ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಮುಂಬರುವ ಲೋಕಸಭಾ ಸಮೀಪದಲ್ಲಿ ಪುನಃ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಆದರೆ ಅವರಂದುಕೊಂಡ ಕಾರ್ಯ ಆಗಲೇ ಇಲ್ಲ. ಅರ್ಥಾತ್ ಲೋಕಸಭಾ ಸ್ಪರ್ಧೆಗೆ ಟಿಕೆಟ್ ಅವರ ಕೈತಪ್ಪಿ ಹೋಯಿತು. ಇನ್ನು ಉಳಿದಿರುವ ಬೆಳಗಾವಿ ಕ್ಷೇತ್ರದ ಮೇಲೆ ಆಶಾಭಾವ ಮೂಡಿಸಿಕೊಂಡು ಶೆಟ್ಟರ್ ಕುಳಿತಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಈ ಕುರಿತು ಮಾರ್ಚ್ 14 ರಂದು ಶೆಟ್ಟರ್ ಸುದ್ಧಿಗಾರರೊಂದಿಗೆ ಮಾತನಾಡಿ, “ಲೋಕಸಭಾ ಚುನಾವಣೆಯ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆ ಆಗದಿರುವುದಕ್ಕೆ ಈಗಲೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲಿ ಮಾತನಾಡಬೇಕೊ ಅಲ್ಲಿಯೇ ಮಾತನಾಡುತ್ತೇನೆ” ಎಂದು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ತೋರ್ಪಡಿಸಿದ್ದಾರೆ.
ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳ ಟಿಕೆಟ್ ಕೈತಪ್ಪಿದ ಕಾರಣ, ಬೆಳಗಾವಿ ಬಗ್ಗೆ ಹೆಚ್ಚು ಗಮಹರಿಸಿದ್ದಾರೆ. ಹೈಕಮಾಂಡ್ ತೀರ್ಮಾನದ ಬಳಿಕ ಶೆಟ್ಟರ್ ಒಂದು ನಿರ್ಣಯಕ್ಕೆ ಬರುವ ಮಾತು ವ್ಯಕ್ತವಾಗುತ್ತಿದೆ.
ಒಂದು ವೇಳೆ ಬೆಳಗಾವಿ ಟಿಕೆಟ್ ಕೂಡಾ ಶೆಟ್ಟರ್ಗೆ ಸಿಗದಿದ್ದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನೇ ಶೆಟ್ಟರ್ ತೆಗೆದುಕೊಳ್ತಾರಾ?, ಇಲ್ಲಾ ಬಂಡಾಯ ಏಳುತ್ತಾರಾ? ಎಂಬ ಗುಸುಗುಸುಗಳು ಆರಂಭವಾಗಿದ್ದು, ಚರ್ಚೆಗಳೂ ನಡೆದಿವೆ. ʼಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆʼ ಎನ್ನುತ್ತಲೇ ಟಿಕೆಟ್ಗಾಗಿ ಬೇಡಿಕೆಯಿಟ್ಟ ಶೆಟ್ಟರ್ ಈಗ ತಮ್ಮದೇ ಬಿಜೆಪಿ ನಾಯಕರ ಮೇಲೆ ಆಂತರಿಕವಾಗಿ ಆಕ್ರೋಶ ಹೊರಹಾಕುತ್ತಿದ್ದು, “ಟಿಕೆಟ್ ಹಂಚಿಕೆಯ ವಿಚಾರದಲ್ಲಿ ತಮ್ಮದೇ ಪಕ್ಷದ ನಾಯಕರು, ಯಾರು ಏನು ಮಾಡುತ್ತಿದ್ದಾರೆಂಬುದು ನನಗೆ ಚನ್ನಾಗಿ ಗೊತ್ತಿದೆ” ಎಂದು ಬಿಜೆಪಿ ನಾಯಕರ ವಿರುದ್ಧ ಗರಂ ಆಗಿದ್ದಾರೆ.
ಇದನ್ನೂ ಓದಿದ್ದೀರಾ? ಧಾರವಾಡ ಲೋಕಸಭಾ ಕ್ಷೇತ್ರ | ಜಗದೀಶ್ ಶೆಟ್ಟರ್ ಗೆ ನಿರಾಸೆ, ಪ್ರಲ್ಹಾದ್ ಜೋಶಿ ಮತ್ತೆ ಕಣಕ್ಕೆ
ಅವಕಾಶವಾದಿಯಂತೆ ಪಕ್ಷದಿಂದ ಪಕ್ಷಕ್ಕೆ ತಮಗಿಷ್ಟ ಬಂದಂತೆ ಜಿಗಿಯುವ ಶೆಟ್ಟರ್ಗೆ ಟಿಕೆಟ್ ಸಿಗಕೂಡದು ಎಂಬುದು ಕೆಲವರ ವಾದ ಮತ್ತು ಪದೇ ಪದೇ ಬ್ರಾಹ್ಮಣರಿಗೇ ಟಿಕೆಟ್ ನೀಡುತ್ತಿರುವ ಬಗ್ಗೆ ಸ್ಪಪಕ್ಷದ ಲಿಂಗಾಯತ ನಾಯಕರು, ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿದೆ. ಉಣಕಲ್ನ ಚನ್ನಬಸವಸಾಗರ ನಾಮಕರಣ ವಿಚಾರದಲ್ಲಿ ಜೋಶಿ ಕುರಿತು ಲಿಂಗಾಯತ ಸಂಘಟನೆಗಳ ಅಸಮಾಧಾನ ಮತ್ತು ಲಿಂಗಾಯತರಿಗೆ ಟಿಕೆಟ್ ನೀಡದ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಮುಂದಿನ ತಿರುವು ಏನು ಪಡೆಯುವುದೊ? ಶೆಟ್ಟರ್ ಬಂಡಾಯ ಏಳುತ್ತಾರಾ? ಮತ್ತೆ ಕಾಂಗ್ರೆಸ್ ಕಡೆಗೆ ವಾಲುತ್ತಾರಾ? ಕಾದು ನೋಡಬೇಕಿದೆ.