ಇಂದು (ಜೂನ್ 09) ದಲಿತ ಚಳವಳಿಯ ನಾಯಕ ಪ್ರೊ. ಬಿ ಕೃಷ್ಣಪ್ಪ ಅವರ ಜನ್ಮದಿನ. ರಾಜ್ಯದಲ್ಲಿ ದಲಿತ ಧ್ವನಿಗೂ ವೇದಿಕೆ ಬೇಕು, ಆ ಧ್ವನಿ ವಿಧಾನಸೌಧಕ್ಕೆ ಕೇಳಬೇಕೆಂದು ಶ್ರಮಿಸಿದವರು ಬಿ ಕೃಷ್ಣಪ್ಪ. ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ
ಕರ್ನಾಟಕದ ದಲಿತ ಚಳವಳಿಯು ಹುಟ್ಟಿಗೆ ಕಾರಣರಾದವರಲ್ಲಿ ಮೊದಲಿಗರಾದ ಪ್ರೊ. ಬಿ ಕೃಷ್ಣಪ್ಪ ಇಡೀ ದೇಶದಲ್ಲೆ ವಿಶಿಷ್ಟವಾದ ದಲಿತ ಚಳವಳಿಯನ್ನು ಮುನ್ನಡೆಸಿದ ನಾಯಕ. ಕರ್ನಾಟಕದ ದಲಿತ ಚಳವಳಿ ಕೇವಲ ತಳಸಮುದಾಯಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧದ ಹೋರಾಟಕ್ಕೆ ಅಷ್ಟೇ ಸೀಮಿತವಾಗದೆ ರಾಜ್ಯದ ಅನೇಕ ಕಡೆ ನಡೆಸಿದ ಭೂ ಹೋರಾಟಗಳಿಂದ ಸಾವಿರಾರು ಎಕರೆ ಭೂಮಿ ದಲಿತರಿಗೆ ಸಿಕ್ಕಿದೆ.
ಇವತ್ತಿಗೂ ಎಷ್ಟೊ ಹಳ್ಳಿಗಳಲ್ಲಿ ದಲಿತರು ಸತ್ತರೆ ಹೂಳುವುದಕ್ಕೆ ಅಂಗೈ ಅಗಲದ ಜಾಗವಿಲ್ಲದ ಪರಿಸ್ಥಿತಿ ಇರುವಾಗ ದಲಿತ ಚಳವಳಿ ಎಪ್ಪತ್ತು ಎಂಬತ್ತರ ದಶಕದಲ್ಲಿ ಭೂ ಹೋರಾಟಗಳನ್ನು ನಡೆಸಿ ಸಾವಿರಾರು ಎಕರೆ ಭೂಮಿಯನ್ನು ದಲಿತರಿಗೆ ಕೊಡಿಸಿತು. ಅಲ್ಲದೆ ‘ಭೂ ಪರಭಾರೆ ಕಾಯ್ದೆ’ ಜಾರಿಗೆ ಕಾರಣವಾಯಿತು. ಈ ಹೋರಾಟಗಳ ನೇತೃತ್ವ ಬಿ ಕೃಷ್ಣಪ್ಪ ಅವರದು.
ಚಂದ್ರಗುತ್ತಿ ಬೆತ್ತಲೆ ಸೇವೆಯ ನಿಷೇಧಕ್ಕಾಗಿ ಬಿಕೆ ರೂಪಿಸಿದ ಹೋರಾಟದ ಹಿಂದೆ ಸಾಂಪ್ರದಾಯಿಕ ಸಮಾಜವನ್ನು ಎದರು ಹಾಕಿಕೊಂಡು ನಡೆಸಿದ ಹೋರಾಟದ ಕುರಿತು ಅಧ್ಯಯನ ಮಾಡಿದರೆ ದಲಿತ ಚಳವಳಿಯ ಚಿಕಿತ್ಸಕ ಗುಣ ಅರ್ಥವಾಗುತ್ತದೆ.
ದಲಿತ ಚಳವಳಿ ಎಡಪಂಥೀಯ ಚಿಂತನೆ ಮತ್ತು ಲೋಹಿಯಾ ಸಮಾಜವಾದದ ಪ್ರಭಾವದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದರೂ ಬಿಕೆಯವರ ಕಾರಣಕ್ಕೆ ಅದಕ್ಕೆ ಅಂಬೇಡ್ಕರ್ವಾದಿ ದೃಷ್ಟಿಕೋನ ದಕ್ಕಿತ್ತು.
ಈ ಲೇಖನ ಓದಿದ್ದೀರಾ?: ಗ್ಯಾರಂಟಿ ಗಲಾಟೆಯಲ್ಲಿ ಕಾಣೆಯಾಯಿತು ಒಕ್ಕೂಟ ಸರ್ಕಾರ ಮಾಡುತ್ತಿರುವ ಅನ್ಯಾಯದ ಚರ್ಚೆ
ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಂಬೇಡ್ಕರ್ವಾದಿ ನೋಟಕ್ರಮದಿಂದ ಗ್ರಹಿಸಿ ಬಿಕೆಯವರು ಎತ್ತಿದ ಗಂಭೀರ ಪ್ರಶ್ನೆಗಳು ಅವತ್ತಿಗಿಂತಲೂ ಇವತ್ತಿಗೆ ಹೆಚ್ಚು ಪ್ರಸ್ತುತವಾಗುತ್ತಿರುವುದು ಅವರ ಚಿಂತನೆಗೆ ಇರುವ ಮಹತ್ವವನ್ನು ತೋರಿಸುತ್ತದೆ.
ಬಿ.ಕೃಷ್ಣಪ್ಪನವರನ್ನು ನೆನಪು ಮಾಡಿಕೊಳ್ಳವುದರ ಜೊತೆಗೆ ಭೂ ಹೋರಾಟಗಳು ಮತ್ತು ಚಂದ್ರಗುತ್ತಿ ಪ್ರಕರಣದಂತಹ ಹೋರಾಟಗಳಿಗೆ ಬಿಕೆಯವರು ನೀಡಿದ ಕೊಡುಗೆ, ಸಾಹಿತ್ಯ ವಿಮರ್ಶೆಯ ಬರಹಗಳ ಮೂಲಕ ಎತ್ತಿದ ಪ್ರಶ್ನೆಗಳ ಅಧ್ಯಯನ ಮಾಡಬೇಕಿದೆ