ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಈಗ ಲೋಕಸಭೆ ಚುನಾವಣೆಗೂ ಮುನ್ನ ದೇಶಕ್ಕೂ ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ನೀಡುತ್ತಿದೆ. ಅವುಗಳಲ್ಲಿ ಪ್ರಮುಖ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ರಾಜಸ್ಥಾನದ ಬನ್ಸಾರ್ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ರಾಹುಲ್ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಐದು ಗ್ಯಾರಂಟಿಯಲ್ಲಿ ಮೊದಲನೆಯ ಗ್ಯಾರಂಟಿ ಉದ್ಯೋಗವಾಗಿದೆ. ಪದವಿ ಮತ್ತು ಡಿಪ್ಲೋಮಾ ಪಡೆದ 25 ವರ್ಷಕ್ಕಿಂತ ಕೆಳವಯಸ್ಸಿನ ಯುವಕರಿಗೆ ಉದ್ಯೋಗದ ಭರವಸೆಯನ್ನು ನೀಡುವುದು ಮೊದಲ ಗ್ಯಾರಂಟಿ ಆಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಕಾಂಗ್ರೆಸ್ನ ಎರಡನೆಯ ಗ್ಯಾರಂಟಿ ಅಪ್ರೆಂಟಿನ್ಶಿಪ್ ಆಗಿದೆ (ಅಪ್ರೆಂಟಿನ್ಶಿಪ್ ಎಂದರೆ ಸರ್ಕಾರಿ ಕಚೇರಿಯಲ್ಲಿ ಪದವೀಧರರಿಗೆ ಮತ್ತು ಡಿಪ್ಲೋಮಾ ಹೊಂದಿರುವವರಿಗೆ ತರಬೇತಿ ನೀಡುವುದು ಆಗಿದೆ). “ಸರ್ಕಾರಿ ಕಚೇರಿಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಅಪ್ರೆಂಟಿನ್ಶಿಪ್ ನೀಡಲಾಗುತ್ತದೆ. ಇದನ್ನು, ಮನರೇಗಾ ರೀತಿಯಲ್ಲೇ ಕಾನೂನಾಗಿ ಮಾಡಲಾಗುತ್ತದೆ. ಒಂದು ವರ್ಷದ ತರಬೇತಿ ಅವಧಿಯಲ್ಲಿ ವಾರ್ಷಿಕ ಒಂದು ಲಕ್ಷ ರೂ. ಭತ್ಯೆ ನೀಡಲಾಗುತ್ತದೆ. ದೇಶದಲ್ಲಿರುವ ಎಲ್ಲ ಯುವಕರಿಗೆ ಅಪ್ರೆಂಟಿನ್ಶಿಪ್ ಅವಕಾಶವನ್ನು ಕಾಂಗ್ರೆಸ್ ನೀಡಲಿದೆ” ಎಂದು ಹೇಳಿದ್ದಾರೆ.
ಮೂರನೆಯದು, ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ, “ಭಾರತದಲ್ಲಿ 30 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿಯಿವೆ. ನಾವು ಅಧಿಕಾರಕ್ಕೆ ಬಂದ ಬಳಿಕ ಉದ್ಯೋಗ ನೀಡುವುದಕ್ಕೆ ಆದ್ಯತೆ ನೀಡುತ್ತೇವೆ. 30 ಲಕ್ಷ ಉದ್ಯೋಗವನ್ನು ಯುವಜನರಿಗೆ ನೀಡುತ್ತೇವೆ,” ಎಂದರು.
ನಾಲ್ಕನೆಯದು, ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕಠಿಣ ಕ್ರಮ. “ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನನ್ನು ಜಾರಿ ಮಾಡುತ್ತದೆ. ಹಾಗೆಯೇ ಕಾಂಗ್ರೆಸ್ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನೇರವಾಗಿ ನಡೆಸಲಿದೆ. ಅದರಿಂದಾಗಿ ಯಾವುದೇ ಹೊರಗುತ್ತಿಗೆ ಇರಲಾರದು,” ಎಂದು ತಿಳಿಸಿದರು.
ಇನ್ನು ಗಿಗ್ ಕಾರ್ಮಿಕರಿಗೆ (ನಿರ್ದಿಷ್ಟ ಅವಧಿಗೆ ದುಡಿಯುವವರು) ಸ್ಟಾರ್ಟ್ಅಪ್ ಫಂಡ್ಗಳು ಮತ್ತು ಸಾಮಾಜಿಕ ಭದ್ರತೆಯು ಐದನೇ ಗ್ಯಾರಂಟಿಯಾಗಿದೆ.
“ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇರಲಿದ್ದು, ಈ ನಿಟ್ಟಿನಲ್ಲಿ ದೇಶದಲ್ಲಿ ಕಾನೂನು ಜಾರಿ ಮಾಡಲಾಗುತ್ತದೆ. ಉದ್ಯಮವನ್ನು ಮಾಡಲು ಸಿದ್ಧರಿರುವ ಯುವಕರಿಗೆ ಆರ್ಥಿಕ ಸಹಾಯ ಮಾಡಲಾಗುವುದು, ನಾವು ಇದಕ್ಕಾಗಿ 5000 ಕೋಟಿ ರೂಪಾಯಿ ಸ್ಟಾರ್ಟ್ಅಪ್ ಫಂಡ್ ಮೀಸಲಿಡುತ್ತೇವೆ,” ಎಂದು ಐದನೇ ಗ್ಯಾರಂಟಿಯನ್ನು ರಾಹುಲ್ ಗಾಂಧಿ ವಿವರಿಸಿದ್ದಾರೆ.