ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಸೋತರೆ ಕೇಂದ್ರ ಸರ್ಕಾರದಿಂದ ಬರುವ ಎಲ್ಲ ಯೋಜನೆಗಳು ರಾಜ್ಯಕ್ಕೆ ಬಂದ್ ಆಗಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅಭಿಪ್ರಾಯ ಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಜಿ. ಕರುಣಾಕರ ರೆಡ್ಡಿ ಪರ ರೋಡ್ ಶೋ ನಡೆಸಿದ ಬಳಿಕ ಬಹಿರಂಗ ಸಭೆಯಲ್ಲಿ ಅವರು ಈ ಮಾತು ಹೇಳಿದರು.
“ಸಿದ್ದರಾಮಯ್ಯ ಸರ್ಕಾರ ಬಂದಿದ್ದೇ ಆದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಸೇರಿ ಹತ್ತು ಹಲವು ಯೋಜನೆಗಳು ರಾಜ್ಯದ ಜನರಿಗೆ ತಲುಪುವುದಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ತರಲು ಬಿಜೆಪಿ ಬೆಂಬಲಿಸಿ” ಎಂದರು.
“ಪರಿಶಿಷ್ಟರಿಗೆ ಒಳಮೀಸಲಾತಿಯನ್ನು ಬಿಜೆಪಿ ಸರ್ಕಾರ ಕೊಟ್ಟಿದೆ. ಪರಿಶಿಷ್ಟ ಪಂಗಡ, ಲಿಂಗಾಯತರು, ಒಕ್ಕಲಿಗರ ಮೀಸಲಾತಿಯನ್ನೂ ಹೆಚ್ಚಿಸಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗ ಹೆಚ್ಚಿಸಿರುವ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳಿದೆ. ಇಂತಹವರಿಗೆ ಬುದ್ದಿ ಕಲಿಸಬೇಕು” ಎಂದು ಕರೆ ಕೊಟ್ಟರು.
“ಕಾಂಗ್ರೆಸ್ನವರು ತಾವು ಭ್ರಷ್ಟಾಚಾರ ಮಾಡಿ, ಮತ್ತೊಬ್ಬರ ಮೇಲೆ ಆರೋಪ ಮಾಡುವುದನ್ನು ಕೈಬಿಡಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಡಿ ಕೆ ಶಿವಕುಮಾರ ಅವರೆಲ್ಲ ಭ್ರಷ್ಟಾಚಾರ ಮಾಡಿ ಬೇಲ್ ಮೇಲೆ ಹೊರಗಿದ್ದಾರೆ. ಅವರ ಮೇಲಿನ ಆರೋಪಗಳು ಸಾಬೀತಾದರೆ ಜೈಲಿಗೆ ಹೋಗುವುದು ತಪ್ಪುವುದಿಲ್ಲ” ಎಂದು ನಡ್ಡಾ ತಿಳಿಸಿದರು.
ಭಾಷಣದ ಕೊನೆಗೆ ಭಜರಂಗ ದಳ ನಿಷೇಧ ಕುರಿತು ವಿಷಯ ಪ್ರಸ್ತಾಪಿಸಿ, ʼಭಜರಂಗ ಬಲಿ ಕೀ ಜೈʼ ಎಂದು ಕೂಗಿದರು.