- ನೂತನ ಸರ್ಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಘೋಷಣೆ
- ಸಿದ್ದರಾಮಯ್ಯ ಜೊತೆ ಎಂಟು ಮಂದಿ ಸಚಿವರ ಪದಗ್ರಹಣ ಕಾರ್ಯಕ್ರಮ
ನೂತನವಾಗಿ ರಚನೆಯಾಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಮಗೆ ಕೊಟ್ಟ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕ್ಯಾಬಿನೆಟ್ ಸಭೆ ಬಳಿಕ ಇದು ಪೂರ್ಣವಾಗಲಿದೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹೇಳಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನೂತನ ಸರ್ಕಾರದ ಪದಗ್ರಹಣ ಕಾರ್ಯಕ್ರಮದ ಬಳಿಕ ಮಾತನಾಡಿದ ರಾಹುಲ್ ಗಾಂಧಿ ನಾಡಿನ ಜನರಿಗೆ ಕೃತಜ್ಞತೆ ಸಲ್ಲಿಸಿದರು.
ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದೀರಾ. ಈ ಗೆಲುವಿನ ಬಗ್ಗೆ ಹಲವು ಬಗೆಯ ಚರ್ಚೆ, ವಿಮರ್ಶೆಗಳು ನಡೆದವು. ಆದರೆ ನನ್ನ ಪ್ರಕಾರ ನಮ್ಮೊಂದಿಗೆ ಇದ್ದ ಸತ್ಯ, ಸೋತುನಿಂತ ಬಡ ಜನ ಮತ್ತು ರಾಜ್ಯದ ಸಹೃದಯದ ನಾಗರಿಕರು ಜೊತೆ ನಿಂತಿದ್ದು ನಮ್ಮ ಗೆಲುವಿಗೆ ಕಾರಣವಾಯಿತು.
ಬಿಜೆಪಿಯ ಹಣಬಲ, ಆಡಳಿತ ಬಲವನ್ನು, ಅವರ ಭ್ರಷ್ಟಾಚಾರ, ದ್ವೇಷವನ್ನು ನಾಡಿನ ಜನ ದೂರ ತಳ್ಳಿ ಪ್ರೀತಿಯ ಅಂಗಡಿ ತೆರೆಯುವಲ್ಲಿ ನೀವೆಲ್ಲ ಕೈ ಜೋಡಿಸಿದ್ದೀರ ಎಂದು ರಾಹುಲ್ ಗಾಂಧಿ ಹೇಳಿದರು.
ನಾವು ಕೊಟ್ಟ ಆರೂ ಗ್ಯಾರಂಟಿ ಯೋಜನೆಗಳನ್ನೂ ಇಂದೇ ಜಾರಿ ಮಾಡಿಸುತ್ತೇವೆ. ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನಾವು ಕೊಡುತ್ತೇವೆ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರ ತಂದ ರಾಜ್ಯದ ಎಲ್ಲರಿಗೂ ನಮ್ಮ ನಮನಗಳು, ನೀವು ಕೊಟ್ಟ ಶಕ್ತಿಯನ್ನು ನಾವು ಮರೆಯುವುದಿಲ್ಲ. ಇದು ನಿಮ್ಮ ಸರ್ಕಾರ, ಇದು ನಿಮಗಾಗಿ ಮನಪೂರ್ವಕವಾಗಿ ಕೆಲಸ ಮಾಡಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?:ಗ್ಯಾರಂಟಿಗಳನ್ನು ಟೀಕಿಸುತ್ತಿರುವ ಈ ಸಂದರ್ಭದಲ್ಲಿ …..!
ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮ್ಮದು ನುಡಿದಂತೆ ನಡೆಯುವ ಸರ್ಕಾರ ಅದರಂತೆ ಮಾಡಿ ತೋರಿಸಿದ್ದೇವೆ ಎಂದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ಧ ಅವರು, ಮೋದಿ ಜಪಾನ್ ಗೆ ಹೋಗುವಾಗಲೆಲ್ಲ ನೋಟ್ ಬಂಧಿ ಜಾರಿ ಮಾಡುತ್ತಾರೆ. ಅದು ಏಕೋ ಗೊತ್ತಿಲ್ಲ. ಹಿಂದೆ ಅಲ್ಲಿಗೆ ಹೋದಾಗ ಸಾವಿರ ರೂಪಾಯಿ ನೋಟ್ ಬ್ಯಾನ್ ಮಾಡಿದ್ದರು. ಈ ಬಾರಿ ಎರಡು ಸಾವಿರದ ನೋಟನ್ನು ಹಿಂಪಡೆದಿದ್ದಾರೆ. ದೇಶದ ಲಾಭ ನಷ್ಟದ ಲೆಕ್ಕಾಚಾರ ಮೋದಿ ಅವರಿಗಿಲ್ಲ ಎಂದರು.
ಮೋದಿ ಮಾಡಿರುವ ನೋಟ್ ಬಂಧಿ, ಜನರಿಗೆ ತೊಂದರೆ ಕೊಡುವ ಕೆಲಸ. ನಮ್ಮ ಸರ್ಕಾರ ಜನಪರ ಜನರ ಸರ್ಕಾರ. ಇಂತಹ ಸರ್ಕಾರದ ಅವಶ್ಯಕತೆ ಇದೆ ಎನ್ನುವುದನ್ನು ನೀವೆಲ್ಲ ಮನಸ್ಸಿನಲ್ಲಿಟ್ಟುಕೊಂಡಿರಿ. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಇದನ್ನು ಬೆಂಬಲಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.