ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ | ಎರಡು ದಶಕಗಳ ಬಿಜೆಪಿ ಕೋಟೆ ಕೆಡವಲು ಕೈ ರಣತಂತ್ರ

Date:

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಒಂದು ಕಾಲದ ಕಾಂಗ್ರೆಸ್‌ನ ಭದ್ರಕೋಟೆ. 1996 ರಿಂದ 1998ರವರೆಗಿನ ಒಂದು ಅವಧಿಯನ್ನು ಬಿಟ್ಟರೆ 1952ರಿಂದ 1999ರವರೆಗೂ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋಲು ಕಾಣದ ಪಕ್ಷವಾಗಿತ್ತು.

1952 ಹಾಗೂ 1957 ರಲ್ಲಿ ಕೇಶವ್‌ ಅಯ್ಯಂಗಾರ್ ಗೆಲುವು ಸಾಧಿಸಿದರೆ, ನಂತರದಲ್ಲಿ ಕರ್ನಾಟಕದ ಮೊದಲ ಚುನಾಯಿತ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು 1977ರವರೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಲೋಕಸಭಾ ಸದಸ್ಯರಾಗಿದ್ದಾಗಲೇ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂಪುಟದಲ್ಲಿ ಕೇಂದ್ರ ರೈಲ್ವೆ ಮಂತ್ರಿಯೂ ಆಗಿ ಸೇವೆ ಸಲ್ಲಿಸಿದ್ದರು.

ಮುಂದೆ ಅತಿ ಹೆಚ್ಚು ಕಾಲ ಈ ಕ್ಷೇತ್ರದಲ್ಲಿ ಜನಪ್ರತಿನಿಧಿಯಾಗಿದ್ದು ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ಮುಖಂಡರಾದ ಸಿ ಕೆ ಜಾಫರ್ ಷರೀಫ್. ಇವರು 1977ರಿಂದ 1995 ಹಾಗೂ 1998ರಿಂದ 2004ರವರೆಗೆ ಒಟ್ಟು 24 ವರ್ಷಗಳ ಕಾಲ ಬೆಂಗಳೂರು ಉತ್ತರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಹಿಂದುಳಿದ, ದಲಿತ ಸಮುದಾಯ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಜಾಫರ್ ಷರೀಫ್ ಎರಡು ದಶಕಗಳ ಕಾಲ ಸಂಸದರಾಗಿದ್ದು ಜಾತ್ಯತೀತ ಸಮಾಜಕ್ಕೆ ನಿಜಕ್ಕೂ ಹಿರಿಮೆಯಾಗಿತ್ತು. 1980ರ ದಶಕದಲ್ಲಿ ದೇಶದ ಕಾರ್ಮಿಕ ನಾಯಕನಾಗಿ ಹೊರಹೊಮ್ಮಿದ್ದ ಜಾರ್ಜ್‌ ಫರ್ನಾಡಿಸ್‌ ಅವರನ್ನೆ ಷರೀಷ್‌ ಮಣಿಸಿದ್ದರು. ನಂತರದಲ್ಲಿ ಜಾಫರ್‌ ಷರೀಫ್ 10 ವರ್ಷಗಳ ಕಾಲ ಇಂದಿರಾ ಗಾಂಧಿ ಹಾಗೂ ಪಿ ವಿ ನರಸಿಂಹರಾವ್ ಸಂಪುಟದಲ್ಲಿ ಕೇಂದ್ರ ರೈಲ್ವೆ ಮಂತ್ರಿಯೂ ಆಗಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆ ಹನುಮಂತಯ್ಯ ಹಾಗೂ ಡಿ ವಿ ಸದಾನಂದ ಗೌಡ ಒಳಗೊಂಡು ಇಬ್ಬರು ಮುಖ್ಯಮಂತ್ರಿಗಳು ಹಾಗೂ ಮೂವರು ಕೇಂದ್ರ ಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಈ ಕ್ಷೇತ್ರದ್ದು. ಐದು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ವಶದಲ್ಲಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ 2004ರಿಂದ 2019ರ 17ನೇ ಲೋಕಸಭಾ ಅವಧಿಯವರೆಗೂ ಬಿಜೆಪಿಯ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದೆ.

