- ‘ಸವದಿ ಮುಂದೊಂದು ದಿನ ಪಶ್ಚಾತ್ತಾಪ ಪಡುತ್ತಾರೆ’
- ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲು 20 ವರ್ಷ ಬೇಕೆಂದ ಸಿಂಗ್
ಯಾರೋ ನಾಲ್ಕು ಮಂದಿ ಪಕ್ಷ ಬಿಟ್ಟು ಹೋದರೆ ಏನೂ ನಷ್ಟ ಆಗಲ್ಲ. ಆದರೆ, ಪಕ್ಷ ಬಿಟ್ಟು ಹೋದವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಯಾಗುವ ನಿರ್ಧಾರ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅರುಣ್ ಸಿಂಗ್ ಅವರು ಸವದಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
“ಬಿಜೆಪಿ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು 20 ವರ್ಷಗಳಾಗಬಹುದು. ಲಕ್ಷ್ಮಣ್ ಸವದಿ ಅವರು ಇನ್ನೂ 10 ವರ್ಷಗಳಾದರೂ ರಾಹುಲ್ ಗಾಂಧಿ ಅವರ ಮುಖ ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಲಕ್ಷ್ಮಣ ಸವದಿ ಅವರ ನಿರ್ಧಾರ ಸ್ವಾರ್ಥದಿಂದ ಕೂಡಿದೆ ಎಂದು ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
“ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾವು ಹೊಸ ಜನರೇಷನ್ಗೆ ಅವಕಾಶ ನೀಡಿದ್ದೇವೆ. ಬಿಜೆಪಿ ಹೊಸ ತಲೆಮಾರಿನ ಪಕ್ಷವನ್ನಾಗಿ ಮಾಡಲಿದ್ದೇವೆ. ಲಕ್ಷ್ಮಣ ಸವದಿಯವರಿಗೆ ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ. ಕಾಂಗ್ರೆಸ್ ಸೇರಲು ನಿರ್ಧರಿಸಿ ಬಹಳ ದೊಡ್ಡ ತಪ್ಪು ಮಾಡಿದ್ದಾರೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂವಿಧಾನ ಜಾರಿಯಾಗದಿದ್ದರೆ ಊರಲ್ಲಿ ಕುರಿ ಮೇಯಿಸುತ್ತಿದ್ದೆ : ಸಿದ್ದರಾಮಯ್ಯ
“ಲಕ್ಷ್ಮಣ್ ಸವದಿ ಮುಂದೊಂದು ದಿನ ಪಶ್ಚಾತ್ತಾಪ ಪಡುತ್ತಾರೆ. ಈ ಹಿಂದೆ ಸವದಿ ಅಥಣಿ ಕ್ಷೇತ್ರದಿಂದ ಸೋತಿದ್ದರು. ಸವದಿಯನ್ನು ಎಂಎಲ್ಸಿ ಮಾಡಿ ಉಪಮುಖ್ಯಮಂತ್ರಿ ಮಾಡಿದ್ದೆವು” ಎಂದು ಹೇಳಿದ್ದಾರೆ.
ಲಕ್ಷ್ಮಣ ಸವದಿ ಅವರ ಕಾಂಗ್ರೆಸ್ ಸೇರ್ಪಡೆಯಾಗಿರುವ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಸವದಿ ಅವರು ಕಾಂಗ್ರೆಸ್ಗೆ ಹೋಗುತ್ತಿರುವುದು ದುಃಖ ತರಿಸಿದೆ. ಅವರ ಜೊತೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ” ಎಂದಿದ್ದಾರೆ.
“ಲಕ್ಷ್ಮಣ ಸವದಿಗೆ ಕಾಂಗ್ರೆಸ್ನಲ್ಲಿ ಭವಿಷ್ಯ ಕಾಣಿಸಿದೆ, ಹಾಗಾಗಿ ಹೋಗಿದ್ದಾರೆ. ಕಾಂಗ್ರೆಸ್ಗೆ 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಗತಿಯಿಲ್ಲ. ಅದಕ್ಕಾಗಿ ಬೇರೆ ಪಕ್ಷಗಳಿಂದ ಕೆಲವರನ್ನು ಸೇರಿಸಿಕೊಳ್ಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.