- ʼತಮಿಳು ಭಾಷಿಕರನ್ನು ಪ್ರಚೋದಿಸಿ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಮುನಿರತ್ನʼ
- ʼರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಆತಂಕʼ
ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ಬಿಜೆಪಿ ಶಾಸಕ ಮುನಿರತ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಕರೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ದೂರು ನೀಡಿದ್ದಾರೆ.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ವಾರ್ಡಿನ ಖಾತಾನಗರಕ್ಕೆ ಯಾರಾದರೂ ಬಂದರೆ “ಹೊಡೆದು ಕಳಿಸಿರಿ” ಎಂದು ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ.
“ಸಾರ್ವಜನಿಕ ಸಭೆಯಲ್ಲಿ ನಿಂತು ತಮಿಳು ಭಾಷಿಕರನ್ನು ಪ್ರಚೋದಿಸಿ ಚುನಾವಣೆಯ ಸಮಯದಲ್ಲಿ ನೇರವಾಗಿ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಲೆತ್ನಿಸಿದ್ದಾರೆ” ಎಂದು ಕುಸುಮಾ ಕಿಡಿಕಾರಿದ್ದಾರೆ.
ವಿಧಾನಸಭೆ ಚುನಾವಣೆ ಕಾವು ಏರುತ್ತಿರುವ ಹೊತ್ತಲ್ಲಿ ಮುನಿರತ್ನ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಹುಟ್ಟಿಸುತ್ತದೆ ಎಂದು ಕುಸುಮಾ ನೇರವಾಗಿ ಶಾಸಕರ ವಿರುದ್ಧ ಆರೋಪಿಸಿದ್ದಾರೆ.
“ಕನ್ನಡ ನೆಲದಲ್ಲಿ ನಿಂತು ತಮಿಳು-ಕನ್ನಡ ಮಾತನಾಡುವವರ ಮಧ್ಯೆ ತಮಿಳಿನಲ್ಲಿ ದ್ವೇಷದ ಕಿಚ್ಚು ಹೊತ್ತಿಸಿ `ಹಿಂಸಿಸಿ, ಮುಂದಿನದು ನಾನು ನೋಡ್ಕೊತೀನಿ’ ಎಂಬ ಬಹಿರಂಗ ಪ್ರಚೋದನೆಯಿಂದ ಯಾರಿಗಾದರೂ ಪ್ರಾಣಹಾನಿಯಾದರೆ ಯಾರು ಹೊಣೆ” ಎಂದು ಕುಸುಮಾ ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? `ಯಾವ ಮೋದಿನೂ ಇಲ್ಲ, ಪಾದಿನೂ ಇಲ್ಲ’ ಬಿಜೆಪಿ ಶಾಸಕನ ಆಡಿಯೋ ವೈರಲ್
“ತನ್ನ ಬೆಂಬಲಿಗರ ಹಾಗೂ ಸಾಮಾನ್ಯ ಜನರ ಜೀವಕ್ಕೆ ಇವರ ಬಳಿ ಬೆಲೆ ಇಲ್ಲವೇ? ತನ್ನ ಬೆಂಬಲಿಗರಿಗೆ ಹಿಂಸಾಚಾರ ಮಾಡಿ ಎಂದು ಕರೆ ಕೊಡುವ ಶಾಸಕ ತನ್ನ ಮನೆಯ ಮಕ್ಕಳಿಗೂ ಇದನ್ನೇ ಹೇಳಿ ಕಳುಹಿಸುತ್ತಾರೆಯೇ? ಕಂಡವರ ಮನೆಯ ಮಕ್ಕಳನ್ನು ಬಾವಿಗೆ ತಳ್ಳಿ ಆಳ ಅಳೆವ ಮನಸ್ಥಿತಿಯ ವ್ಯಕ್ತಿಯೊಬ್ಬ ಶಾಸಕನಾಗಲು ಅರ್ಹನೇ? ಸಮಾಜದ ಸ್ವಾಸ್ಥ್ಯ ಹಾಳುಗೆಡುವುವ ವಿಕೃತ ಮನಸ್ಸುಳ್ಳ ಜನಪ್ರತಿನಿಧಿಗಳ ನಡುವೆ ಸಾಮಾನ್ಯ ಜನರು ಜೀವನ ನಡೆಸಲು ಸಾಧ್ಯವೇ?” ಎಂದು ಕುಸುಮಾ ಹರಿಹಾಯ್ದಿದ್ದಾರೆ.
“ಮುನಿರತ್ನ ಹೇಳಿಕೆ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಬೆಂಗಳೂರು ಕಮಿಷನರ್ ಅವರಿಗೆ ದೂರು ನೀಡಲಾಗಿದೆ. ಅವಶ್ಯಕ ಮುಂಜಾಗ್ರತಾ ಕ್ರಮಗಳಿಂದ ಶಾಂತಿಯುತ ಹಾಗೂ ನ್ಯಾಯಯುತ ಚುನಾವಣೆ ನಡೆಸಲು ಕೋರಲಾಗಿದೆ” ಎಂದು ಕುಸುಮಾ ತಿಳಿಸಿದ್ದಾರೆ..
ಮುನಿರತ್ನ ಭಾಷಣದ ವಿಡಿಯೋ ವೈರಲ್:
“ಯಾರಾದರೂ ಒಳಗಡೆ ಬಂದರೆ ಓಡಾಡಿಸಿಕೊಂಡು ಹೊಡೆಯಿರಿ, ಮಿಕ್ಕಿದ್ದು ನಾನು ನೋಡ್ಕೊತೀನಿ. ಯಾವ ರೀತಿ ಹೊಡೆಯಬೇಕು ಎಂದರೆ ಅವರು ತಿರುಗಿ ನೋಡಬಾರದು. ಯಾರ್ಯಾರು ಹೊಡಿತೀರಾ ಕೈ ಎತ್ತಿ ನೋಡೋಣ” ಎಂದು ಮುನಿರತ್ನ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.