ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರನ್ನು ಬದಲಿಸಬೇಕು ಎಂದು ವಿವಿಧ ಮಠಾಧೀಶರು ಬಿಜೆಪಿಯನ್ನು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಸಾಮಾಜಿಕ ಸಮಸ್ಯೆ, ಧಾರ್ಮಿಕ ಸಮಸ್ಯೆ ಹಾಗೂ ರಾಜಕೀಯ ಸಮಸ್ಯೆ ಬಗ್ಗೆ ಚರ್ಚಿಸಲು ಬುಧವಾರ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಕರೆದಿದ್ದ ಮಠಾಧಿಪತಿಗಳ ಚಿಂತನ ಮಂಥನ ಸಭೆಯಲ್ಲಿ ಪ್ರಲ್ಹಾದ್ ಜೋಶಿ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದೆ.
ಭಾರತೀಯ ಜನತಾ ಪಕ್ಷ ಮಾರ್ಚ್ 31ರೊಳಗೆ ಧಾರವಾಡ ಲೋಕಸಭಾ ಕ್ಷೇತ್ರ ಅಭ್ಯರ್ಥಿಯೆಂದು ಘೋಷಿಸಿರುವ ಪ್ರಲ್ಹಾದ್ ಜೋಶಿಯವರನ್ನು ಬದಲಿಸಬೇಕು ಎಂದು ಮಠಾಧೀಶರ ಸಭೆ ಹಕ್ಕೊತ್ತಾಯ ಮಂಡಿಸಿದೆ.
ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ನೂರಾರು ಮಠಾಧಿಪತಿಗಳು ಪಾಲ್ಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
“ವೀರಶೈವ ಲಿಂಗಾಯತ ಧಾರ್ಮಿಕ ಅವನತಿ ಆಗುತ್ತಿದೆ ಎಂಬ ವಿಚಾರ ಕುರಿತು, ಸಾಮಾಜಿಕವಾಗಿ ಒಳಪಂಗಡಗಳು ಪರಿಣಾಮ, ಸಮಾಜದ ನಾಯಕರಿಗೆ ಪೆಟ್ಟು ಬಿದ್ದಾಗ ಮಠಾಧಿಪತಿಗಳು ಮಾತನಾಡಬೇಕು. ಉತ್ತರ ಭಾರತದಲ್ಲಿ ಸಾಧು ಸನ್ಯಾಸಿಗಳು ರಾಜಕಾರಣ ಮಾಡುತ್ತಾರೆ. ದಕ್ಷಿಣ ಭಾರತ ಮಾಡುತ್ತಿಲ್ಲ. ನಾವು ಸಹ ಚುನಾವಣೆ ನಿಲ್ಲಬೇಕೋ ಬೇಡವೋ ಎಂಬ ಚರ್ಚೆ ಆಗಿ ಅನಿವಾರ್ಯವಾಗಿ ಮಠಾಧಿಪತಿಗಳು ಸೇರಿ ಸರ್ವಾನುಮತದ ತೀರ್ಮಾನ ಮಾಡಲಾಗಿದೆ” ಎಂದು ದಿಂಗಾಲೇಶ್ವರ ಸ್ವಾಮೀಜಿ ಸುದ್ದಿಗಾರರಿಗೆ ವಿವರಿಸಿದರು.
“ಬಹುಸಂಖ್ಯಾತ ಲಿಂಗಾಯತ ನಾಯಕರು ತುಳಿತಕ್ಕೊಳಗಾಗಿದ್ದಾರೆ. ಮಹಿಳಾ ಜನಪ್ರತಿನಿಧಿಗಳು ಅವಮಾನಕ್ಕೆ ಒಳಗಾಗಿದ್ದಾರೆ. ಪ್ರಲ್ಹಾದ್ ಜೋಶಿಯವರಿಂದ ವೀರಶೈವ ಲಿಂಗಾಯತ ನಾಯಕರಿಗೆ ಅನ್ಯಾಯವಾಗಿದ್ದು, ಲಿಂಗಾಯತರಿಂದ ಆರಿಸಿ ಬಂದಿರುವ ಇವರು ಲಿಂಗಾಯತ ನಾಯಕ ಬೇಕು ಎಂಬ ಹಿನ್ನೆಲೆಯಲ್ಲಿ ಇಂದು ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ ಸಮಾಜದ ಮೇಲೆ ಚುನಾವಣೆ ಬಂದಾಗ ಮಾತ್ರ ಇವರಿಗೆ ಪ್ರೀತಿ ಯಾಕೆ ಬರುತ್ತದೆ? ಇವರಿಗೆ ಅಧಿಕಾರದ ಮದ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸವಣೂರ ಕಲ್ಮಠದ ಚನ್ನಬಸವ ಸ್ವಾಮೀಜಿ, ಸದಾಶಿವಪೇಟದ ಗದಿಗೇಶ್ವರ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿಶ್ವರ ಸ್ವಾಮೀಜಿ, ವಿಜಯಪುರದ ಸಿದ್ದಲಿಂಗ ದೇವರು, ಸಂಗನಬಸವ ದೇವರು ಶಿವಲಿಂಗಸ್ವಾಮಿ ಮಂಟೂರ, ಚನ್ನಬಸವೇಶ್ವರ ಸ್ವಾಮೀಜಿ ಸವಣೂರು ಸೇರಿದಂತೆ ಪ್ರಮುಖ ಸ್ವಾಮೀಜಿ ಹಾಜರಿದ್ದರು.