ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರನ್ನು ವಿಭಜಿಸಲು ಮತ್ತು ಸಾಮರಸ್ಯವನ್ನು ನಾಶಮಾಡಲು ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿದೆ ಎಂದು ಮಕ್ಕಳ್ ನೀಧಿ ಮೈಯಂ ಸಂಸ್ಥಾಪಕ, ನಟ ಕಮಲ್ ಹಾಸನ್ ಹೇಳಿದ್ದಾರೆ. ಸಿಎಎ ಅನುಷ್ಠಾನವನ್ನು ಕಟುವಾಗಿ ವಿರೋಧಿಸಿದ್ದಾರೆ.
“ಭಾರತದ ಸಂವಿಧಾನದ ಜಾತ್ಯತೀತತೆ ಮತ್ತು ಬದ್ಧತೆಗೆ ಅನುಗುಣವಾಗಿ ಸಿಎಎಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ ತಮಿಳುನಾಡಿನ ಮೊದಲ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮೈಯಂ ಆಗಿದೆ” ಎಂದು ಅವರು ಹೇಳಿದ್ದಾರೆ.
“ಸಿಎಎ ಜಾರಿಗೊಳಿಸುವ ಕ್ರಮವು ಬಿಜೆಪಿಯ ‘ನೀಚ ತಂತ್ರಗಳನ್ನು’ ಸೂಚಿಸುತ್ತದೆ. ಬಹುಶಃ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಅದು ಭಾರತವನ್ನು ಏನು ಮಾಡಬೇಕೆಂದು ಯೋಜಿಸಿದೆಯೋ ಅದಕ್ಕೆ ಸಿಎಎ ಜಾರಿ ಪರಿಪೂರ್ಣ ಉದಾಹರಣೆಯಾಗಿದೆ” ಎಂದು ಹಾಸನ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕೇರಳದಲ್ಲಿ ಸಿಎಎ ಜಾರಿ ಮಾಡಲ್ಲ: ಸಿಎಂ ಪಿಣರಾಯಿ ವಿಜಯನ್
“ಕೇಂದ್ರ ಸರ್ಕಾರದಿಂದ ನಿರ್ಲಕ್ಷಿಸಲ್ಪಟ್ಟ ಮತ್ತು ಕಡೆಗಣಿಸಲ್ಪಟ್ಟ ನಮ್ಮ ಮುಸ್ಲೀ ಸಹೋದರರು ತಮ್ಮ ‘ರಂಜಾಜ್’ ಪವಿತ್ರ ದಿನಗಳನ್ನು ಆರಂಭಿಸುವ ಒಂದು ದಿನದ ಮುನ್ನ ಈ ದುರಂತ ಸುದ್ದಿಯನ್ನು ಕೇಳುವಂತಾಗಿದೆ. ಸಿಎಎ ತುಳಿತಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಉದ್ದೇಶವಾಗಿದ್ದರೆ, ಇದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾದ ತಮಿಳರನ್ನು ಏಕೆ ಸೇರಿಸಬಾರದು” ಎಂದು ಪ್ರಶ್ನಿಸಿದ್ದಾರೆ.
”ಕೇಂದ್ರ ಸರಕಾರವು ವಾಸ್ತವವನ್ನು ಕಡೆಗಣಿಸುತ್ತಿರುವುದು ಖಂಡನೀಯ. ನಾವು ಒಂದಾಗೋಣ, ವಾಸ್ತವಾಂಶಗಳನ್ನು ಜನರ ಮುಂದಿಡೋಣ. ಅಧಿಕಾರಕ್ಕೆ ಬರೋಣ. ನಮ್ಮ ನಾಗರಿಕರನ್ನು ಧರ್ಮ, ಭಾಷೆ ಮತ್ತು ಜಾತಿಯ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುವವರಿಗೆ ಮುಂದಿನ ಚುನಾವಣೆಯಲ್ಲಿ ವಾಸ್ತವಾಂಶ ದೊರೆಯುತ್ತದೆ” ಎಂದು ಕಮಲ್ ಹಾಸನ್ ಹೇಳಿದ್ದಾರೆ.