ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕಡೆಗೂ ಬಿಡುಗಡೆಯಾಗಿದೆ. ಎರಡು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಬಿಜೆಪಿ, ಅದರಂತೆ ತನ್ನ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ರಿಲೀಸ್ ಮಾಡಿದೆ.
ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ದೆಹಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪಟ್ಟಿ ಬಿಡುಗಡೆ ಮಾಹಿತಿ ನೀಡಿದರು.
ಮೊದಲ ಬಾರಿಗೆ ಉತ್ತರ ಪ್ರದೇಶ ಮಾದರಿಯನ್ನು ರಾಜ್ಯಕ್ಕೆ ತಂದಿರುವ ಬಿಜೆಪಿ 52 ಹೊಸ ಮುಖಗಳಿಗೆ ಮನ್ನಣೆ ಹಾಕಿದೆ. ಗೆಲ್ಲುವ ಹಾಗೂ ಭ್ರಷ್ಟಾಚಾರ ರಹಿತ ಮುಖಗಳಿಗೆ ಪಕ್ಷ ಮಣೆ ಹಾಕಿ ಕ್ಲೀನ್ ಇಮೇಜ್ ಕಾಪಾಡಿಕೊಳ್ಳುವತ್ತ ಕಮಲಪಕ್ಷ ಗಮನ ಹರಿಸಿದೆ.
ಓಬಿಸಿ ಸಮಾಜಕ್ಕೆ 32, ಎಸ್ಸಿ 30, ಎಸ್ಟಿ 16 ಟಿಕೆಟ್ ನೀಡಿದೆ. ಹಾಗೆಯೇ ಎಂಟು ಮಂದಿ ಮಹಿಳೆಯರಿಗೆ ಟಿಕೆಟ್ ಘೋಷಿಸಲಾಗಿದೆ. 5 ವಕೀಲರು, 9 ವೈದ್ಯರು, ಶಿಕ್ಷಣ ತಜ್ಞರು 3, ನಿವೃತ್ತ ಐಎಎಸ್ ಅಧಿಕಾರಿ 1, ಐಪಿಎಸ್ ಅಧಿಕಾರಿ ಒಬ್ಬರಿಗೆ ಅವಕಾಶ ನೀಡಲಾಗಿದೆ.
ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, “ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ” ಎಂದರು.
ಟಿಕೆಟ್ ವಿವರ
ಶಿಗ್ಗಾಂವಿ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕಾರಿಪುರಕ್ಕೆ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಸೇರಿದಂತೆ ಶಶಿಕಲಾ ಜೊಲ್ಲೆ, ಬಾಲಚಂದ್ರ ಜಾರಕಿಹೊಳಿ, ಗೋವಿಂದ ಕಾರಜೋಳ, ದುರ್ಯೋದನ ಐಹೊಳೆ, ಹಾಲಪ್ಪ ಆಚಾರ್, ಪಿ ರಾಜೀವ್, ಅನಿಲ್ ಮೆಣಸಿನಕಾಯಿ, ಸಿ ಸಿ ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ, ಎಂ ಆರ್ ಪಾಟೀಲ್ , ಅಮೃತ ದೇಸಾಯಿ, ಕ್ರಾಂತಿ ಕಿರಣ್, ಅರವಿಂದ್ ಬೆಲ್ಲದ್, ಸುನೀಲ್ ಹೆಗಡೆ, ಸುರೇಶ್ ನಾಯ್ಕ್ , ವಿಶ್ವೇಶ್ವರ್ ಹೆಗಡೆ ಕಾಗೇರಿ, ರಮೇಶ್ ಜಾರಕಿಹೋಳಿ, ಅಭಯ್ ಪಾಟೀಲ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಕಂಪ್ಲಿ- ಸುರೇಶ್ ಬಾಬು, ಬಳ್ಳಾರಿ- ಬಿ ಶ್ರೀರಾಮುಲು, ಸಂಡೂರು- ಶಿಲ್ಪಾ ನಾಗೇಂದ್ರ, ಮೊಳಕಾಲ್ಮೂರು- ತಿಪ್ಪೇಸ್ವಾಮಿ ಸೇರಿದಂತೆ ಉಳಿದ ಕ್ಷೇತ್ರಗಳಲ್ಲಿ ಅನಿಲ್ ಕುಮಾರ್, ತಿಪ್ಪಾರಡ್ಡಿ, ಎಂ ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಎಂ ಪಿ ರೇಣುಕಾಚಾರ್ಯ, ಬಿ ಪಿ ಹರೀಶ್, ಆರಗ ಜ್ಷಾನೇಂದ್ರ, ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ಪಟ್ಟಿ ಈ ಕೆಳಗಿನಂತಿದೆ.