- ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್
– ಕುಮಾರಸ್ವಾಮಿಯೊಂದಿಗಿನ ಮನಸ್ತಾಪ ಪಕ್ಷ ಬಿಡಲು ಕಾರಣ ಎಂದ ಶ್ರೀನಿವಾಸ್
ಜೆಡಿಎಸ್ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿರುವ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಶ್ರೀನಿವಾಸ್ ಮಾರ್ಚ್ 31ಕ್ಕೆ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತು ನನ್ನ ನಡುವೆ ಆದ ಮನಸ್ತಾಪವೇ ಪಕ್ಷ ಬಿಡಲು ಕಾರಣ ಎಂದು ತಿಳಿಸಿದ್ದಾರೆ.
“ನಾನು ನೋವಿನಿಂದ ಜೆಡಿಎಸ್ಗೆ ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದೇನೆ. ತುಮಕೂರಿನಲ್ಲಿ ಎಚ್ ಡಿ ದೇವೇಗೌಡರನ್ನ ಸೋಲಿಸಿಲ್ಲ. ನಾನು ಪಕ್ಷ ಬಿಡಲ್ಲ ಅಂದರೂ ಅಭ್ಯರ್ಥಿ ಘೋಷಿಸಿದರು ಇದು ನನಗೆ ನೋವು ತರಿಸಿತು. ಈ ಹಿನ್ನೆಲೆಯಲ್ಲಿ ನಾನು ಪಕ್ಷ ಬಿಡುವ ನಿರ್ಧಾರಕ್ಕೆ ಬಂದೆ” ಎಂದು ಶ್ರೀನಿವಾಸ್ ಹೇಳಿದರು.
“ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಇಂದು ರಾಜೀನಾಮೆ ಸಲ್ಲಿಸಿದ್ದೇನೆ”, ನಮ್ಮ ತಾಲೂಕಿನ ಎಲ್ಲ ಮುಖಂಡರ ಜೊತೆ ಮಾತನಾಡಿಯೇ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದೇನೆ” ಎಂದರು.
“ಶಾಸಕನಾಗಲು ಅವಕಾಶ ನೀಡಿದ ಜೆಡಿಎಸ್ ಪಕ್ಷಕ್ಕೆ ಧನ್ಯವಾದ ಹೇಳಿದ ಶ್ರೀನಿವಾಸ್, ಕಳೆದ 20 ವರ್ಷಗಳಿಂದ ನನಗೆ ಜನತಾದಳದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟ ಪಕ್ಷದ ವರಿಷ್ಟ ದೇವೇಗೌಡ, ಕುಮಾರಸ್ವಾಮಿ, ರೇವಣ್ಣನವರಿಗೆ ಕೃತಜ್ಞತೆ ಸಲ್ಲಿಸುವುದಾಗಿ” ಹೇಳಿದರು.
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಕೈಗಾರಿಕಾ ಸಚಿವರಾಗಿ ಶ್ರೀನಿವಾಸ್ ಕಾರ್ಯ ನಿರ್ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಈ ದಿನ ಎಕ್ಸ್ ಕ್ಲ್ಯೂಸಿವ್ | ಕೋಲಾರದಿಂದಲೇ ರಾಹುಲ್ ರಣಕಹಳೆ; ಏ.5ಕ್ಕೆ ‘ಸತ್ಯಮೇವ ಜಯತೆ’
ಕಾಂಗ್ರೆಸ್ ಸಖ್ಯ:
ಮಾರ್ಚ್ 31ಕ್ಕೆ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿರುವ ಗುಬ್ಬಿ ಶ್ರೀನಿವಾಸ್, ಕಳೆದ ನವೆಂಬರ್ನಲ್ಲೇ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು.
ಕಾಂಗ್ರೆಸ್ ಪಕ್ಷ ನಡೆಸಿದ ಒಕ್ಕಲಿಗ ಶಾಸಕರ ಸಭೆಯಲ್ಲೂ ಭಾಗಿಯಾಗಿದ್ದ ಅವರು, ಭಾರತ ಐಕ್ಯತಾಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ್ದರು.