• ಏಪ್ರಿಲ್ 5ರಂದು ಕೋಲಾರದಲ್ಲಿ ಬೃಹತ್ ಸಮಾವೇಶಕ್ಕೆ ಕಾಂಗ್ರೆಸ್ ಸಿದ್ಧತೆ
• ಕೋಲಾರದಲ್ಲಿ ಆದ ಪ್ರಕರಣಕ್ಕೆ ಅಲ್ಲಿಂದಲೇ ತಿರುಗೇಟು ನೀಡಲು ಎಐಸಿಸಿ ಚಿಂತನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿರುವ ಪ್ರಕರಣದ ವಿರುದ್ಧದ ಹೋರಾಟಕ್ಕೆ ಕೋಲಾರವು ಅಖಾಡವಾಗಲಿದೆ ಎಂದು ಈದಿನ.ಕಾಮ್ಗೆ ಮಾಹಿತಿ ದೊರಕಿದೆ. ಏಪ್ರಿಲ್ 5ರಂದು ಕೋಲಾರದಲ್ಲಿ ನಡೆಯಲಿರುವ ‘ಸತ್ಯಮೇವ ಜಯತೇ’ ಸಮಾವೇಶದಲ್ಲಿ ಸ್ವತಃ ರಾಹುಲ್ ಗಾಂಧಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.
2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಭಾಷಣ ಮಾಡುವಾಗ ಮೋದಿ ಉಪನಾಮ ಬಳಸಿ ಮಾತನಾಡಿದ್ದ ಅಂಶವನ್ನು ತೆಗೆದುಕೊಂಡೇ ಇಡೀ ಪ್ರಕರಣ ನಡೆದಿತ್ತು. ಕೋಲಾರದ ಬಿಜೆಪಿ ಕಾರ್ಯಕರ್ತರೊಬ್ಬರು ಗುಜರಾತಿನ ಶಾಸಕರ ಮುಖಾಂತರ ಸೂರತ್ ಕೋರ್ಟ್ನಲ್ಲಿ ರಾಹುಲ್ ಗಾಂಧಿ ಮೇಲೆ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು. ದೂರುದಾರ ಗುಜರಾತಿನ ಶಾಸಕನಾದರೂ, ಸಾಕ್ಷಿ ಕೋಲಾರದ ಬಿಜೆಪಿ ಕಾರ್ಯಕರ್ತನಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯವು ರಾಹುಲ್ ಅವರನ್ನು ದೋಷಿ ಎಂದು ಪರಿಗಣಿಸಿ, 2 ವರ್ಷ ಶಿಕ್ಷೆ ವಿಧಿಸಿತ್ತು. ಇದರ ಆಧಾರದ ಮೇಲೆ 1951ರ ಚುನಾಯಿತ ಪ್ರತಿನಿಧಿಗಳ ಕಾಯ್ದೆ ಬಳಸಿದ ಸ್ಪೀಕರ್, ಒಂದೇ ದಿನದಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ವಜಾಗೊಳಿಸಿದ್ದರು.
ಇದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿ, ದೇಶದ ಬಹುತೇಕ ಎಲ್ಲ ವಿಪಕ್ಷಗಳು ಇದನ್ನು ಖಂಡಿಸಿ ಪ್ರತಿಭಟನೆಗಳನ್ನು ನಡೆಸಿದ್ದವು. ಇದೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಕೋಲಾರವನ್ನೇ ಶಕ್ತಿಕೇಂದ್ರವಾಗಿ ಬಳಸಿಕೊಳ್ಳಲು ಚಿಂತಿಸಿದೆ.
ಈ ಸುದ್ದಿ ಓದಿದ್ದೀರಾ? : ರಾಹುಲ್ ಗಾಂಧಿ ಅನರ್ಹತೆ | ಕಳ್ಳರನ್ನು ಕಳ್ಳರು ಎನ್ನುವ ಸ್ವಾತಂತ್ರ್ಯ ನಮಗಿಲ್ವಾ?: ಸಿದ್ದರಾಮಯ್ಯ
ಕೋಲಾರದಲ್ಲಿ ಲಕ್ಷಾಂತರ ಜನ ಸೇರಿಸಿ ಸಮಾವೇಶ ಮಾಡಿ, ‘ಸತ್ಯಮೇವ ಜಯತೆ’ ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕೆಂದು ನೆನ್ನೆ (26ನೇ ಮಾರ್ಚ್) ನಡೆದ ಸಭೆಯಲ್ಲಿ ತೀರ್ಮಾನಿಸಿರುವುದು ಈದಿನ.ಕಾಮ್ಗೆ ತಿಳಿದುಬಂದಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೆವಾಲ, ಕೋಲಾರದ ಪ್ರಮುಖ ನಾಯಕರಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ ಸೇರಿದಂತೆ ಹಲವರು ಇದರ ಬಗ್ಗೆ ಚರ್ಚಿಸಿ, ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಎಐಸಿಸಿ ವತಿಯಿಂದಲೇ ಬಂದಿರುವ ಈ ಪ್ರಸ್ತಾಪಕ್ಕೆ ರಾಜ್ಯದ ನಾಯಕರ ಅನುಮೋದನೆ ದೊರಕಿದ್ದು ಈಗ ಮತ್ತೆ ಎಐಸಿಸಿ ಅಂಗಳಕ್ಕೆ ಹೋಗಿದೆ.
ಇದಷ್ಟು ಮಾತ್ರವಲ್ಲದೇ, ಸಿದ್ದರಾಮಯ್ಯನವರು ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಈಗಾಗಲೇ ಸುದ್ದಿಯಲ್ಲಿದ್ದ ಕೋಲಾರ ಕ್ಷೇತ್ರವು ಮತ್ತೊಮ್ಮೆ ಸುದ್ದಿಗೆ ಬಂದಿದೆ. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಮಾಜಿ ಮುಖ್ಯಮಂತ್ರಿಯವರು ವರುಣಾ ಮಾತ್ರವಲ್ಲದೇ, ಕೋಲಾರದಿಂದಲೂ ಸ್ಪರ್ಧಿಸುವಂತಹ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.