇಹಿತ ಎಂದು ತಿಳಿಸಲಾಗಿದೆ.
ಇದೀಗ ಉತ್ರಾಕ್ಷ್ ಗಣಿಗಾರಿಕೆ ಅನುಭವವಿಲ್ಲದ ತಮ್ಮ ಕಂಪನಿಯ ಮೂಲಕ ಅದಾನಿ ಸಮೂಹ ವಿರುದ್ಧ ಕಲ್ಲಿದ್ದಲು ಹರಾಜಿಗೆ ಬಿಡ್ ಮಾಡಿದ್ದರು. ಉತ್ರಾಕ್ಷ್ಯರ ಸಂಸ್ಥೆಗೆ ಗಣಿಗಾರಿಕೆಯ ಅನುಭವವಿಲ್ಲದಿದ್ದರೂ ಅವರು ಬಿಡ್ ಮಾಡಿರುವುದೇಕೆ?
ಮದೇರಿ ಬ್ಲಾಕ್ ಮಹಾರಾಷ್ಟ್ರದ ಚಂದ್ರಾಪುರದಲ್ಲಿದೆ. ಇಲ್ಲಿ 200 ದಶಲಕ್ಷ ಟನ್ಗಳಷ್ಟು ಕಲ್ಲಿದ್ದಲು ತೆಗೆಯಲು ಹರಾಜು ಕರೆಯಲಾಗಿದೆ. ಕ್ಯಾವಿಲ್ ಹರಾಜಿನಲ್ಲಿ ಭಾಗವಹಿಸಿದ ಕಾರಣ ಯಶಸ್ವಿಯಾಗಿ ಪ್ರಕ್ರಿಯೆ ನಡೆದು ಅದಾನಿ ಕಂಪನಿಗೆ ಹರಾಜು ದೊರೆತಿದೆ.
ಅದಾನಿ ಮಾತ್ರ ಬಿಡ್ ಮಾಡಿರುತ್ತಿದ್ದರೆ ಹರಾಜು ರದ್ದಾಗಿರುತ್ತಿತ್ತು! ಕೇಂದ್ರ ಕಲ್ಲಿದ್ದಲು ಸಚಿವಾಲಯದ ನಿಯಮಗಳ ಪ್ರಕಾರ ಇಬ್ಬರು ಬಿಡ್ಡರ್ಗಳಿದ್ದರೆ ಮಾತ್ರವೇ ವಾಣಿಜ್ಯ ಗಣಿಗಾರಿಕೆಗೆ ಹರಾಜು ಕರೆಯಲಾಗುತ್ತದೆ.
ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ ವಂಚನೆ
ಈ ಹಿಂದೆ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಕ್ಯಾಗ್) ಕಲ್ಲಿದ್ದಲು ಬ್ಲಾಕ್ ಹರಾಜಿನಲ್ಲಿ ಕಂಪನಿಗಳು ಪರಸ್ಪರ ನೆರವು ನೀಡುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಹರಾಜು ಪ್ರಕ್ರಿಯೆಯನ್ನು ತಿರುಚಲಾಗುತ್ತಿದೆ ಎಂದು ಹೇಳಿತ್ತು.
ಸ್ಪರ್ಧೆ ಏರ್ಪಡದಂತೆ ಹರಾಜುದಾರರು (ಬಿಡ್ಡರ್) ತಮ್ಮ ನಡುವೆಯೇ ಒಪ್ಪಂದ ಮಾಡಿಕೊಂಡು ಹಿಂದೆ ಸರಿಯುತ್ತಾರೆ. 2015ರಲ್ಲಿ ಕ್ಯಾಗ್ ಇಂತಹ ಅಭ್ಯಾಸದ ಬಗ್ಗೆ ತನಿಖೆ ಮಾಡಿತ್ತು. ಕಂಪನಿಗಳು ಸ್ಪರ್ಧೆಯನ್ನು ಅಳಿಸಿ ಹಾಕಿ ಕಡಿಮೆ ಬೆಲೆಗೆ ಹರಾಜು ಗೆಲ್ಲುತ್ತಿದ್ದವು.
ಕೆಲವೊಂದು ಸಂಸ್ಥೆಗಳು ಒಂದೇ ಬ್ಲಾಕ್ಗೆ ತಮ್ಮದೇ ಉಪಸಂಸ್ಥೆಗಳು ಮತ್ತು ಜಂಟಿ ಉದ್ಯಮಗಳ ಮೂಲಕ ಬಿಡ್ ಮಾಡಿ ಸ್ಪರ್ಧೆ ಅಳಿಸಿ ಹಾಕುತ್ತಿದ್ದರು. ಹೀಗಾಗಿ ಅತಿ ಕಡಿಮೆ ಬೆಲೆಗೆ ಪ್ರಾಕೃತಿಕ ಸಂಪನ್ಮೂಲಗಳು ಖಾಸಗಿ ಕಂಪನಿಗಳ ವಶಕ್ಕೆ ಹೋಗಿಬಿಡುತ್ತಿದ್ದವು.
