2024ರ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಅಳಿವು ಉಳಿವಿನ ಚುನಾವಣೆ. ಈ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದೆ ದೇಶದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ ಎಂದು ಪತ್ರಕರ್ತ ಜಿ ಪಿ ಬಸವರಾಜು ಕಳವಳ ವ್ಯಕ್ತಪಡಿಸಿದರು.
ಚಾಮರಾಜನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಡಾ.ಅಂಬೇಡ್ಕರ್ ಅವರ ಸಂವಿಧಾನವನ್ನು ಗಾಳಿಗೆ ತೂರುವ ಕೆಲಸ 10 ವರ್ಷಗಳಿಂದ ನಡೆಯುತ್ತಿದೆ. ಇ.ಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳಾಗಿ ಕೆಲಸ ಮಾಡುತ್ತಿಲ್ಲ. ಕೇಂದ್ರದ ವಿರುದ್ಧ ದನಿ ಎತ್ತಿದವರ ಮೇಲೆ ಆಯುಧವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಗೆ ದೊಡ್ಡ ಅಪಾಯ ಬಂದೊದಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆರ್ಎಸ್ಎಸ್ ಸಿದ್ಧಾಂತವೇ ಬಿಜೆಪಿ ಸಿದ್ಧಾಂತ ಎಂದು ಹೇಳಿದ್ದಾರೆ. ಅಂದರೆ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಜೋಡಿಸಲಾಗುತ್ತಿದೆ” ಎಂದು ಬೇಸರ ಹೊರಹಾಕಿದರು.
“ಪ್ರಧಾನಿ ನರೇಂದ್ರಮೋದಿಯವರು ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮದವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸೀತೆ, ಲಕ್ಷ್ಮಣ, ಹನುಮಂತನ ಜೊತೆ ಇದ್ದ ರಾಮನನ್ನು ಒಂಟಿ ಮಾಡಲಾಗಿದೆ. ಧರ್ಮವನ್ನು ಸ್ವಾರ್ಥಕ್ಕೆ, ರಾಜಕಾರಣಕ್ಕೆ ಬಳಸಿಕೊಳ್ಳುವುದು ನೀಚತನ. ಪ್ರಧಾನಿ ಸ್ಥಾನದಲ್ಲಿ ಯಾರೂ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿರಲಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಯಾರೂ ಬಿಜೆಪಿಗೆ ಮತ ಹಾಕಬೇಡಿ” ಎಂದು ಜನಾಂದೋಲನಗಳ ಮಹಾಮೈತ್ರಿಯ ಸಂಘಟನಾ ಕಾರ್ಯದರ್ಶಿ ಉಗ್ರನರಸಿಂಹೇಗೌಡ ಹೇಳಿದರು.