- ಬಿಜೆಪಿಗೆ ಸೋಲಿನ ಅರಿವಾಗಿದೆ ಹಾಗಾಗಿ ಧರ್ಮ ರಾಜಕಾರಣ ಮಾಡುತ್ತಿದೆ
- ಯುಗಾದಿ ಬಂದಿರುವ ಹಿನ್ನೆಲೆಯಲ್ಲಿ ಹಲಾಲ್-ಜಟ್ಕಾ ಬಗ್ಗೆ ಪ್ರೀತಿ ಹುಟ್ಟಿದೆ
ಐಟಿ ಬಿಟಿ ಮೂಲಕ ಜಗದ್ವಿಖ್ಯಾತಿ ಪಡೆದಿರುವ ಬೆಂಗಳೂರು ಮಹಾನಗರವನ್ನು ಬಿಜೆಪಿ ಸರ್ಕಾರವು ಕೊಳ್ಳೆ ಹೊಡೆಯುವ ಎಟಿಎಂ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಪಂಚರತ್ನ ರಥಯಾತ್ರೆಯ ವೇಳೆ ಬೆಂಗಳೂರಿನ ಹೆಬ್ಬಾಳದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ”ಕಸ ವಿಲೇವಾರಿ ಅಕ್ರಮ, ರಸ್ತೆ ಗುಂಡಿ ಮುಚ್ಚುವುದರಲ್ಲಿ ಅಕ್ರಮ ಸೇರಿದಂತೆ ಅನೇಕ ಯೋಜನೆಗಳಲ್ಲಿ ಬಿಜೆಪಿ ಅಕ್ರಮ ಎಸಗುತ್ತಿದೆ. ಯೋಜನೆಗಳ ಹೆಸರಿನಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಬೆಂಗಳೂರು ನಗರ ನೋಡಿದರೆ ಈಗ ಎರಡು ರಾಷ್ಟ್ರೀಯ ಪಕ್ಷಗಳಿಗೆ ದುಡ್ಡು ಮಾಡುವ ಎಟಿಎಂ ಆಗಿದೆ. ವಿಧಾನಸೌಧವು ಇವರ ಕೈಯಲ್ಲಿದೆ, ಬಿಬಿಎಂಪಿ ಕೂಡ ಇವರ ಕೈಯ್ಯಲ್ಲಿಯೇ ಇದೆ. ಹೀಗಾಗಿ ಲೂಟಿ ಮಾಡಲು ಪೊಗರುದಸ್ತಾದ ಎಟಿಎಂ ಇವರಿಗೆ ಸಿಕ್ಕಂತಾಗಿದೆ” ಎಂದು ಟೀಕಿಸಿದ್ದಾರೆ.
“ಪಂಚರತ್ನ ರಥಯಾತ್ರೆ ಮಾಡುತ್ತಾ ಹೆಬ್ಬಾಳ ಕ್ಷೇತ್ರದಲ್ಲಿ ನೋಡಿಕೊಂಡು ಬಂದೆ. ರಸ್ತೆಯಲ್ಲೇ ರಾಶಿ ರಾಶಿ ಕಸ ಬಿದ್ದಿದೆ. ಬಿಬಿಎಂಪಿ ಏನು ಮಾಡುತ್ತಿದೆ ಎನ್ನುವುದು ಇದರಿಂದ ಅರ್ಥ ಆಗುತ್ತದೆ” ಎಂದು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯ ಪ್ರತಿಮೆ ರಾಜಕಾರಣದ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, “ಬಿಜೆಪಿ ಸರ್ಕಾರ ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಕೆಲವು ವಿಚಾರಗಳು ತಿರುಗುಬಾಣ ಅದ ಮೇಲೆ ಪುತ್ಥಳಿ ಅನಾವರಣದಲ್ಲಿ ರಾಜಕಾರಣ ಮಾಡುತ್ತಿದೆ. ಮಾಡಲಿ ಸಂತೋಷ, ಈಗ ಉರಿಗೌಡ ಮತ್ತು ನಂಜೇಗೌಡ ಅಂತ ಹೇಳ್ತಾ ಇದ್ದಾರೆ. ಅವರು ಹೀಗೇಯೇ ಮುಂದುವರೆದರೆ ಜನ ಏನು ಮಾಡುತ್ತಾರೆ ಎಂಬುದು ಅವರಿಗೆ ಗೊತ್ತಿದೆ.ಈ ಬಾರಿ ಬಿಜೆಪಿ ಸೋಲುವುದು ಖಚಿತ” ಎಂದು ಹೇಳಿದ್ದಾರೆ.
“ಯುಗಾದಿ ಬಂದಿದೆ. ಕಳೆದ ಯುಗಾದಿಯಲ್ಲಿ ಬಿಜೆಪಿ ನಾಯಕರಿಗೆ ಅಪ್ಯಾಯಮಾನ ಆಗಿದ್ದ ಹಲಾಲ್ ಕಟ್, ಜಟ್ಕಾ ಕಟ್ ಬಗ್ಗೆ ಮತ್ತೆ ಪ್ರೀತಿ ಹುಟ್ಟಿದೆ. ಮತ್ತೆ ವಿವಾದವನ್ನು ಶುರು ಮಾಡಿಕೊಂಡಿದ್ದಾರೆ. ಆಹಾರ, ವ್ಯಾಪಾರದಲ್ಲಿ ಕೂಡ ಅವರು ಧರ್ಮ ಹುಡುಕುತ್ತಿದ್ದಾರೆ” ಎಂದಿದ್ದಾರೆ.