ಆರ್. ಅಶೋಕ್ ಅವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಮತ್ತು ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ದೊರಕಿರುವುದು ವಿರೋಧ ಪಕ್ಷದವರ ಜತೆಗಿನ ಹೊಂದಾಣಿಕೆಯಿಂದ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ”ಈ ಹೊಂದಾಣಿಕೆಯಿಂದಲೇ ಅವರು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನೂ ಗೆಲ್ಲಿಸಬಹುದು. ಹಾಗಾಗಿ ಇವರನ್ನು ನೇಮಕ ಮಾಡಲಾಗಿದೆ,” ಎಂದು ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
”ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ 66 ಶಾಸಕರಲ್ಲಿ ಅನೇಕರು ಸ್ವಂತ ಶಕ್ತಿಯ ಮೇಲೆ ಗೆದ್ದಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಂದು ರಾಜಕೀಯದಲ್ಲಿ ಹೊಂದಾಣಿಕೆ ಮಾಡುವವರ ಕಾಲ” ಎಂದು ಅಸಮಾಧಾನ ಹೊರಹಾಕಿದರು.
”ಬಿ.ವೈ. ವಿಜಯೇಂದ್ರ ಅವರನ್ನು ಅಳೆದು, ತೂಗಿ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ,” ಎಂದು ಇದೇ ವೇಳೆ ಲಿಂಬಾವಳಿ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಗೆ ಅಸಮಾಧಾನ ಹೊರಹಾಕಿದ್ದಾರೆ.
ಜಾತಿ ಗಣತಿ ಕುರಿತದ ಕಾಂತರಾಜ ಆಯೋಗದ ವರದಿ ಕುರಿತು ಪ್ರತಿಕ್ರಿಯಿಸಿದ ಲಿಂಬಾವಳಿ, ”ಕಾಂತರಾಜ ಆಯೋಗದ ವರದಿಯ ಮೂಲಪ್ರತಿ ಕಳ್ಳತನವಾಗಿದೆ ಎನ್ನುತ್ತಿದ್ದಾರೆ. ಆ ವರದಿ ಪ್ರತಿ ಕಂಪ್ಯೂಟರ್ನಲ್ಲಿ ಇದ್ದೇ ಇರುತ್ತದೆ. ಅದನ್ನು ಕಳ್ಳತನ ಮಾಡಲು ಆಗಲ್ಲ. ಈ ಆಯೋಗದ ವರದಿಯನ್ನು ರಾಜ್ಯ ಸರಕಾರ ಜಾರಿಗೊಳಿಸಲಿ. ಸದನದೊಳಗೆ ಈ ವಿಷಯ ಚರ್ಚೆಗೆ ತರಲಿ” ಎಂದು ಒತ್ತಾಯಿಸಿದರು.