2004ರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹೆಚ್‌ ಟಿ ಸಾಂಗ್ಲಿಯಾನ, 2009ರಲ್ಲಿ ಡಿ ಬಿ ಚಂದ್ರೇಗೌಡ 2014 ಹಾಗೂ ಪ್ರಸ್ತುತ 2019ರ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? 70ರ ದಶಕದ ಕ್ರಿಕೆಟ್ ಪ್ರಿಯರ ಆರಾಧ್ಯ ದೈವ ಜಿಆರ್‌ ವಿಶ್ವನಾಥ್‌ಗೆ 75ರ ಸಂಭ್ರಮ

ಬೆಂಗಳೂರು ಉತ್ತರ ಕ್ಷೇತ್ರದ ಮತ್ತೊಂದು ವಿಶೇಷವೇನೆಂದರೆ ಮೊದಲ ಎರಡು ಬಾರಿ ಕೇಶವ್‌ ಅಯ್ಯಂಗಾರ್ ಹೊರತುಪಡಿಸಿದರೆ ಉಳಿದ 15 ಲೋಕಸಭಾ ಅವಧಿಯವರೆಗೂ ಹೊರಗಿನಿಂದ ಬಂದ ರಾಜಕಾರಣಿಗಳು ಇಲ್ಲಿನ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ.

ಅಲ್ಲದೆ ಬೆಂಗಳೂರು ಉತ್ತರ ಕ್ಷೇತ್ರವು 1951ರಿಂದ ಇಲ್ಲಿಯವರೆಗೂ ಕ್ಷೇತ್ರ ಪುನರ್‌ವಿಂಗಡನೆಗೊಂಡಂತೆ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ ಸೇರಿದಂತೆ ಹಲವು ಹೆಸರುಗಳಿಂದ ನಾಮಕರಣಗೊಳ್ಳುತ್ತ ಬಂದಿದೆ.

ವಿಧಾನಸಭಾ ಕ್ಷೇತ್ರಗಳು  

ಪರಿಶಿಷ್ಟ ಜಾತಿ ಮೀಸಲಿನ ಪುಲಿಕೇಶಿ ನಗರ ಒಳಗೊಂಡು ಕೆ ಆರ್ ಪುರ, ಬ್ಯಾಟರಾಯನ ಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ ಹಾಗೂ ಹೆಬ್ಬಾಳ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಈ ವ್ಯಾಪ್ತಿಯಲ್ಲಿವೆ.

ಹೆಬ್ಬಾಳ, ಬ್ಯಾಟರಾಯನ ಪುರ ಹಾಗೂ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಶಾಸಕರಾಗಿದ್ದಾರೆ.

ಮತದಾರರು

18.24 ಲಕ್ಷ ಪುರುಷರು, 15.05 ಲಕ್ಷ ಮಹಿಳೆಯರು ಒಳಗೊಂಡು 33.30 ಲಕ್ಷ ಮಂದಿ ಮತದಾರರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿದ್ದಾರೆ.

ಕೆಲವು ಅಂಕಿಅಂಶಗಳ ಪ್ರಕಾರ ಬೆಂಗಳೂರು ಉತ್ತರದಲ್ಲಿ 13,51 ಲಕ್ಷ ಒಕ್ಕಲಿಗ, ಮುಸ್ಲಿಂ ಸಮುದಾಯ 6.97 ಲಕ್ಷ, ಎಸ್‌ಸಿಎಸ್‌ಟಿ 6.56 ಲಕ್ಷ, ಕುರುಬ ಸಮುದಾಯ 5.47 ಲಕ್ಷ, ಲಿಂಗಾಯತ ಸಮುದಾಯ 5.20 ಲಕ್ಷ ಹಾಗೂ ಇತರೆ ಸಮುದಾಯಗಳು 2.57 ಲಕ್ಷ ಮಂದಿ ಜಾತಿವಾರು ಜನಸಂಖ್ಯೆಯಲ್ಲಿದ್ದಾರೆ.

