- ಹಿಜಾಬ್ ಹೋರಾಟದಲ್ಲಿ ಭಾಗವಹಿಸಿದ್ದ ಕನೀಝ್ ಫಾತಿಮಾ
- ರಾಜ್ಯದ ಏಕೈಕ ಮಹಿಳಾ ಮುಸ್ಲಿಂ ಜನಪ್ರತಿನಿಧಿಯ ಮನವಿ
ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೇರಲಾಗಿರುವ ಹಿಜಾಬ್ ನಿಷೇಧವನ್ನು ಕಾಂಗ್ರೆಸ್ ಸರ್ಕಾರ ಕೈ ಬಿಡಲಿದೆ ಎನ್ನುವ ವಿಶ್ವಾಸವನ್ನು ಶಾಸಕಿ ಕನೀಝ್ ಫಾತಿಮಾ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕಲಬುರಗಿ ಉತ್ತರ ಕ್ಷೇತ್ರದ ಶಾಸಕ ಕನೀಝ್ ಫಾತಿಮಾ, “ದೇವರು ಇಚ್ಛಿಸಿದರೆ ನಾವು ಮುಂದಿನ ದಿನಗಳಲ್ಲಿ ಹಿಜಾಬ್ ನಿಷೇಧ ಕೈಬಿಡಲಿದ್ದೇವೆ ಹಾಗೂ ಈ ನಿಷೇಧದಿಂದ ಶಾಲೆಗಳಿಂದ ದೂರ ಉಳಿದಿರುವ ಬಾಲಕಿಯರನ್ನು ಮರಳಿ ಶಾಲೆಗೆ ತರಲು ನಮಗೆ ಸಾಧ್ಯವಾಗಬಹುದು” ಎಂದು ಹೇಳಿದ್ದಾರೆ.
ಜೊತೆಗೆ “ಈ ಗಲಭೆ ಹಿನ್ನೆಲೆಯಲ್ಲಿ ನಾವು ನಮ್ಮ ಎರಡು ಅಮೂಲ್ಯ ವರ್ಷಗಳನ್ನು ಕಳೆದುಕೊಂಡಿದ್ದೇವೆ,” ಎಂದು ಫಾತಿಮಾ ಬೇಸರದಿಂದ ಹೇಳಿದರು.
ಚುನಾವಣೆಯಲ್ಲಿನ ರಾಜ್ಯದಲ್ಲಿ ಕಾಂಗ್ರೆಸ್ ನ ಗೆಲುವಿನ ಶ್ರೇಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ ಫಾತಿಮಾ, “ಖರ್ಗೆ ಅವರು ಪಕ್ಷದ ಅಧ್ಯಕ್ಷರಾದಂದಿನಿಂದ ನಾವು ಬಹಳ ಕಷ್ಟಪಟ್ಟು ಪಕ್ಷಕ್ಕಾಗಿ ಶ್ರಮಿಸಿದ್ದೇವೆ. ಅವರ ಭಾಷಣಗಳು ಜನರ ಮೇಲೆ ದೊಡ್ಡ ಪರಿಣಾಮ ಬೀರಿವೆ, ಅದರ ಫಲಿತಾಂಶ ಈಗ ನಮ್ಮ ಮುಂದೆ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಕರ್ನಾಟಕದ ಪ್ರಬುದ್ಧ ಮತದಾರರಿಂದ ದೇಶಕ್ಕೆ ಬಲವಾದ ಸಂದೇಶ :…
ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಅವರ ಪತ್ನಿ ಫಾತಿಮಾ, 2018ರಲ್ಲಿ ಚುನಾವಣಾ ಕಣಕ್ಕಿಳಿದಿದ್ದರು. ಇದರ ಜೊತೆಜೊತೆಗೆ ಕಲಬುರಗಿಯಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು. ಹಾಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕರಾಗಿರುವ ಇವರು ಈ ಸಾಲಿನ ಚುನಾವಣೆಯಲ್ಲಿ ಗೆದ್ದ ಏಕೈಕ ಮುಸ್ಲಿಮ್ ಮಹಿಳಾ ಶಾಸಕಿ ಎನಿಸಿಕೊಂಡಿದ್ದಾರೆ.
ಈ ಚುನಾವಣೆಯಲ್ಲಿ ಇವರು ಬಿಜೆಪಿಯ ಚಂದ್ರಕಾಂತ್ ಬಿ ಪಾಟೀಲ್ ಅವರನ್ನು 2,712 ಮತಗಳ ಅಂತರದಿಂದ ಸೋಲಿಸಿದ್ದರು. ಫಾತಿಮಾ ಅವರ ಆಶಯವನ್ನು ರಚನೆಯಾಗಲಿರುವ ಕಾಂಗ್ರೆಸ್ ಸರ್ಕಾರ ಯಾವ ರೀತಿ ನೋಡಲಿದೆ ಎನ್ನುವ ಕುತೂಹಲ ಎಲ್ಲರದ್ದು.