- ರೇಟ್ ಕಾರ್ಡ್ ಜಾಹೀರಾತಿನ ವಿಚಾರದಲ್ಲಿ ಡಿಕಿಶಿಗೆ ನೋಟಿಸ್ ನೀಡದ ಆಯೋಗ
- ಚುನಾವಣಾ ಆಯೋಗಕ್ಕೆ ಸಮರ್ಪಕ ಮಾಹಿತಿ ನೀಡಿದ್ದೇನೆ ಎಂದ ಶಿವಕುಮಾರ್
ಬಿಜೆಪಿ ಪಕ್ಷದವರೇ ಕೊಟ್ಟಿರುವ ಮಾಹಿತಿಯಂತೆ ರಾಜ್ಯ ಸರ್ಕಾರದ ವಿರುದ್ಧ ರೇಟ್ ಕಾರ್ಡ್ ಜಾಹೀರಾತನ್ನು ನಾವು ಬಿಡುಗಡೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಬಿಡುಗಡೆ ಮಾಡಿರುವ ಜಾಹೀರಾತಿನ ರೇಟ್ ಕಾರ್ಡ್ನ ಮಾಹಿತಿಯನ್ನು ಬಿಜೆಪಿ ಪಕ್ಷದವರು ಕೊಟ್ಟಿರುವ ಹೇಳಿಕೆಗಳ ಆಧಾರದಿಂದ ಮಾಡಿದ್ದು ಎಂದು ಹೇಳಿದರು.
ಜಾಹೀರಾತಿನ ವಿಚಾರದಲ್ಲಿ ಚುನಾವಣಾ ಆಯೋಗ ನೀಡಿರುವ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್ ನಾನು ಚುನಾವಣಾ ಆಯೋಗಕ್ಕೆ ಈ ಕುರಿತಂತೆ ಉತ್ತರ ಕೊಟ್ಟಿದ್ದೇನೆ. ಈಗ ಆಧಾರ ಏನು ಅಂತ ಕೇಳಿದ್ದಾರೆ.
ಗೂಳಿಹಟ್ಟಿ ಶೇಖರ್, ಬಸನಗೌಡಪಾಟೀಲ್ ಯತ್ನಾಳ್, ವಿಶ್ವನಾಥ್ ಅವರೇ ರೇಟ್ ಕಾರ್ಡ್ ಕೊಟ್ಟಿದ್ದಾರೆ. ಸಿಎಂ ಹುದ್ದೆಗೆ ಎಷ್ಟು, ಮಂತ್ರಿಗಳಿಗೆಷ್ಟು ಇದೆಲ್ಲಾ ರೇಟ್ ಕಾರ್ಡ್ ಕೊಟ್ಟಿದ್ದು ಬಿಜೆಪಿಯವರೇ ಎಂದರು.
ಈ ಸುದ್ದಿ ಓದಿದ್ದೀರಾ?:ಸಿದ್ದರಾಮಯ್ಯ ಸರ್ಕಾರ ಬಂದರೆ ಕಿಸಾನ್ ಸಮ್ಮಾನ್ ಯೋಜನೆ ಸೇರಿ…
ಬಿಜೆಪಿ ನಾಯಕರ ಹೇಳಿಕೆ ಮೇಲೆಯೇ ನಾವೂ ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೋಮುಗಲಭೆ ಆಗುತ್ತೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಹೀಗಿರುವಾಗ ಅವರಿಗೂ ನೋಟಿಸ್ ಕೊಡಬೇಕು ಅಲ್ವಾ? ಎಂದು ಅವರು ಪ್ರಶ್ನಿಸಿದರು.
ಚುನಾವಣಾ ಆಯೋಗ ನಮಗೆ ನೋಟಿಸ್ ಕೊಟ್ಟಂತೆ ಅಮಿತ್ ಶಾ, ಜೆಪಿ ನಡ್ಡಾಗೂ ನೋಟಿಸ್ ಕೊಡಬೇಕಲ್ಲವೇ ಎಂದು ಶಿವಕುಮಾರ್ ಕೇಳಿದರು.