2024ರ ಜಿದ್ದಾಜಿದ್ದಿ ಹೇಗಿದೆ?   

ಕೆಲವೇ ದಿನಗಳಲ್ಲಿ ಘೋಷಣೆಯಾಗುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಇಲ್ಲಿಯವರೆಗೂ ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ. ಬೆಂಗಳೂರು ಉತ್ತರ ಸತತ ನಾಲ್ಕು ಬಾರಿಯಿಂದ ಕಮಲ ಪಕ್ಷದ ಹಿಡಿತದಲ್ಲಿದ್ದರೂ ಐದು ದಶಕಗಳ ಪ್ರತಿನಿಧಿಸಿದ್ದ ಕಾಂಗ್ರೆಸ್‌ ಒಳ್ಳೆಯ ಹಿಡಿತ ಹೊಂದಿದೆ. ಕಾಂಗ್ರೆಸ್ ಅಭ್ಯರ್ಥಿಗಳು 4 ಬಾರಿಯಿಂದಲೂ ಪರಾಭವಗೊಂಡರೂ ಒಳ್ಳೆಯ ಪೈಪೋಟಿ ನೀಡುತ್ತಾ ಬಂದಿದ್ದಾರೆ.

ತಿಂಗಳುಗಳ ಹಿಂದೆ ನಿವೃತ್ತಿಯ ಮಾತನಾಡಿದ್ದ ಹಾಲಿ ಸಂಸದ ಡಿ ವಿ ಸದಾನಂದ ಗೌಡ ಕೆಲವು ದಿನಗಳಿಂದ ತಾವು ಕೂಡ ಟಿಕೆಟ್ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿದ್ದ ಸಚಿವ ಕೃಷ್ಣ ಬೈರೇಗೌಡ ತಾವು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಸೇರಿದಂತೆ ಹಲವು ಹೆಸರುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಬಿಜೆಪಿಯಿಂದ ಕ್ಷೇತ್ರ ಕಸಿದುಕೊಳ್ಳಲು ಅಚ್ಚರಿ ಅಭ್ಯರ್ಥಿಯ ಹೆಸರು ಪ್ರಕಟಿಸುವ ಸಾಧ್ಯತೆ ಕೂಡ ಇದೆ.

ಬಿಜೆಪಿಯಿಂದ ಹಾಲಿ ಸಂಸದ ಡಿ ವಿ ಸದಾನಂದ ಗೌಡ ಅವರಲ್ಲದೆ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರ ಅಳಿಯ ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೆಶಕ ಡಾ. ಸಿ ಎನ್ ಮಂಜುನಾಥ್, ಮಾಜಿ ಸಚಿವ ಸಿ ಟಿ ರವಿ, ಶೋಭಾ ಕರಂದ್ಲಾಜೆ ಹಾಗೂ ನಟಿ ಸುಮಲತಾ ಸೇರಿದಂತೆ ಕಮಲ ಪಕ್ಷದ ಹಿರಿಯ ನಾಯಕರ ಹೆಸರುಗಳು ಪ್ರಸ್ತಾಪವಾಗುತ್ತಿವೆ. ಒಟ್ಟಿನಲ್ಲಿ ಯಾರೆ ಅಭ್ಯರ್ಥಿಯಾದರೂ ಬೆಂಗಳೂರು ಉತ್ತರ ಲೋಕಸಭಾ ಚುನಾವಣಾ ಕಣ ರಣಾಂಗಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...

‘ಬರ ಪರಿಹಾರ ಸಾಕು’ ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ: ಡಿಸಿಎಂ ಡಿಕೆಶಿ ವಾಗ್ದಾಳಿ

"ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು...

ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಘರ್ಜಿಸಿದ ಸಿದ್ದರಾಮಯ್ಯ

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ...