ಮುಂಬರುವ ಲೋಕಸಭಾ ಚುನಾವಣೆಯ ಮುಂಚೆಯೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿಚ್ಚು ಹೊತ್ತಿಕೊಂಡಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಪ್ರಬಲ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್ ನಿರತವಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪುನಃ ಐದನೇ ಬಾರಿ ಪ್ರಲ್ಹಾದ್ ಜೋಶಿ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಪ್ರಶ್ನೆಯಲ್ಲಿಯೇ ಕ್ಷೇತ್ರದ ಜನತೆ ಕಾತರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಿಂದ ಹಲವು ಆಕಾಂಕ್ಷಿಗಳ ಹೆಸರುಗಳು ಕೇಳಿಬರುತ್ತಿವೆ. ಅದರಲ್ಲಿ ಕೆಲವರು ಆಕಾಂಕ್ಷಿ ಅಲ್ಲದಿದ್ದರೂ ಹೈಕಮಾಂಡ್ ಮತ್ತು ಪಕ್ಷದ ಆದೇಶದ ಮೇರೆಗೆ ಕಾರ್ಯ ನಿರ್ವಹಿಸುತ್ತೇವೆ ಅನ್ನುತ್ತಿದ್ದಾರೆ. ಇನ್ನು ಕೆಲವರು ಟಿಕೆಟ್ ಗಳಿಕೆಗಾಗಿ ಭಾರೀ ಕಸರತ್ತು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಿಂದ ಆಕಾಂಕ್ಷಿಗಳ ಪಟ್ಟಿ ಮತ್ತು ಕಿರು ಪರಿಚಯ ಇಂತಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಟಿಕೆಟ್ ಆಕಾಂಕ್ಷಿ ಅಲ್ಲದಿದ್ದರೂ, ಇವರ ಅನೇಕ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ, ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದನ್ನು ಗಮನಿಸಿದ ಕ್ಷೇತ್ರದ ಮತದಾರರು ಲಾಡ್ ಅವರಿಗೇ ಲೊಕಸಭಾ ಟಿಕೆಟ್ ನೀಡಬೇಕು ಮತ್ತು ಅವರಿಗೆ ಟಿಕೆಟ್ ನೀಡಿದರೆ ಈ ಬಾರಿಯ ಚುನಾವಣೆಯಲ್ಲಿ ಭಾರೀ ಪೈಪೋಟಿ ಎದುರಾಗುತ್ತದೆ. ವಾಜಪೇಯಿ ಅಲೆ ಹಾಗೂ ಮೋದಿ ಅಲೆಯಿಂದ ಅಧಿಕಾರಕ್ಕೆ ಬಂದ ಜೋಶಿಗೆ ಎದುರಾಳಿಯಾಗಿ ಸಂತೋಷ್ ಲಾಡ್ ಸ್ಪರ್ಧಿಸಿದರೆ ಗೆದ್ದೆ ಗೆಲ್ಲುತ್ತಾರೆ ಎಂಬ ಗಟ್ಟಿ ಆಶಾಭಾವ ಮತದಾರರಲ್ಲಿ ಒಡಮೂಡಿದೆ.
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶೀವಲೀಲಾ ಕುಲಕರ್ಣಿ ಅವರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚರ್ಚೆ ನಡೆದಿದೆ. ಶಾಸಕ ವಿನಯ ಕುಲಕರ್ಣಿಯನ್ನು ಕ್ಷೇತ್ರಕ್ಕೆ ಕಾಲಿಡದಂತೆ ಪ್ರಲ್ಹಾದ್ ಜೋಶಿ ಕುತಂತ್ರ ಮಾಡಿದ್ದಾರೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಈ ವಿಷಯದ ಕುರಿತು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಭಾರಿ ಚರ್ಚೆಗೂ ಒಳಪಟ್ಟಿತ್ತು.
ಹಲವಾರು ಸಾಮಾಜಿಕ ಸೇವೆಗಳಿಂದ ಗುರುತಿಸಿಕೊಂಡಿರುವ, ಜೊತೆಗೆ ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಳಿಯ ಅಂದರೆ ಮಗಳ ಗಂಡ ರಜತ್ ಉಳ್ಳಾಗಡ್ಡಿಮಠ ಲೋಕಸಭಾ ಚುನಾವಣೆಯ ಆಕಾಂಕ್ಷಿ ಆಗಿದ್ದಾರೆ. ಮತ್ತು ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಬಂದಾಗ ಉದಾರಿಯಾಗಿ ಶೆಟ್ಟರ್ ಗೆ ಬಿಟ್ಟುಕೊಟ್ಟು ಮತ್ತು ಶೆಟ್ಟರ್ ಪರ ಪ್ರಚಾರಕ್ಕೂ ಬೆಂಬಲಿಸಿದ್ದರು. ಈಗ ಲೋಕಸಭೆ ಟಿಕೆಟ್ ಪಡೆಯಬೇಕೆಂದು ಭಾರೀ ಪ್ರಯತ್ನ ನಡೆಸಿದ್ದಾರೆ.
ಲೋಕಸಭಾ ಟಿಕೆಟ್ ಆಕಾಂಕ್ಷಿಯಾದ ಕಾಂಗ್ರೆಸ್ ಯುವ ನಾಯಕ ವಿನೋದ್ ಅಸೂಟಿಗೆ ಟಿಕೆಟ್ ನೀಡಬೇಕೆಂದು ತಮ್ಮ ಅಭಿಮಾನಿಗಳು ಮತ್ತು ಸ್ವಜಾತಿಯವರ ಬೇಡಿಯಾಗಿದೆ. ಈಗಾಗಲೆ ವಿನೋದ್ ಅಸೂಟಿ ಅವರನ್ನು ಕ್ರೀಡಾ ಇಲಾಖೆ ಪ್ರಾಧಿಕಾರದ ಅಧ್ಯಕ್ಷನನ್ನಾಗಿ ನೇಮಕ ಮಾಡಿರುವುದರಿಂದ ಲೋಕಸಭಾ ಟಿಕೆಟ್ ಸಿಗುವ ಸಾಧ್ಯತೆ ಸಂಪೂರ್ಣ ಕಡಿಮೆ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಇನ್ನು ಧಾರವಾಡ ಕ್ಷೇತ್ರವನ್ನು ತಮ್ಮ ಕೈವಶ ಮಾಡಿಕೊಳ್ಳಬೇಕೆಂದು ಅನೇಕರು ಆಕಾಂಕ್ಷಿ ಆಗಿದ್ದಾರೆ. ಅದರಲ್ಲಿ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರ ಸಹೋದರ ಶರಣಪ್ಪ ಕೊಟಗಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಮತ್ತು ಕಾಂಗ್ರೆಸ್ ಮುಖಂಡರೂ ಹೌದು, ಮಾಜಿ ಲೋಕಸಭಾ ಸದಸ್ಯ ಐ.ಜಿ. ಸನದಿ ಅವರ ಮಗ ಜಾಕೀರ್ ಸನದಿ, ಚಂದ್ರಶೇಖರ್ ಮೆಣಸಿನಕಾಯಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ನಿಂದ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಸಿಗುತ್ತದೆ, ಯಾರು ಕಣಕ್ಕಿಳಿಯುತ್ತಾರೆ ಎಂದು ಜನರು ಕಾದು ನೋಡುತ್ತಿದ್ದಾರೆ.