ಅತಿ ಕಡಿಮೆ ಹರಾಜುದಾರರು ಇದ್ದಾಗ ಕಲ್ಲಿದ್ದಲು ಹರಾಜು ಕಡಿಮೆ ಬೆಲೆಗೆ ಹೋಗುತ್ತದೆ. 2022 ಏಪ್ರಿಲ್ನಲ್ಲಿ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದಾಗ, ಎರಡು ಬಿಡ್ಡರ್ಗಳಿದ್ದ ಗಣಿಗಳು ಅತಿ ಕಡಿಮೆ ಹರಾಜಿಗೆ ಮಾರಾಟವಾಗಿರುವುದು ಬಹಿರಂಗವಾಗಿತ್ತು.
ಈ ಸುದ್ದಿ ಓದಿದ್ದೀರಾ?: ಬಾಂಗ್ಲಾದೇಶದಲ್ಲಿ ವಿವಾದ ಸೃಷ್ಟಿಸಿರುವ ಅದಾನಿ ವಿದ್ಯುತ್ ಒಪ್ಪಂದ
ಈ ಬಾರಿ ಅದಾನಿ ಸಮೂಹ ಗೆದ್ದ ನಾಲ್ಕು ಬ್ಲಾಕ್ಗಳಲ್ಲಿ ಮೂರರಲ್ಲಿ ಒಬ್ಬರೇ ಬಿಡ್ಡರ್ನನ್ನು ಎದುರಿಸಿದ್ದರು. ಪುರುಂಗಾದಲ್ಲಿ ಅದಾನಿಯ ಸಹಭಾಗಿ ಸಂಸ್ಥೆ ಸಿಜಿ ನ್ಯಾಚುರಲ್ ರಿಸೋರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪವರ್ ಮೆಕ್ ಪ್ರಾಜೆಕ್ಟ್ಸ್ ಲಿಮಿಟೆಡ್ ಬಿಡ್ ಮಾಡಿತ್ತು.
ಹೈದರಾಬಾದ್ ಮೂಲದ ಪವರ್ ಮೆಕ್ ಕಂಪನಿಗೆ ಅದಾನಿ ಸಮೂಹದಿಂದ ಕಳೆದ ವರ್ಷ ರೂ 6,000 ಕೋಟಿಯ ಆರ್ಡರ್ಗಳು ದೊರೆತಿದ್ದವು.
ದಾಹೇಗಾಂವ್ ಗೋವರಿಯಲ್ಲಿ ಅದಾನಿ ಮಾಲೀಕತ್ವದ ಅಂಬುಜಾ ಸಿಮೆಂಟ್ಸ್ ಬಿಡ್ ಗೆದ್ದಿತ್ತು. ಈ ಬ್ಲಾಕ್ಗೆ ಗಂಗಾರಾಂಚಕ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಮಾತ್ರವೇ ಹರಾಜು ಕರೆದಿತ್ತು.
ಕ್ಯಾವಿಲ್ ಮೈನಿಂಗ್ ಎರಡು ಬ್ಲಾಕ್ಗಳಲ್ಲಿ ಅದಾನಿ ಸಮೂಹದ ವಿರುದ್ಧ ಸ್ಪರ್ಧಿಸಿದೆ. ಮೇಧೇರಿಯಲ್ಲಿ ಬಿಡ್ ಗೆದ್ದ ಎಂಎಚ್ ನ್ಯಾಚುರಲ್ ರಿಸೋರ್ಸ್ ಅದಾನಿ ಎಂಟರ್ಪ್ರೈಸ್ನ ಅಂಗ ಸಂಸ್ಥೆ.
ಗೋಂಡ್ಬಹೇರಾದಲ್ಲಿ ಗುಜರಾತ್ ಮಿನರಲ್ ಡೆವಲಪ್ಮೆಂಟ್ ಕಾರ್ಪೋರೇಶನ್ ಅದಾನಿ ವಿರುದ್ಧ ಬಿಡ್ ಮಾಡಿತ್ತು. ಇದು ಗುಜರಾತ್ ರಾಜ್ಯದ ಕಂಪನಿ.