ಹಿಂದಿನ ಸರ್ಕಾರದ ಅವಧಿ ಕಾಮಗಾರಿಗಳ ಹಣ ಬಿಡುಗಡೆಗೆ ತಡೆ ನೀಡಿದ್ದ ಸರ್ಕಾರ, ಅದನ್ನು ತೆರವುಗೊಳಿಸಿ ಎಲ್ಲ ಇಲಾಖೆಗಳು, ನಿಗಮಗಳ ಕಾಮಗಾರಿ ಬಿಲ್ ಬಿಡುಗಡೆ ಮಾಡುವಂತೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.
ಎಲ್ಲ ಇಲಾಖೆಗಳು, ಅಧೀನಕ್ಕೊಳಪಡುವ ಕಾಮಗಾರಿ ಬಿಲ್ ಪಾವತಿ, ನೈಜತೆ, ನಿಯಮಾನುಸಾರ ಇದೆಯಾ ಎಂದು ಖಾತ್ರಿ ಪಡಿಸಿಕೊಂಡು ಸಂಬಂಧಿಸಿದ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ. ಏಕ್ರೂಪ್ ಕೌರ್ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ?
ಎಲ್ಲ ಇಲಾಖೆಗಳು ಮತ್ತು ಇಲಾಖೆಗಳ ಅಧೀನಕ್ಕೊಳಪಡುವ ನಿಗಮ, ಮಂಡಳಿ, ಪ್ರಾಧಿಕಾರಗಳ ಮುಂದುವರೆದ ಕಾಮಗಾರಿಗಳಿಗೆ ಸಂಬಂಧಿಸಿದಂತ ಬಿಲ್ಲುಗಳ ನೈಜತೆಯನ್ನು ಹಾಗೂ ನಿಯಮಾನುಸಾರವಿರುವುದನ್ನು ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವುದು.
ಎಲ್ಲ ಶಾಸನಬದ್ಧ ಪಾವತಿಗಳನ್ನು ಮತ್ತು ಬಾಹ್ಯ ನೆರವಿನ ಮುಂದುವರೆದ ಯೋಜನಗಳಿಗೆ ಸಂಬಂಧಿಸಿದಂತ ಹಣ ಬಿಡುಗಡೆ ಮಾಡುವುದು.
ಮುಂದುವರಿದ ಕಾರ್ಯಕ್ರಮ, ಯೋಜನೆಗಳಿಗೆ ಸಂಬಂಧಿಸಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಗಳ ಸಂಬಂಧ ಹಣ ಬಿಡುಗಡೆ ಮಾಡಬಹುದಾಗಿದೆ.
ಪ್ರಾರಂಭವಾಗದಿರುವ ಕಾಮಗಾರಿಗಳ ಬಗ್ಗೆ 2023 ಮೇ 22ರ ನಿರ್ದೇಶನಗಳು ಮುಂದುವರಿಯುತ್ತವೆ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅನ್ನ ಭಾಗ್ಯದ ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು: ಬಸವರಾಜ ಬೊಮ್ಮಾಯಿ